'ಯಾರದು? ಏನು ಮಾಡ್ತಿದ್ದಾರೆ?' ನಟ ಚೇತನ್ ಹೇಳಿಕೆಗೆ ರಿಷಬ್ ಶೆಟ್ಟಿ ಟಾಂಗ್:
ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ 'ಕಾಂತಾರ' ಸಿನಿಮಾ, ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಇದೀಗ ನಟ ಚೇತನ್ ಅಹಿಂಸ, 'ಕಾಂತಾರ' ಸಿನಿಮಾ ಹಿಂದೂ ಧರ್ಮದ ಭಾಗವಲ್ಲ ಎಂದಿರುವುದು ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ನಟ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಿಷಬ್ ಶೆಟ್ಟಿಯನ್ನು, 'ನೀವು ಭೂತಾರಾಧನೆಯನ್ನು ತಿರುಚಿ ಪ್ರಸ್ತುತ ಪಡಿಸಿದ್ದೀರೆಂದು ಕರ್ನಾಟಕದ ನಟರೊಬ್ಬರು ಹೇಳಿದ್ದಾರೆ ಅದು ನಿಜವೇ?' ಎಂದು ಸಂದರ್ಶಕ ಪ್ರಶ್ನಿಸಿದ್ದಾರೆ.
''ಯಾರವರು, ಅವರು ಚೆನ್ನಾಗಿದ್ದಾರಾ? ಅವರೇನು ಮಾಡುತ್ತಿದ್ದಾರೆ'' ಎಂದು ವ್ಯಂಗ್ಯವಾಗಿ ನಗುತ್ತಲೇ ಪ್ರಶ್ನಿಸಿದ ರಿಷಬ್ ಶೆಟ್ಟಿ, 'ಈ ವಿಷಯದಲ್ಲಿ ನನ್ನದು ನೋಕಮೆಂಟ್ಸ್' ಎಂದಿದ್ದಾರೆ.

ನಾನು ಉತ್ತರಿಸುವ ಅವಶ್ಯಕತೆ ಇಲ್ಲ: ರಿಷಬ್
''ಇಂಥಹಾ ವಿಷಯಗಳಿಗೆ ನಾನು ಉತ್ತರಿಸುವ ಅವಶ್ಯಕತೆ ಇಲ್ಲ. ಆ ಸಂಸ್ಕೃತಿಯನ್ನು ಆರಾಧಿಸುವವರೇ ಅದನ್ನು ಒಪ್ಪಿಕೊಂಡಿದ್ದಾರೆ. ನಾನು ಈ ಸಿನಿಮಾ ಮಾಡಬೇಕಾದರೆ ಎಲ್ಲದರ ಬಗ್ಗೆಯೂ ಜಾಗೃತೆ ವಹಿಸಿ, ಆ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿರುವವರೇ ನನ್ನ ಜೊತೆಗಿದ್ದರು. ನಾನೂ ಸಹ ಅಲ್ಲಿಯವನೇ, ಸಣ್ಣ ವಯಸ್ಸಿನಿಂದಲೂ ಅದನ್ನು ನೋಡುತ್ತಾ ಬೆಳೆದವನು'' ಎಂದಿದ್ದಾರೆ ರಿಷಬ್.

ದೈವಗಳಿಗೆ ಧಕ್ಕೆ ಆಗಬಾರದೆಂಬ ಎಚ್ಚರಿಕೆ ಇತ್ತು: ರಿಷಬ್
''ಈ ರೀತಿಯ ಸಿನಿಮಾ ಮಾಡುವ ಯೋಚನೆ ಬಂದಾಗಲೆ, ಆ ದೈವ, ದೈವ ಆರಾಧನೆ ಮಾಡುವವರ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ಎಚ್ಚರಿಕೆ ಇತ್ತು. ಹಾಗಾಗಿ ದೈವಾರಾಧಕರನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಪ್ರತಿಯೊಂದು ದೃಶ್ಯ ತೆಗೆಯುವಾಗಲೂ ಇದು ಸರಿಯೇ? ಎಂದು ಅವರನ್ನು ಕೇಳಿ ತಿಳಿದು ನಾನು ಚಿತ್ರೀಕರಣ ಮಾಡಿದ್ದೇನೆ'' ಎಂದು ಸ್ಪಷ್ಟನೆ ನೀಡಿದ್ದಾರೆ ರಿಷಬ್ ಶೆಟ್ಟಿ.

ಜನ ಮಾತಾಡಲಿ: ರಿಷಬ್ ಶೆಟ್ಟಿ
''ಸಿನಿಮಾ ಮಾಡಿದ್ದೇನೆ, ಇನ್ನು ಮುಂದೆ ಅದು ಜನರ ಸಿನಿಮಾ, ಅವರು ಮಾತನಾಡಲಿ, ಬೇರೆಯವರಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಕೆಲಸ ಮಾಡಬೇಕಿತ್ತು, ಮಾಡಿದ್ದೇನೆ. ಈ ಸಿನಿಮಾಕ್ಕಾಗಿ ರಕ್ತ ಸುರಿಸಿದ್ದೇನೆ. ಜನಕ್ಕೆ ಅದು ಇಷ್ಟವಾಗಿದ್ದರೆ ಸ್ವೀಕರಿಸುತ್ತಾರೆ, ಎಲ್ಲಿಗೆ ತೆಗೆದುಕೊಂಡು ಹೋಗಬೇಕೊ ತೆಗೆದುಕೊಂಡು ಹೋಗುತ್ತಾರೆ. ಅಂತಿಮವಾಗಿ ಮಾತನಾಡಬೇಕಿರುವುದು ಸಿನಿಮಾ ವೀಕ್ಷಿಸಿದ ಜನ'' ಎಂದಿದ್ದಾರೆ ರಿಷಬ್ ಶೆಟ್ಟಿ.

ಗೊತ್ತಿಲ್ಲದೆ ಮಾತನಾಡುವುದು ತಪ್ಪಾಗುತ್ತದೆ: ರಿಷಬ್
''ಸಂಸ್ಕೃತಿಯ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗೆ ಇಲ್ಲ. ಪ್ರಶ್ನೆ ಕೇಳುವವರಿಗೆ ಇದೆಯೋ ಇಲ್ಲವೊ ಗೊತ್ತಿಲ್ಲ. ಅರ್ಹತೆ ಯಾರಿಗೆ ಇದೆಯೆಂದರೆ, ಆ ಸಂಸ್ಕೃತಿಯನ್ನು ಪಾಲಿಸುತ್ತಿರುವವರಿಗೆ, ದೈವಾರಾಧನೆ ಮಾಡುತ್ತಿರುವವರಿಗೆ ಇದೆ. ಅವರು ತಲೆಮಾರುಗಳಿಂದ ಆ ಸಂಸ್ಕೃತಿಯನ್ನು ಆಚರಿಸಿಕೊಂಡು, ಉಳಿಸಿಕೊಂಡು ಬರುತ್ತಿದ್ದಾರೆ. ಇವತ್ತು ಸುಮ್ಮನೆ ಕೂತು ಮಾತನಾಡಿಬಿಡುವುದಲ್ಲ. ಭೂತಕೋಲಕ್ಕೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ'' ಎಂದಿದ್ದಾರೆ ರಿಷಬ್.


Click it and Unblock the Notifications











