ಪ್ರಣಿತಾ ಬಳಿಕ ಡಾ.ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿ ಎಂದು ರಿಷಬ್ ಶೆಟ್ಟಿ ಮನವಿ
ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಮತ್ತು ಅತ್ಯಂತ ಹಳೆಯ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನ ಕನ್ನಡ ಶಾಲೆ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿರುವುದು ಬೇಸರದ ವಿಚಾರ. ಈ ವಿಚಾರವಾಗಿ ಸಿನಿಮಾ ಕಲಾವಿದರು ಸಹ ಪ್ರತಿಕ್ರಿಯೆ ನೀಡುತ್ತಿದ್ದು, ಶಾಲೆ ಉಳಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ನಟಿ ಪ್ರಣಿತಾ ಸುಭಾಷ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಶಾಲೆ ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
'ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ. ವಿಷ್ಣುವರ್ಧನ್ ರವರು ಓದಿರುವ ಸಂಸ್ಥೆಯು ಮುಚ್ಚುತಿರುವುದು ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಜೊತೆಗೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ ನಟಿ ಪ್ರಣಿತಾ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾಡೆಲ್ ಹೈ ಸ್ಕೂಲ್ ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿದೆ. ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿಯೇ ಇಲ್ಲ. ಇದರಿಂದ ನಿರಾಸೆಗೊಂಡ ಆಡಳಿತ ಮಂಡಳಿ ಶಾಲೆ ಮುಚ್ಚಲು ಮುಂದಾಗಿದೆ.

1870 ರ ಬ್ರಿಟಿಷ್ ಆಡಳಿತದಲ್ಲಿ ಈ ಶಾಲೆ ಸ್ಥಾಪಿಸಲಾಗಿತ್ತು. ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಇದಾಗಿದ್ದು, ಈ ಶಾಲೆಯಲ್ಲಿ ಓದಿದ ಅನೇಕರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿದ್ದಾರೆ.
ವಿಶೇಷ ಎಂದರೆ ಕನ್ನಡ ಚಲನಚಿತ್ರರಂಗದ ಲೆಜೆಂಡ್ ಡಾ.ವಿಷ್ಣುವರ್ಧನ್ ಓದಿರುವುದು ಇದೇ ಶಾಲೆಯಲ್ಲಿ. ಕ್ರಿಕೆಟ್ ದಂತಕತೆ ಗುಂಡಪ್ಪ ವಿಶ್ವನಾಥ್ ಓದಿದ್ದು ಸಹ ಇದೇ ಶಾಲೆಯಲ್ಲಿ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಿಕ್ಷಣ ಸಂಸ್ಥೆಯನ್ನು ಉಳಿಸಬೇಕಾಗಿದೆ.
ಎಷ್ಟೊ ಜನರ ಬದುಕಿಗೆ ಬೆಳಕಾಗಿರುವ ಈ ಪುರಾತನ ಶಾಲೆ ಮುಚ್ಚುತ್ತಿರುವ ಬಗ್ಗೆ ನಟಿ ಪ್ರಣಿತಾ ಬೇಸರ ವ್ಯಕ್ತಪಡಿಸಿದ್ದಲ್ಲದೇ, ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿರುವುದಾಗಿ ಟ್ವೀಟ್ ಮಾಡಿದ್ದಾರೆ.
'ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ. ವಿಷ್ಣುವರ್ಧನ್ ರವರು ಓದಿರುವ ಸಂಸ್ಥೆಯು ಮುಚ್ಚುತ್ತಿರುವುದು ನನಗೆ ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆ. ಪ್ರಣಿತಾ ಫೌಂಡೇಶನ್ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿದ್ದೇವೆ' ಎಂದು ಹೇಳಿದ್ದಾರೆ.


Click it and Unblock the Notifications











