"ಅಪ್ಪು ಇಷ್ಟು ಅವಸರ ಇತ್ತಾ" ಎಂದು ಬಿಕ್ಕಿ ಬಿಕ್ಕ ಅತ್ತ ಹಿರಿಯ ನಟಿ ಲೀಲಾವತಿ, ವಿನೋದ್ ರಾಜ್.
ಪುನೀತ್ ರಾಜ್ ಕುಮಾರ್ ನಿಧನ ಇಡೀ ಚಿತ್ರರಂಗಕ್ಕೆ ತುಂಬಲಾಗದ ನಷ್ಟ. ಯಶಸ್ಸು ಅನ್ನೋ ಶಿಖರ ಏರಿದ್ದ ಈ ಸಂದರ್ಭದಲ್ಲಿ ಹೀಗೆ ಯಾವುದೇ ಖಾಯಿಲೆ ಇಲ್ಲದೇ ಸಾವನ್ನಪ್ಪಿರುವ ಪುನೀತ್ ರಾಜ್ಕುಮಾರ್ ಕುಟುಂಬದ, ಅಭಿಮಾನಿಗಳ ಪ್ರೀತಿಯ ಜೊತೆಗೆ ಇಹಲೋಕ ತ್ಯಜಿಸಿದ್ದಾರೆ. ಸಾಕಷ್ಟು ಗಣ್ಯರು ಇವರ ಸಾವಿಗೆ ನೋವಿನಲ್ಲಿದ್ದಾರೆ, ಕಂಬನಿ ಮಿಡಿದಿದ್ದಾರೆ. ಕನ್ನಡದ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಕೂಡ ಪುನೀತ್ ಸಾವಿನ ಬಗ್ಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
''ಇಂತ ಜೀವ ಮತ್ತೆ ಬರಲ್ಲ. ಪುನೀತ್ ನಿಜಕ್ಕೂ ಹೃದಯವಂತ ಅವನಿಗೆ ದೇವರು ಇಂತ ಶಿಕ್ಷೆಯನ್ನು ನೀಡಬಾರದಿತ್ತು. ಅಯ್ಯೋ ವಿಧಿಯೇ ಪುನೀತ್ಗೆ ಇಂತಹ ಶಿಕ್ಷೆ ಕೊಡಬೇಕಿತ್ತಾ ನೀನು? ಅವರ ಕುಟುಂಬಕ್ಕೆ ಹೇಗೆ ಸಾಂತ್ವನ ತುಂಬೋದು, ನಮ್ಮಲ್ಲಿರುವ ಶಕ್ತಿಯನ್ನು ಶಿವಣ್ಣನಿಗೆ, ರಾಘಣ್ಣನಿಗೆ ಬಗೆದು ಕೊಡಲು ಸಾಧ್ಯವೇ? ಯಾರಿಗೂ ಇಂತ ಶಿಕ್ಷೆಯನ್ನು ನೀಡಬೇಡ. ಪತ್ನಿ ಅಶ್ವಿನಿ ಇದನ್ನು ಹೇಗೆ ತಡೆದುಕೊಳ್ಳಬೇಕು? ಅವರಿಗೆ ಶಕ್ತಿ ಕೊಡು ದೇವರೇ. ಒಳ್ಳೆಯವರಿಗೆ ಕಾಲ ಇಲ್ಲ ಅನ್ನೋದನ್ನ ಈ ಮೂಲಕ ಅರ್ಥ ಮಾಡಿಸಿದೆ,'' ಎಂದು ಅತ್ತಿದ್ದಾರೆ ವಿನೋದ್ ರಾಜ್.
''ಹತ್ತಿರದಲ್ಲಿ ಇಲ್ಲದೇ ಇರಬಹುದು. ಆದರೆ ನಮಗೆ ಅವರನ್ನು ಕಂಡರೇ, ಅವರಿಗೆ ನಮ್ಮನ್ನು ಕಂಡರೇ ತುಂಬ ಪ್ರೀತಿ ಇದೆ. ಮೊನ್ನೆ ಕೂಡ ಶಿವಣ್ಣ ಭಜರಂಗಿ 2 ಸಿನಿಮಾ ಕಾರ್ಯಕ್ರಮದಲ್ಲಿ ನನ್ನನ್ನು ನೆನಪಿಸಿಕೊಂಡಿದ್ದಾರೆ. ನಾನು ಡ್ಯಾನ್ಸ್ ಚೆನ್ನಾಗಿ ಮಾಡುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ. ಆಗ ಪುನೀತ್ ಕೂಡ ಅಲ್ಲೆ ಇದ್ದರು. ಇದನ್ನೆಲ್ಲ ನೆನಪಿಸಿಕೊಂಡರೇ ಎಷ್ಟು ಚೆನ್ನಾಗಿದ್ದ ಕುಟುಂಬದಲ್ಲಿ ಇಂತಹ ಬಿರುಕು ಯಾಕೆ ಆಯಿತು ಗೊತ್ತಾಗುತ್ತಿಲ್ಲ. ದೇವರು ಅವರ ಕುಟುಂಬಕ್ಕೆ ಶಕ್ತಿ ತಡೆದುಕೊಳ್ಳುವ ಎಲ್ಲಾ ಶಕ್ತಿ ನೀಡಲಿ,'' ಎಂದಿದ್ದಾರೆ.

ಅಲ್ಲೆ ಇದ್ದ ಹಿರಿಯ ನಟಿ ಲೀಲಾವತಿ ಕೂಡ ಪುನೀತ್ ಸಾವಿಗೆ ಕಂಬನಿ ಮಿಡಿದಿದ್ದು, ಮಾತನಾಡಲು ಸಾಧ್ಯವಾಗದಂತೆ ಅತ್ತಿದ್ದಾರೆ. ಯಾರದ್ದೊ ತಪ್ಪಿಗೆ ಯಾರಿಗೆ ಶಿಕ್ಷೆ ದೇವರೇ ಎಂದು ರೋದಿಸಿದ್ದಾರೆ. ''ಮಗನಂತಿದ್ದ ಅಪ್ಪು ಇನ್ನು ಇಲ್ಲ. ಯಾಕೆ ಇಷ್ಟು ಆತುರ. ಒಳ್ಳೆಯವರನ್ನು ಭೂಮಿಮೇಲೆ ಬದುಕಲು ಬಿಡಲು ಯಾಕೆ ಬಿಡೋದಿಲ್ಲ ನೀನು. ಇಂತಹ ಒಂದೊಂದೇ ದುರಂತಗಳನ್ನು ಯಾಕೆ ಕೊಡುತ್ತೀಯಾ? ನಮ್ಮಂಥಹ ಹಿರಿ ಜೀವಗಳನ್ನು ನಿನಗೆ ಕರೆಸಿಕೊಳ್ಳಲು ಆಗೋದಿಲ್ಲವೇ,'' ಎಂದು ಅಳುತ್ತಲೇ ಮಾತನಾಡಿದ್ದಾರೆ ಹಿರಿಯ ನಟಿ ಲೀಲಾವತಿ.
ಚಿತ್ರರಂಗದ ಹಲವರು ಪುನೀತ್ ಸಾವನ್ನು ಅರಗಿಸಿಕೊಳ್ಳೊದಕ್ಕೆ ಸಾಧ್ಯವಾಗದೇ ಇನ್ನು ಶಾಕ್ನಲ್ಲೆ ಇದ್ದಾರೆ. ಈಗಲೂ ಕೂಡ ಅಪ್ಪು ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ರಾಜಕೀಯ ಗಣ್ಯರು, ಸಿನಿಮಾ ರಂಗದವರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ನಾಳೆ ಪುನೀತ್ ಅಂತ್ಯಸಂಸ್ಕಾರ ನೆರವೇರಲಿದೆ.


Click it and Unblock the Notifications











