ಸಂಕ್ರಾಂತಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕನಸು ನನಸು
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳು ಕಾದುಕಾದು ಸುಸ್ತಾಗಿದ್ದಾರೆ. ತೆರೆಯ ಮೇಲೆ ದ್ರಾಕ್ಷಿ, ಹೂವು, ಹಣ್ಣು ಕಾಯಿ ನೋಡದೆ ತತ್ತರಿಸಿಹೋಗಿದ್ದಾರೆ. ಅವೆಲ್ಲವನ್ನೂ ರೊಮ್ಯಾಂಟಿಕ್ ಆಗಿ ತೋರಿಸುವ ಕಲೆ ರವಿಚಂದ್ರನ್ ಅವರಿಗೆ ಬಿಟ್ಟರೆ ಇನ್ಯಾರಿಗೆ ಗೊತ್ತು. 'ಕ್ರೇಜಿಲೋಕ' ಚಿತ್ರದ ಬಳಿಕ ಅವರ ಒಂದೇ ಒಂದು ಚಿತ್ರವೂ ಬಿಡುಗಡೆಯಾಗಿಲ್ಲ. 'ಮಂಜಿನಹನಿ' ಧ್ಯಾನದಲ್ಲೇ ರವಿಮಾಮ ಕಳೆದು ಹೋದರು. ಈಗ ಸುದೀಪ್ ಜೊತೆಗೆ 'ಮಾಣಿಕ್ಯ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ಕ್ರೇಜಿಸ್ಟಾರ್ ಸಹ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಸಂಕ್ರಾಂತಿಗೆ ಪ್ರೇಕ್ಷಕರ ಮುಂದೆ ತರಲು ರವಿಚಂದ್ರನ್ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಎಡಿಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಸಂಗೀತ ಹಾಗೂ ನಿರ್ದೇಶನ ರವಿಚಂದ್ರನ್ ಅವರದು.
ರವಿಚಂದ್ರನ್ ಅವರು ಈ ಚಿತ್ರವನ್ನು ಅಭಿಮಾನಿಗಳ ಅಭಿಮಾನಕ್ಕಾಗಿ ಮಾಡುತ್ತಿದ್ದಾರೆ. ಚಿತ್ರದ ಯಶಸ್ವಿಗೆ ಕ್ರೇಜಿಸ್ಟಾರ್ ಅಭಿಮಾನಿಗಳು ಇಪ್ಪತ್ತು ಜಿಲ್ಲೆಗಳಲ್ಲಿ ಬೈಕ್ ರ್ಯಾಲಿಯನ್ನೂ ಹಮ್ಮಿಕೊಂಡಿದ್ದಾರೆ. ಹೊಸವರ್ಷಕ್ಕೆ ಬೈಕ್ ರ್ಯಾಲಿ ನಡೆಯಲಿದೆ. 'ಮಲ್ಲ' ಚಿತ್ರದ ಬಳಿಕ ಪ್ರಿಯಾಂಕಾ ಉಪೇಂದ್ರ ಹಾಗೂ ರವಿ ಮತ್ತೆ ಒಂದಾಗುತ್ತಿರುವ ಚಿತ್ರವಿದು.ರವಿಚಂದ್ರನ್ ಅವರು ಕಳೆದೆರಡು ವರ್ಷಗಳಿಂದ ಹುಟ್ಟುಹಬ್ಬ ಸಂಭ್ರಮವನ್ನೂ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲಿಲ್ಲ. ಒಟ್ಟಾರೆಯಾಗಿ ಕ್ರೇಜಿಸ್ಟಾರ್ ಅಭಿಮಾನಿಗಳು ಸಾಕಷ್ಟು ಕಾದಿದ್ದಾರೆ. ಸಂಕ್ರಾಂತಿಗೆ ಅವರಿಗೆ ಎಳ್ಳುಬೆಲ್ಲ ಗ್ಯಾರಂಟಿ ಸಿಗಲಿದೆ. ಅದು ಕ್ರೇಜಿಸ್ಟಾರ್ ಚಿತ್ರದ ಮೂಲಕವಾಗಲಿ ಎಂಬುದು ನಮ್ಮ ಆಶಯ. (ಒನ್ಇಂಡಿಯಾ ಕನ್ನಡ)


Click it and Unblock the Notifications












