'ಕೊಟ್ಲಲ್ಲಪ್ಪೋ ಕೈ' ಸಿನಿಮಾ ಖ್ಯಾತಿಯ ಉದಯೋನ್ಮುಖ ನಟ ಧನುಷ್ ಅಕಾಲಿಕ ಮರಣ
ಕನ್ನಡ ಚಿತ್ರರಂಗದ ಮತ್ತೊಬ್ಬ ಉದಯೋನ್ಮುಖ ನಟ ಧನುಷ್(ಮುತ್ತುರಾಜ) ಕೊನೆಯುಸಿರೆಳೆದಿದ್ದಾರೆ. 'ಸಂಪಿಗೆಹಳ್ಳಿ', 'ಕೊಟ್ಲಲ್ಲಪ್ಪೋ ಕೈ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ಧನುಷ್ ನಟಿಸಿದ್ದರು. ಶಿವರಾಜ್ಕುಮಾರ್ ಜೊತೆ 'ಲೀಡರ್' ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಸಿನಿಮಾ ಚಿತ್ರೀಕರಣಕ್ಕಾಗಿ ಲಡಾಕ್ಗೆ ತೆರಳಿದ್ದ ನಟ ಧನುಷ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ನ್ಯುಮೋನಿಯಾದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಲಡಾಕ್ನಿಂದ ಧನುಷ್ ಅವರನ್ನು ಬೆಂಗಳೂರಿ ಮಣಿಪಾಲ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 10.45ಕ್ಕೆ ಸಾವನ್ನಪ್ಪಿದ್ದಾರೆ. ಲಡಾಕ್ ವಾತಾವರಣದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ನ್ಯೂಮೋನಿಯಾ ಬಂದಿದ್ದೇ ಧನುಷ್ ಸಾವಿಗೆ ಕಾರಣ ಎನ್ನಲಾಗಿದೆ. ಮೂಲತ: ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದ ಮುತ್ತುರಾಜ್ ಚಿತ್ರರಂಗಕ್ಕೆ ಬಂದ ಮೇಲೆ ಧನುಷ್ ಎಂದು ಹೆಸರನ್ನು ಬದಲಿಸಿಕೊಂಡಿದ್ದರು. ಮೃತ ಧನುಷ್ ಪಾರ್ಥೀವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಲಾಗಿದೆ.

'ಪ್ಯಾರ್ ಕಾ ಗೋಲ್ಗುಂಬಜ್', 'ಸ್ನೇಹಿತ', ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹವಣಿಸುತ್ತಿದ್ದರು. ಆದರೆ ದೊಡ್ಡ ಅವಕಾಶಗಳು ಸಿಕ್ಕಿರಲಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗುತ್ತಿದ್ದರು. ಇಂತಹ ಹೊತ್ತಲ್ಲೇ ಅಕಾಲಿಕ ನಿಧನರಾಗಿದ್ದಾರೆ. ಧನುಷ್ ನಿಧನಕ್ಕೆ ಸ್ನೇಹಿತರು, ಚಿತ್ರರಂಗದ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.


Click it and Unblock the Notifications











