ಪ್ರಶಾಂತ್ ಸಾಂಬರ್ಗಿ v/s ಸಾ.ರಾ.ಗೋವಿಂದ್: ಏನಿದು ರೋಲ್ ಕಾಲ್ ರಗಳೆ
"ಹಣ ಪಡೆಯುವ ಉದ್ದೇಶದಿಂದ ಬಾಹುಬಲಿ 2' ಚಿತ್ರ ಬಿಡುಗಡೆಗೆ ತಡೆಯೊಡ್ಡಿ ಸಾ.ರಾ.ಗೋವಿಂದು ಹೋರಾಟ ಮಾಡುತ್ತಿದ್ದಾರೆ" ಎಂದು ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ಆರೋಪ ಮಾಡಿರುವ ಶ್ರೀ ಪ್ರಶಾಂತ್ ಸಾಂಬರ್ಗಿ ಎಂಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ರವರು ಪ್ರಶಾಂತ್ ಸಾಂಬರ್ಗಿ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

"ಪ್ರಶಾಂತ್ ಸಾಂಬರ್ಗಿ ಎಂಬ ವ್ಯಕ್ತಿಯು ಎರಡು ನಿಮಿಷಗಳ ಫೇಸ್ ಬುಕ್ ಲೈವ್ ವಿಡಿಯೋದಲ್ಲಿ, 'ನಾನು ಹಣ ಪಡೆಯುವ ಉದ್ದೇಶದಿಂದ ಚಿತ್ರ ಬಿಡುಗಡೆಗೆ ತಡೆ ಮಾಡುತ್ತಿದ್ದೇನೆ ಮತ್ತು ಹೋರಾಟ ಮಾಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ನನ್ನ ಮೇಲೆ ಆರೋಪವನ್ನು ಮಾಡಿದ್ದಾರೆ. ಈ ಆರೋಪದಿಂದ ನನ್ನ ಪದವಿಗೆ ಮತ್ತು ನನ್ನ ವ್ಯಕ್ತಿತ್ವಕ್ಕೆ, ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ" ಎಂದು ಸಾ.ರಾ.ಗೋವಿಂದ್ ದೂರಿನಲ್ಲಿ ಹೇಳಿಕೆ ನೀಡಿದ್ದಾರೆ.
"ನನ್ನ ಕನ್ನಡಪರ ಹೋರಾಟವನ್ನು ಗಮನಿಸಿ, ರಾಜ್ಯಾದ್ಯಂತ ನನ್ನನ್ನು ಅನುಕರಿಸುವ ಅನೇಕ ಹೋರಾಟಗಾರರು, ಯುವಕರು ಇರುತ್ತಾರೆ. ಈತನು ಫೇಸ್ ಬುಕ್ ಮೂಲಕ ಬಿಡುಗಡೆ ಗೊಳಿಸಿರುವ ಸಂಭಾಷಣೆ ಈಗಾಗಲೇ ನಾನಾಕಡೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿ, ಹಿತೈಷಿಗಳು ಮತ್ತು ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಸಾಂಬರ್ಗಿ ನನ್ನ ಮೇಲೆ ಮಾಡಿರುವ ಆಪಾದನೆ ಯಾವುದೇ ಪುರಾವೆ ಇಲ್ಲದೆ, ದುರುದ್ದೇಶದಿಂದ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಉದ್ದೇಶದಿಂದಲೇ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ನನಗೆ ಮಾನಸಿಕ ನೋವುಂಟಾಗಿರುತ್ತದೆ. ಆಧಾರವಿಲ್ಲದ ಹೇಳಿಕೆಯಿಂದ ನೋವುಂಟು ಮಾಡಿದ್ದಲ್ಲದೆ, ರಾಜ್ಯದ ಶಾಂತಿ ಕದಡುವ ಹುನ್ನಾರಕ್ಕೆ ಮುಂದಾಗಿರುವ ಶ್ರೀ ಪ್ರಶಾಂತ್ ಸಾಂಬರ್ಗಿ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಿ, ಸೂಕ್ತ ಕ್ರಮ ಜರುಗಿಸಬೇಕೆಂದು" ಸಾ.ರಾ.ಗೋವಿಂದು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.


Click it and Unblock the Notifications











