ಜಗ್ಗಣ್ಣನ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಕಥೆ ಮುಗಿದೇ ಹೋಯ್ತಾ? ಸಂತೋಷ್ ಆನಂದ್ ರಾಮ್ ಹೇಳಿದ್ದೇನು?
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯಿಸಿರುವ ಸಿನಿಮಾ 'ರಾಘವೇಂದ್ರ ಸ್ಟೋರ್ಸ್'. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಪಕ್ಕಾ ಕಾಮೆಡಿ ಎಂಟರ್ಟೈನರ್ ಸಿನಿಮಾ ಇದು. ಆದರೆ ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಡೇಟ್ ತಡವಾಗುತ್ತಲೇ ಇದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲೇ 'ರಾಘವೇಂದ್ರ ಸ್ಟೋರ್ಸ್' ಓಪನ್ ಆಗಬೇಕಿತ್ತು. ಪ್ರೇಕ್ಷಕರು ಕಾದು ಕಾದು ಸುಸ್ತಾದರೂ ಬಾಗಿಲು ತೆಗೆಯಲಿಲ್ಲ. ಹಾಸ್ಯದ ರಸಪಾಕ ಉಣಬಡಿಸಲಿಲ್ಲ. ಕೆಲವರಿಗೆ ಸಿನಿಮಾ ನಿಜವಾಗಿಯೂ ರಿಲೀಸ್ ಆಗುತ್ತಾ? ಇಲ್ವಾ? ಎನ್ನುವ ಗೊಂದಲ ಶುರುವಾಗಿದೆ. ಟ್ವಿಟ್ಟಿರ್ನಲ್ಲಿ ಇದೇ ಪ್ರಶ್ನೆಯನ್ನು ನೆಟ್ಟಿಗರೊಬ್ಬರು ನಿರ್ದೇಶಕ ಸಂತೋಷ್ ಆನಂದ್ರಾಮ್ ಮುಂದೆ ಇಟ್ಟಿದ್ದಾರೆ. ಅದಕ್ಕೆ 'ರಾಜಕುಮಾರ' ಸಿನಿಮಾ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

"ರಾಘವೇಂದ್ರ ಸ್ಟೋರ್ಸ್' ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗುತ್ತದೆ. ಬಹಳ ತುಂಟತನ, ಮಜಾ ಇರುವಂತಹ ಈ ಸಿನಿಮಾ ಒಂದಷ್ಟು ಮೌಲ್ಯಗಳನ್ನು ಹೊತ್ತು ಬರಲಿದೆ" ಎಂದು ಸಂತೋಷ್ ಆನಂದ್ರಾಮ್ ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಟೀಸರ್ ಕೂಡ ರಿಲೀಸ್ ಆಗಿ ಗಮನ ಸೆಳೆದಿದೆ. ಶ್ವೇತಾ ಶ್ರೀವಾಸ್ತವ್ ಚಿತ್ರದಲ್ಲಿ ನವರಸ ನಾಯಕನಿಗೆ ಜೋಡಿಯಾಗಿ ಮಿಂಚಿದ್ದಾರೆ.

ಹೋಟೆಲ್ನಲ್ಲಿ ಅಡುಗೆ ಭಟ್ಟನ ಕೆಲಸ ಮಾಡಿಕೊಂಡಿರುವ ನಾಯಕನಿಗೆ ವಯಸ್ಸು 40 ದಾಟಿದರೂ ಮದುವೆ ಆಗಿರಲ್ಲ. ಮದುವೆ ಆಗಲು ಆತ ಏನೆಲ್ಲಾ ಪಾಡು ಪಟ್ಟುತ್ತಾನೆ ಎನ್ನುವುದನ್ನು ತಮಾಷೆಯಾಗಿ ಸಂತೋಷ್ ಆನಂದ್ರಾಮ್ ಕಟ್ಟಿಕೊಟ್ಟಿದ್ದಾರೆ. ಜಗ್ಗಣ್ಣ ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಈ ಸಿನಿಮಾ ನೇರವಾಗಿ ಓಟಿಟಿಗೆ ಬರುತ್ತೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಇದನ್ನು ಸಂತು ತಳ್ಳಿ ಹಾಕಿದ್ದರು. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ಹೇಳಿದ್ದರು.


Click it and Unblock the Notifications











