ವರ್ಷಾಂತ್ಯಕ್ಕೆ ನೆನಪು: ಚಿತ್ರರಂಗದಿಂದ ಕಣ್ಮರೆಯಾದ ಸೆಲೆಬ್ರಿಟಿಗಳು
ಕನ್ನಡ ಚಿತ್ರ ರಂಗದ ಈ ವರ್ಷ ಯಶಸ್ಸಿನ ಅಲೆಯ ಜೊತೆಗೆ ಕೆಲವು ಗಣ್ಯರನ್ನು ಕೂಡಾ ಕಳೆದುಕೊಳ್ಳಬೇಕಾಯಿತು. ಪ್ರಮುಖ ನಿರ್ದೇಶಕರು, ತಂತ್ರಜ್ಞರ ಸಾವಿನ ನೋವು ಚಿತ್ರರಂಗವನ್ನು ಕಾಡಿತು. ವರ್ಷಾಂತ್ಯದಲ್ಲಿ ನಿಂತು ಹಿಂತಿರುಗಿ ನೋಡಿದಾಗ ಎಂಟು ಹತ್ತು ಮಂದಿ ಸೆಲೆಬ್ರಿಟಿಗಳನ್ನು ಚಿತ್ರರಂಗ ಕಳೆದುಕೊಂಡಿದೆ.
ಫೆಬ್ರವರಿ ತಿಂಗಳಿನಲ್ಲಿ ಖ್ಯಾತ ನಿರ್ಮಾಪಕ ಡಿ ರಾಮನಾಯ್ಡು, ಪೃಥ್ವಿ ಚಿತ್ರದ ಸಂಕಲನಕಾರ ಕಿಶೋರ್, ಮಾರ್ಚ್ ತಿಂಗಳಿನಲ್ಲಿ ಬಂಗಾರದ ಮನುಷ್ಯ ಖ್ಯಾತಿಯ ನಿರ್ದೇಶಕ ಸಿದ್ದಲಿಂಗಯ್ಯ, ಲೂಸಿಯಾ ಖ್ಯಾತಿಯ ನಟ ಸಂಜಯ್ ಅಯ್ಯರ್, ಜುಲೈ ತಿಂಗಳಿನಲ್ಲಿ ಸಂಗೀತಗಾರ ಎಂಎಸ್ ವಿಶ್ವನಾಥನ್, ಸೆಪ್ಟೆಂಬರ್ ತಿಂಗಳಿನಲ್ಲಿ ಕೆಎಫ್ ಸಿಸಿ ಮಾಜಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ, ಗಿನ್ನಿಸ್ ದಾಖಲೆ ಬರೆದ ನಟಿ ಮನೋರಮಾ ಹಾಗೂ ಅಕ್ಟೋಬರ್ ನಲ್ಲಿ ಖ್ಯಾತ ನಿರ್ದೇಶಕ ಕೆಎಸ್ಎಲ್ ಸ್ವಾಮಿ ಅವರನ್ನು ಚಿತ್ರರಂಗ ಕಳೆದುಕೊಂಡಿತು.[ಈ ವರ್ಷ ಸಿನಿಮಾ ಬೋರು, ಕಿರಿಕ್ ಜೋರು ಗುರು!]
ಇದಲ್ಲದೆ ಕನ್ನಡ ಚಿತ್ರೋದ್ಯಮದ ವಾಣಿಜ್ಯ ಕೇಂದ್ರ ಗಾಂಧಿನಗರದ ಮೂವಿಲ್ಯಾಂಡ್ ಚಿತ್ರಮಂದಿರದ ಬಳಿ ಚಲನಚಿತ್ರ ವಿತರಕ ಹಾಗೂ ಪ್ರದರ್ಶಕ ಹನುಮಂತ ಕಟ್ಟಿಮನಿ ಅವರ ಹತ್ಯೆಯಾಗಿತ್ತು. ಮಿಕ್ಕಂತೆ ಚಿತ್ರರಂಗ ಕಂಡ ಸಾವು ನೋವುಗಳ ಕಹಿ ನೆನಪು ನಿಮ್ಮ ಮುಂದಿದೆ.

ಡಿ ರಾಮನಾಯ್ಡು
ಗಿನ್ನಿಸ್ ದಾಖಲೆ ನಿರ್ಮಿಸಿದ ಚಲನಚಿತ್ರ ನಿರ್ಮಾಪಕ ದಗ್ಗುಬಾತಿ ರಾಮನಾಯ್ಡು ಅವರು ಫೆಬ್ರವರಿ 18ರಂದು ಹೈದರಾಬಾದಿನಲ್ಲಿ ನಿಧನರಾದರು.

ನಿರ್ದೇಶಕ ಸಿದ್ದಲಿಂಗಯ್ಯ
ಎಚ್ ಎನ್ 1 ಕಾಯಿಲೆಯಿಂದ ಬಳಲುತ್ತಿದ್ದ ಬಂಗಾರದ ಮನುಷ್ಯ ಖ್ಯಾತಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರು ಮಾರ್ಚ್ 12ರಂದು ನಿಧನರಾದರು.[ವರದಿ ಇಲ್ಲಿ ಓದಿ]

ಲೂಸಿಯಾ ಖ್ಯಾತಿಯ ಸಂಜಯ್ ಐಯರ್
ಪವನ್ ಕುಮಾರ್ ನಿರ್ದೇಶನದ ಕನ್ನಡ ಚಿತ್ರ ಲೂಸಿಯಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಟರಾಗಿ ಪರಿಚಿತರಾದ ರಂಗಭೂಮಿ ಕಲಾವಿದ, ಲೇಖಕ, ಸಂಘಟಕ ಸಂಜಯ್ ಐಯರ್ ಅವರು ಮಾರ್ಚ್ 20ರ ಗುರುವಾರ ವಿಧಿವಶರಾದರು. ಉಪೇಂದ್ರ ನಿರ್ದೇಶನದ ಉಪ್ಪಿ 2 ಬಹುಶಃ ಅವರ ಕೊನೆ ಚಿತ್ರ.

ಸಾಹಸ ನಿರ್ದೇಶಕ ನಂಜುಂಡಿ ನಾಗರಾಜ್
ಕನ್ನಡ ಚಿತ್ರರಂಗದ ಹೆಸರಾಂತ ಸಾಹಸ ನಿರ್ದೇಶಕ ನಂಜುಂಡಿ ನಾಗರಾಜ್ (55) ಹೃದಯಾಘಾತಕ್ಕೆ ಒಳಗಾಗಿ, ಬೆಂಗಳೂರಿನ ಅರಕೆರೆಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾಮಾನ್ಯ ಫೈಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ನಂಜುಂಡಿ ನಾಗರಾಜ್, ವರನಟ ಡಾ.ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ಸ್ಟಾರ್ ಹೀರೋಗಳಿಗೆ ಪರ್ಮನೆಂಟ್ ಡ್ಯೂಪ್ ಆರ್ಟಿಸ್ಟ್ ಆಗಿದ್ದವರು.

ಖ್ಯಾತ ತೆಲುಗು ನಟಿ ಆರತಿ ಅಗರ್ವಾಲ್
ಖ್ಯಾತ ತೆಲುಗು ನಟಿ ಆರತಿ ಅಗರ್ವಾಲ್ ವಿಧಿವಶರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಮೆರಿಕದಲ್ಲಿ ಜೂನ್ 6ರ ಶನಿವಾರ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

ನಿರ್ಮಾಪಕ ಅಭಿಜಿತ್ ಪಟೇಲ್
'ಸಿಂಪಲ್ಲಾಗೊಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ಬಹುಪರಾಕ್' ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಬೆಂಗಳೂರಿನ ಕಿರ್ಲೋಸ್ಕರ್ ಕಾಲೊನಿ ನಿವಾಸಿ ಅಭಿಜಿತ್ ಪಟೇಲ್ (36) ನೇಣಿಗೆ ಶರಣಾಗಿ ಸಾವನ್ನಪ್ಪಿದ್ದರು.

ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರು
ರವಿ ಎಂದೇ ಖ್ಯಾತರಾಗಿದ್ದರು. ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ (77) ಕೆ.ಎಸ್.ಎಲ್.ಸ್ವಾಮಿ ಅವರು ಅಕ್ಟೋಬರ್ 20ರಂದು ನಿಧನರಾದರು.

ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್(87) ಅವರು ವಿಧಿವಶರಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮಂಗಳವಾರ (ಜುಲೈ 14)ರಂದು ಮೃತಪಟ್ಟರು.

ನಟಿ ಮನೋರಮಾ ನಿಧನ
ಗೋಪಿಶಾಂತಾ ಹೆಸರಿನ ಕಲಾವಿದೆ ಮನೋರಮಾ ಅವರು 1,500 ಚಿತ್ರಗಳು 5 ಸಾವಿರಕ್ಕೂ ಅಧಿಕ ರಂಗ ಪ್ರದರ್ಶನಗಳನ್ನು ನೀಡಿ ಗಿನ್ನಿಸ್ ದಾಖಲೆ ಬರೆದ ಬಹುಭಾಷಾ ನಟಿ. ಕನ್ನಡದಲ್ಲಿ ದೇವರಗುಡಿ, ಪ್ರೇಮಾನುಬಂಧ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅಕ್ಟೋಬರ್ 10, 2015ರಂದು ಕೊನೆಯುಸಿರೆಳೆದರು.


Click it and Unblock the Notifications











