ಫೆಬ್ರವರಿಯಲ್ಲಿ ರಿಯಲ್ ಸ್ಟಾರ್ ಉಪ್ಪಿ ಬ್ರಹ್ಮೋತ್ಸವ
ರಿಯಲ್ ಸ್ಟಾರ್, ಸ್ಯಾಂಡಲ್ ವುಡ್ ಬ್ರಹ್ಮ ಉಪೇಂದ್ರ ಹಾಗೂ ಯಶಸ್ವಿ ನಿರ್ದೇಶಕ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ವರ್ಷದ ಬಹು ಅಪೇಕ್ಷಿತ ಚಿತ್ರ 'ಬ್ರಹ್ಮ'. ಸದ್ಯಕ್ಕೆ ಈ ಚಿತ್ರದ ನಿರ್ಮಾಣ ನಂತರದ ಕಾರ್ಯಗಳು ಭರದಿಂದ ಸಾಗುತ್ತಿವೆ.
ಬ್ರಹ್ಮ ಚಿತ್ರವನ್ನು ಫೆಬ್ರವರಿ 2014ರಲ್ಲಿ ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಡಿಐ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಹಲವು ತಾಂತ್ರಿಕ ಕೆಲಸಗಳಲ್ಲಿ 'ಬ್ರಹ್ಮ' ಬಿಜಿಯಾಗಿದ್ದಾನೆ. ಫೆಬ್ರವರಿಯಲ್ಲಿ ಅಭಿಮಾನಿಗಳು ಬ್ರಹ್ಮೋತ್ಸವ ಆಚರಿಸುವುದು ಗ್ಯಾರಂಟಿ ಎನ್ನುತ್ತದೆ ಚಿತ್ರತಂಡ. [ರಿಯಲ್ ಸ್ಟಾರ್ ಉಪ್ಪಿ ಕಿರಿಕ್ ಮಾಡಿದ್ಯಾಕೆ ಗೊತ್ತಾ?]
ಆರ್ ಚಂದ್ರು ಅವರ ಶತದಿನೋತ್ಸವ ಕಂಡ 'ಚಾರ್ಮಿನಾರ್' ಚಿತ್ರ ತೆರೆಕಂಡದ್ದು ಫೆಬ್ರವರಿ ಮೊದಲ ವಾರದಲ್ಲಿ. ಈಗ 'ಬ್ರಹ್ಮ'ನನ್ನೂ ಫೆಬ್ರವರಿ ಮೊದಲ ವಾರದಲ್ಲಿ ತೆರೆಗೆ ತರಲು ಆರ್ ಚಂದ್ರು ಪಕ್ಕಾ ಪ್ಲಾನ್ ಮಾಡಿದ್ದಾರೆ. ಉಪೇಂದ್ರ ಅವರಿಗೆ ಪ್ರಣೀತಾ ನಾಯಕಿ.ಮಲೇಷ್ಯ್ಯಾದಲ್ಲಿ ಚಿತ್ರವನ್ನು 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಹಾಡುಗಳು, ಆಕ್ಷನ್ ಸನ್ನಿವೇಶಗಳನ್ನು ಅಲ್ಲಿ ಸೆರೆಹಿಡಿಯಲಾಗಿದೆ. ಉಳಿದ ಯುದ್ಧದ ಸನ್ನಿವೇಶಗಳನ್ನು ಬೆಂಗಳೂರು, ನೆಲಮಂಗಲ ಬಳಿ ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.
ಗುರುಕಿರಣ್ ಸಂಗೀತ ಸಂಯೋಜನೆಯ ಚಿತ್ರದ ಧ್ವನಿಸಾಂದ್ರಿಕೆಯನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ ಹಾಗೂ ಟಿಂಗು ಟಿಂಗು ಹಾಡುಗಳನ್ನು ಅಭಿಮಾನಿಗಳು ಮತ್ತೆ ಮತ್ತೆ ಕೇಳಿ ಆನಂದಿಸುತ್ತಿದ್ದಾರೆ.
ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ್ ಬಾಬು ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಈಗಾಗಲೆ ಚಿತ್ರದ ಬಗ್ಗೆ ಸಾಕಷ್ಟು ಕ್ರೇಜ್ ನಿರ್ಮಾಣವಾಗಿದೆ. ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭಾರಿ ಬೇಡಿಕೆ ಬಂದಿದ್ದರೂ ನಿರ್ಮಾಪಕರು ಪ್ರಥಮ ಪ್ರತಿ ಬರುವವರೆಗೂ ಏನೂ ಹೇಳಲ್ಲ ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications












