ಪಬ್ಲಿಕ್ ಟಾಯ್ಲೆಟ್....ಇದು ಒಂದು ಕಿರುಚಿತ್ರನಾ?
ಕಳೆದ ವಾರವಷ್ಟೇ ''ಪಬ್ಲಿಕ್ ಟಾಯ್ಲೆಟ್'' ಎಂಬ ಕನ್ನಡ ಕಿರುಚಿತ್ರವೊಂದು ಬಿಡುಗಡೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯಾಕಣ್ಣೋ ವಿಡಿಯೋ ಆಧರಿಸಿ ಈ ಸಿನಿಮಾ ಕಿರುಚಿತ್ರ ತಯಾರಾಗಿತ್ತು.
ಈ ಕಿರುಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ನಿರ್ದೇಶಕದ ಸಾಮಾಜಿಕ ಕಾಳಜಿ ಕುರಿತು ಶ್ಲಾಘಿಸಿದ್ದರು. ಇದೀಗ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಹ ಪಬ್ಲಿಕ್ ಟಾಯ್ಲೆಟ್ ಕಿರುಚಿತ್ರದ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅವರ ಯಥಾವತ್ತು ಸಾಲುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಪಬ್ಲಿಕ್ ಟಾಯ್ಲೆಟ್ ...
ಇದು ಒಂದು ಕಿರುಚಿತ್ರನಾ ???
ಮೊದಲ ದೃಶ್ಯ ನೋಡುತ್ತಿದ್ದಂತೆ ಮುಖಕ್ಕೆ ರಾಚುವ ಹಾಗೆ ಎದ್ದು ಬಂದ ಸಂಭಾಷಣೆಗಳು, ಯಾರು ಗುರು ಇಂಥದ್ದು ನೋಡ್ತಾರೆ ಅಂದು ಅಲ್ಲಿಗೆ ನಿಲ್ಲಿಸಿ ಸುಮ್ಮನಾಗಿಬಿಟ್ಟೆ......ಮುಂದೆ ಓದಿ.....

ನನ್ನ ಮೇಲೆ ನನಗೇ ಬೇಸರವಾಯ್ತು
ಮಾರನೆಯದಿನ ಸೋಶಿಯಲ್ ಮೀಡಿಯಾ ತೆಗೆದು ನೋಡಿದರೆ ಎಲ್ಲರ ಮುಖಪುಟದಲ್ಲೂ ಇದರ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ. ಎಲ್ಲರೂ ಹಾಡಿ ಹೊಗಳಿ ಬರೆದದ್ದೇ ಬರೆದದ್ದು. ಎಲಾ ಇವನ ಇಷ್ಟು ಕೆಟ್ಟ ಸಂಭಾಷಣೆ ಇದೆಯಲ್ಲ ಎಂದು ಮೊದಲ ದೃಶ್ಯವನ್ನ ನೋಡಲಾಗದೆ ನಿಲ್ಲಿಸಿದ್ದನ್ನ ಇಷ್ಟು ಕೊಂಡಾಡ್ತಿದ್ದರಲ್ಲ ಎಂದು ಸಂಜೆ ಮನೆಗೆ ಬಂದವನೇ ಮತ್ತೆ ತಾಳ್ಮೆಯಿಂದ ನೋಡಲು ಕುಳಿತೆ. ನನ್ನ ಮೇಲೆ ನನಗೇ ಬೇಸರವಾಯ್ತು. ಪೂರ್ತಿಯಾಗಿ ನಾನೇಕೆ ವೀಕ್ಷಣೆ ಮಾಡಲಿಲ್ಲವಲ್ಲ ಎಂದು. ಆ ಕ್ಷಣಕ್ಕೆ ಅನ್ನಿಸಿದ್ದು ತಾಳ್ಮೆ ಅನ್ನುವುದು ಇದ್ದರೆ ಮಾತ್ರ ಏನನ್ನಾದರೂ ದಕ್ಕಿಸಿಕೊಳ್ಳಲು ಸಾಧ್ಯವಾಗೋದು ಅಂತ.

ಚಿತ್ರದ ಕೊನೆಯಲ್ಲಿ ಗಂಟಲು ತುಂಬಿ ಬಂತು
ಚಿತ್ರದ ಕೊನೆಯಲ್ಲಿ ಎಂಡ್ ಟೈಟಲ್ ಕಾರ್ಡ್ ಹೋಗುವಾಗಲಂತೂ ಗಂಟಲು ತುಂಬಿ ಬಂತು. ಯಾರ ಬದುಕು ಹೇಗೋ ಅವರ ಒತ್ತಡಗಳೇನೋ ಪರಿಸ್ಥಿಗಳೇನೋ ಏನೊಂದೂ ಯೋಚಿಸದೆ ಆ ಕ್ಷಣಕ್ಕೆ ಮಾಡುವ ತಪ್ಪುಗಳು ಹೇಗೆ ಮತ್ತೊಬ್ಬರ ಕುಟುಂಬವನ್ನು ಬೀದಿಗೆ ತಂದು ಎಸೆದು ಬಿಡುತ್ತೆ ಅನ್ನುವುದನ್ನು ನಮ್ಮಗಳ ಮುಖಕ್ಕೆ ರಾಚುವಂತೆ ಚಿತ್ರಿಸಿದ್ದಾರೆ.

ಎಲ್ಲರ ಕಣ್ಣು ತೆರೆವಂತೆ ಮಾಡಿದ್ದೀರಿ
ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಕೃತಾನಂದ ಪಡೆಯಲು ಮಾಡೋ ಕೆಲಸಗಳು ಯಾವಾಗ ಯಾರ ಮೇಲೆ ಹೇಗೆ ಮುರಿದು ಬಿದ್ದು ಅವರ ಜೀವನವನ್ನು ಮುಗಿಸಿಬಿಡುತ್ತೆ ಅನ್ನುವುದನ್ನು ಬಹಳ ಗಾಢವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ನಿರ್ದೇಶಕ ನಾಗೇಶ್ ಹೆಬ್ಬೂರ್ ನಿಮ್ಮ ಮೊದಲ ಪ್ರಯತ್ನದಲ್ಲೇ ಎಲ್ಲರ ಕಣ್ಣು ತೆರೆವಂತೆ ಮಾಡಿದ್ದೀರಿ. ಇನ್ನುಳಿದಂತೆ ಎಲ್ಲರೂ ರಂಗಭೂಮಿ ಪ್ರತಿಭಾವಂತರೇ ಪಾತ್ರವೇ ತಾವಾಗಿಬಿಟ್ಟಿದ್ದಾರೆ. ಸಂಪತ್ ನಿಮ್ಮ ಬಗ್ಗೆ ಮಾತಾಡುವ ಹಾಗೆ ಇಲ್ಲ ಬಿಡಿ ನೀವೀಗಾಗಲೇ ಪ್ರತಿಭೆ ನಿರೂಪಿಸಿರುವ ಅಪರೂಪದ ನಟ. ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video

ಪಬ್ಲಿಕ್ ಟಾಯ್ಲೆಟ್ ಕುರಿತು
ಭಾನವಿ ಕ್ಯಾಪ್ಚರ್ಸ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಾಗೇಶ್ ಹೆಬ್ಬೂರ್ ನಿರ್ದೇಶಿಸಿದ್ದಾರೆ. ಅಭಿಷೇಕ್ ಕೆ ಕಾಸರಗೋಡು ಛಾಯಾಗ್ರಹಣ, ವರ್ಷವರ್ಧನ್ ರಾಜ್ ಸಂಗೀತ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಂಪತ್, ಶ್ವೇತಾ ಶ್ರೀನಿವಾಸ್, ಕಾರ್ತಿ ಸೌಂದರಮ್, ಮಾಂತೇಶ್ ಹಿರೇಮಠ್, ನಿಂಗರಾಜ್ ಮಂಡ್ಯ, ಶ್ರೀಕಾಂತ್ ಜಿ ಕಶ್ಯಪ್, ಚಂದ್ರಪ್ರಭ, ಪುನೀತ್, ಅಥ್ರೇಯ ರಾಜ್, ಭಾನು ಪ್ರಕಾಶ್, ಪವಿತ್ರಾ, ಆನಂದ್ ಹೆಬ್ಬೂರ್, ಕತ್ವಿಕ್ ಸೇರಿದಂತೆ ಇತರರೆ ನಟಿಸಿದ್ದಾರೆ.


Click it and Unblock the Notifications