ನಟ ರಿಷಿಗೆ ಜೋಡಿಯಾದ 'ಕನ್ನಡತಿ' ರಂಜನಿ ರಾಘವನ್
ಕನ್ನಡತಿ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ನಟಿ ರಂಜನಿ ರಾಘವನ್ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದೂದ್ ಪೇಡ ದಿಗಂತ್ ಜೊತೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದ ರಂಜನಿ ಇದೀಗ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ರಂಜನಿ ರಾಘವನ್ ಇದೀಗ ಸ್ಯಾಂಡಲ್ ವುಡ್ ನಟ ರಿಷಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಚಿತ್ರಕ್ಕೆ ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿರುವ ಜಯತೀರ್ಥ ಚಿತ್ರದ ಮೇಕಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿರುವುದು 5 ನಿರ್ದೇಶಕರು ಒಟ್ಟಿಗೆ ಸೇರಿಮಾಡುತ್ತಿರುವ ಸಿನಿಮಾಗೆ. ಜಯತೀರ್ಥ ಸದ್ಯ ತನ್ನ ಭಾಗದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಜಯತೀರ್ಥ ಕಥೆಗೆ ನಾಯಕನಾಗಿ ರಿಷಿ ಮತ್ತು ನಾಯಕಿಯಾಗಿ ರಂಜನಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಥೆಯಲ್ಲಿ ರಿಷಿ ಸುಧಾಕರ್ ಎನ್ನುವ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಬನಾರಸ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಜಯತೀರ್ಥ ಆಗಲೆ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಜಯತೀರ್ಥ ಚಿತ್ರೀಕರಣ ಪ್ರಾರಂಭಿಸಿರುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಒಂದು ಸಿನಿಮಾಗಾಗಿ ಒಟ್ಟಿಗೆ ಸೇರಿರುವ ಪ್ರಸಿದ್ಧ 5 ನಿರ್ದೇಶಕರಲ್ಲಿ ಜಯತೀರ್ಥ ಸೇರಿದಂತೆ ಯೋಗರಾಜ್ ಭಟ್, ಕೆ.ಎಂ ಚೈತನ್ಯ, ಶಶಾಂಕ್ ಮತ್ತು ಪವನ್ ಕುಮಾರ್ ಇದ್ದಾರೆ. ಉಳಿದ ನಿರ್ದೇಶಕರ ಸಿನಿಮಾದ ಬಗ್ಗೆ ಮಾಹಿತಿ ಇನ್ನು ಬಹಿರಂಗವಾಗಿಲ್ಲ. 5 ನಿರ್ದೇಶಕರು ಬೇರೆ ಬೇರೆ ಕಥೆಗಳಿಗೆ ನಿರ್ದೇಶನ ಮಾಡಿದ್ದರೂ ಸಹ ಕಥೆಗೆ ಒಂದೊಂದು ಲಿಂಕ್ ಇರುತ್ತೆ ಎನ್ನಲಾಗುತ್ತಿದೆ. ಕುತೂಹಲ ಮೂಡಿಸಿರುವ 5 ಜನ ನಿರ್ದೇಶಕರ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.


Click it and Unblock the Notifications











