ಸುರೇಶ್ ಜಿ ಕೆಟಗರಿ ಸೈಟಿನ ಬಗ್ಗೆ ರವಿ ರಿಯಾಕ್ಷನ್
ರಾಜಕೀಯದ ಬಗ್ಗೆ ಏನಾದರೂ ಮಾತನಾಡಿ ಎಂದರೆ, ನನಗೆ ಎಬಿಸಿಡಿ ಸಹ ಗೊತ್ತಿಲ್ಲ ಎನ್ನುತ್ತಾರೆ ರವಿಚಂದ್ರನ್. ಆದರೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಧುರೀಣರಲ್ಲಿ ಒಂದಷ್ಟು ಮಂದಿ ರವಿಗೆ ಆಪ್ತಮಿತ್ರರೂ ಹೌದು. ಆದರೂ ರವಿ ಮಾತ್ರ ರಾಜಕೀಯ ಬಗ್ಗೆ ದಿವ್ಯ ಮೌನ.
ಜಿ ಕೆಟಗರಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವೋಕೇಟ್ ಜನರಲ್ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಪಕ್ಷದ ಕಾರ್ಯಕರ್ತರು, ಆರ್ಎಸ್ಎಸ್ ಮುಖಂಡರ ಒತ್ತಡಕ್ಕೆ ಮಣಿದು ತಮ್ಮ ರಾಜೀನಾಮೆ ವಾಪಸ್ ಪಡೆದಿರುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ರವಿ ಪ್ರತಿಕ್ರಿಯಿಸಿದ್ದು ಹೀಗೆ.
ಅಟ್ಲಾಂಟಾ ನಾಗೇಂದ್ರ ಹಾಗೂ ಶರಣ್ ನಿರ್ಮಿಸುತ್ತಿರುವ 'ರ್ಯಾಂಬೋ' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ರವಿಚಂದ್ರನ್, "ರಾಜಕೀಯವನ್ನು ನಾನು ಅರ್ಥ ಮಾಡಿಕೊಂಡಿಲ್ಲ. ಆದರೆ ಪ್ರಾಮಾಣಿಕ ರಾಜಕಾರಣಿ ಸುರೇಶ್ ಕುಮಾರ್ ಅವರನ್ನು ಅವಮಾನಿಸಿದ್ದು ಸರಿಯಲ್ಲ" ಎಂದರು.
ಅವರು ಒಂದು ವೇಳೆ ಜಿ ಕ್ಯಾಟಗರಿ ನಿವೇಶನ ಪಡೆದಿದ್ದರೂ ರಾಜೀನಾಮೆ ನೀಡಬಾರದಿತ್ತು. ಅದರಲ್ಲಿ ತಪ್ಪೇನಿದೆ? ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಾಮಾಣಿಕ ರಾಜಕಾರಣಿ ಬೆಂಗಳೂರಿನಲ್ಲಿ ಇನ್ನೂ ಒಂದು ಮನೆ ಕಟ್ಟಿಕೊಳ್ಳಬಾರದು ಎಂದರೆ ಹೇಗೆ? ಕೆಲವು ರಾಜಕಾರಣಿಗಳು ಸಾರ್ವಜನಿಕರ ಹಣ ಕೊಳ್ಳೆಹೊಡೆದು ಬೆಂಗಳೂರಿನ ಹೊರಗೆ ಬೇಜಾನ್ ಆಸ್ತಿ ಮಾಡಿಟ್ಟಿದ್ದಾರೆ.
ನನಗನ್ನಿಸುತ್ತದೆ ಸರ್ಕಾರದಲ್ಲಿರುವ ಪ್ರಾಮಾಣಿಕ ರಾಜಕಾರಣಿ ವಿರುದ್ಧ ನಡೆದ ಪಿತೂರಿ ಇದು. ಈ ರೀತಿ ಆಗಬಾರದಿತ್ತು ಎಂದು ರವಿಚಂದ್ರನ್ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆಗಳ ಬಗ್ಗೆ ರವಿಚಂದ್ರನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಎಂದರೆ ಸುತಾರಾಂ ಇಷ್ಟಪಡದ ರವಿಚಂದ್ರನ್, "ಯಾರೋ ಹೇಳಿದ್ದನ್ನು ಕೇಳುವ ಸ್ವಭಾವ ನನ್ನದಲ್ಲ. ನನಗೆ ಒಳ್ಳೆಯದು ಅನ್ನಿಸಿದ್ದನ್ನು ಮಾಡವ ಸ್ವಭಾವ ನನ್ನದು. ರಾಜಕೀಯದಲ್ಲಿ ಇವೆಲ್ಲಾ ಸಾಧ್ಯವೆ? ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆದುಹೋಗುತ್ತದೆ. ಸಮಯ ವ್ಯರ್ಥವಾಗುತ್ತದಷ್ಟೇ ಹೊರತು ನಯಾಪೈಸೆ ಪ್ರಯೋಜನವಿಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications












