Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಷ್ಟದಲ್ಲಿದ್ದೇನೆ ಸಹಾಯ ಮಾಡಿ ಎಂದು ಕೈ ಮುಗಿದ ಹಿರಿಯ ನಿರ್ದೇಶಕ
ಚಿತ್ರರಂಗದಲ್ಲಿ ಹಲವಾರು ವರ್ಷ ದುಡಿದ ಹಲವು ಹಿರಿಯ ನಟರು, ನಿರ್ದೇಶಕರು ಈಗ ಮೂಲೆಗುಂಪಾಗಿದ್ದಾರೆ. ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ತೆವಳುತ್ತಾ ಜೀವನ ನಡೆಸುತ್ತಿದ್ದಾರೆ. ಲಾಕ್ಡೌನ್ ಅಂತೂ ಅವರನ್ನು ಇನ್ನಷ್ಟು ಹೈರಾಣ ಮಾಡಿದೆ. ಇದೀಗ ಕನ್ನಡದ ಹಿರಿಯ ನಿರ್ದೇಶಕ ಎಸ್.ಉಮೇಶ್ ಇಂಥಹುದೇ ಸಂಕಷ್ಟಕ್ಕೆ ಸಿಲುಕಿದ್ದು ಸಹಾಯಕ್ಕೆ ಅಂಗಲಾಚಿದ್ದಾರೆ.
Recommended Video
ವಿಡಿಯೋ ಒಂದರಲ್ಲಿ ತಮ್ಮ ಕಷ್ಟ ಹೇಳಿಕೊಂಡಿರುವ ಉಮೇಶ್, ತಮ್ಮ ಚಿತ್ರರಂಗ ಪ್ರವೇಶ, ನಿರ್ದೇಶಿಸಿದ ಚಿತ್ರಗಳು, ನಷ್ಟ ಅನುಭವಿಸಲು ಕಾರಣ. ಈಗಿನ ಆರೋಗ್ಯ ದುಸ್ಥಿತಿ, ಆಗುತ್ತಿರುವ ವೆಚ್ಚ, ಅನುಭವಿಸುತ್ತಿರುವ ಸಂಕಷ್ಟಗಳು ಎಲ್ಲವನ್ನೂ ಜನರ ಮುಂದೆ ಬಿಚ್ಚಿಟ್ಟು ''ಸಹಾಯ ಮಾಡಿ, ವಿನಮ್ರವಾಗಿ ಸ್ವೀಕರಿಸುತ್ತೇನೆ'' ಎಂದಿದ್ದಾರೆ.
''ನಾನು 1973 ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದೆ. ಸಹಾಯಕ ನಿರ್ದೇಶಕ, ಸಂಕಲನಕಾರನಾಗಿ ಹಲವು ವರ್ಷ ಕೆಲಸ ಮಾಡಿದ ಮೇಲೆ 1988 ರಲ್ಲಿ ಕಾಶಿನಾಥ್, ಭವ್ಯ ನಟನೆಯ 'ಅವಳೇ ನನ್ನ ಹೆಂಡ್ತಿ' ಸಿನಿಮಾ ಮೂಲಕ ನಿರ್ದೇಶಕನಾದೆ. ಮೊದಲ ಸಿನಿಮಾ ಸೂಪರ್ ಹಿಟ್ ಆಯ್ತು. ತಮಿಳು, ತೆಲುಗು, ಹಿಂದಿಗೆ ರೀಮೇಕ್ ಆಯಿತು. ತಮಿಳಿನಲ್ಲಿ ನಾನೇ ನಿರ್ದೇಶನ ಮಾಡಿದೆ. ಆ ಸಿನಿಮಾದಿಂದ ನನಗೆ ಸಾಕಷ್ಟು ಒಳ್ಳೆಯ ಹೆಸರು ಬಂತು'' ಎಂದಿದ್ದಾರೆ ಉಮೇಶ್.
'ಬನ್ನಿ ಒಂದ್ಸಲ ನೋಡಿ' ಸಿನಿಮಾದಿಂದ ಭಾರಿ ನಷ್ಟ
''ತಮಿಳಿನಲ್ಲಿ ಎರಡು ಸಿನಿಮಾ ನಿರ್ದೇಶನ ಮಾಡಿದೆ. ಆದರೆ ಕನ್ನಡ ಚಿತ್ರರಂಗದಲ್ಲಿಯೇ ನೆಲೆ ನಿಲ್ಲಬೇಕು ಎಂಬ ಆಸೆಯಿಂದ ಅವಕಾಶಗಳಿದ್ದರೂ ಕನ್ನಡ ಚಿತ್ರರಂಗಕ್ಕೆ ಮರಳಿದೆ. ವಿನೋದ್ ರಾಜ್, ಶ್ರುತಿ, ಧಿರೇಂದ್ರ ಗೋಪಾಲ್ ಇನ್ನಿತರ ನಟರನ್ನು ಹಾಕಿಕೊಂಡು ಮಾಡಿದ 'ಬನ್ನಿ ಒಂದ್ಸಲ ನೋಡಿ' ಸಿನಿಮಾ ಫ್ಲಾಪ್ ಆಯಿತು. ಆ ಸಿನಿಮಾಕ್ಕೆ ನಾನೇ ನಿರ್ಮಾಪಕ ಆಗಿದ್ದೆ. ಆ ಸಿನಿಮಾದಿಂದ 1990ರಲ್ಲಿಯೇ ಏಳು ಲಕ್ಷಕ್ಕೂ ಹೆಚ್ಚು ಹಣ ಸಾಲವಾಗಿ ಹೊತ್ತೆ. ನಂತರವೂ ಇನ್ನೆರಡು ಸಿನಿಮಾ ನಿರ್ಮಾಣ ಮಾಡಿ ಬಹಳ ನಷ್ಟ ಅನುಭವಿಸಿದೆ'' ಎಂದು ತಾವು ನಷ್ಟ ಅನುಭವಿಸಿದ್ದು ಹೇಗೆ ಎಂದು ವಿವರಿಸಿದ್ದಾರೆ ಉಮೇಶ್.
ಹಲವು ಸಿನಿಮಾ ನಿರ್ದೇಶನ, ಸಂಕಲನ, ನಿರ್ಮಾಣ
''ನಾನು ಒಟ್ಟು 24 ಸಿನಿಮಾ ನಿರ್ದೇಶನ ಮಾಡಿದ್ದೇನೆ. ಹಲವು ಸಿನಿಮಾಕ್ಕೆ ಸಂಕಲನ ಮಾಡಿದ್ದೇನೆ. ಮೂರು ಸಿನಿಮಾ ನಿರ್ಮಾಣ ಮಾಡಿದ್ದೇನೆ. ಆದರೆ ಚಿತ್ರರಂಗ ಇಷ್ಟೋಂದು ಬದಲಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಹಲವಾರು ಮಂದಿ ಹೊಸಬರ ಬಂದರು, ನಮಗೆ ಅವಕಾಶಗಳು ಇಲ್ಲವಾಯಿತು. ಹಿರಿಯರು ಮೂಲೆಗುಂಪಾದರು. ಇದಕ್ಕೆ ನಾನು ಯಾರನ್ನೂ ಹೊಣೆ ಮಾಡುತ್ತಿಲ್ಲ. ಸರಿಯಾಗಿ ಯೋಜನೆ ಮಾಡಿ ನಿರ್ಣಯ ತೆಗೆದುಕೊಂಡಿದ್ದಿದ್ದರೆ ಬೇರೆ ರೀತಿಯ ಬದುಕು ನಾನು ಬದುಕಬಹುದಿತ್ತು'' ಎಂದು ಸ್ವ-ವಿಮರ್ಶೆ ಮಾಡಿಕೊಂಡಿದ್ದಾರೆ ಉಮೇಶ್.
ಕಳೆದ ವರ್ಷ ಕಿಡ್ನಿ ನಿಷ್ಕ್ರಿಯಗೊಂಡಿತು: ಉಮೇಶ್
ಆರೋಗ್ಯ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಉಮೇಶ್, ''ಕಳೆದ ವರ್ಷ ಲಾಕ್ಡೌನ್ ಆರಂಭವಾದಾಗ ನನಗೆ ಒಂದು ಕಿಡ್ನಿ ನಿಷ್ಕ್ರಿಯಗೊಂಡಿತು. ಆಗ ಕೆಲ ತಿಂಗಳು ನಾನು ಬಹಳ ಕಷ್ಟ ಅನುಭವಿಸಿದೆ. ಎದ್ದು ನಡೆಯಲಾಗದ ಸ್ಥಿತಿ. ಆದರೆ ವೈದ್ಯರು ನನ್ನನ್ನು ಕಾಪಾಡಿದರು. ಡಯಾಲಿಸಿಸ್ಗೆ ಹೋಗದೆ ಔಷಧಗಳಲ್ಲಿಯೇ ನನಗೆ ಚಿಕಿತ್ಸೆ ನೀಡಿದರು. ಆದರೆ ಇರುವ ಮತ್ತೊಂದು ಕಿಡ್ನಿ ಯಾವಾಗ ಸಮಸ್ಯೆ ಕೊಡುತ್ತದೆ ಎಂದು ಹೇಳಲಾಗದು. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ'' ಎಂದು ಸಮಸ್ಯೆ ಹೇಳಿಕೊಂಡರು ಉಮೇಶ್.
ಬಾಡಿಗೆ ಕಟ್ಟಿಲ್ಲ, ಮಗನ ಶಾಲಾ ಶುಲ್ಕ ಪಾವತಿಸಿಲ್ಲ: ಉಮೇಶ್
''ವಾರಕ್ಕೆ ಎರಡು ಇಂಜೆಕ್ಷನ್ಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ. ಒಂದು ಚುಚ್ಚುಮದ್ದಿಗೆ ಸುಮಾರು 2600 ರು. ಖರ್ಚಾಗುತ್ತದೆ. ಈ ಹಿಂದಿನ ಕೆಲವು ಇಂಜೆಕ್ಷನ್ಗಳಿಗೆ ಕೆಲವು ದಾನಿಗಳು ಸಹಾಯ ಮಾಡಿದ್ದಾರೆ. ಆದರೆ ಡಯಾಲಿಸಿಸ್ಗೆ ಹೋದ ಮೇಲೆ ಅದೆಷ್ಟು ಖರ್ಚಾಗುತ್ತದೆಯೋ ಗೊತ್ತಿಲ್ಲ. ಮನೆ ಬಾಡಿಗೆ ಕಟ್ಟಿಲ್ಲ. ಎಸ್ಎಸ್ಎಲ್ಸಿ ಓದುತ್ತಿರುವ ಮಗನ ಶಾಲಾ ಶುಲ್ಕ ಸಹ ಕಟ್ಟಿಲ್ಲ. ಬಹಳ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯನ್ನು ಎದುರಿಸುತ್ತಿದ್ದೇನೆ'' ಎಂದು ಬೇಸರದಿಂದಲೇ ಹೇಳಿದ್ದಾರೆ.
ಸಹಾಯ ಮಾಡಿದರೆ ಸ್ವೀಕರಿಸುವೆ: ಉಮೇಶ್
''ಚಿತ್ರರಂಗದಲ್ಲಿ ಹಲವರು ಉತ್ತಮ ಹೃದಯದವರಿದ್ದಾರೆ. ಕೆಲವರು ಈ ಹಿಂದೆಯೂ ನನಗೆ ಸಹಾಯ ಮಾಡಿದ್ದಾರೆ. ಈಗ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ ಯಾರಾದರೂ ಸಹಾಯ ಮಾಡಿದರೆ ಅದನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ'' ಎಂದು ಕೈ ಮುಗಿದಿದ್ದಾರೆ ಉಮೇಶ್. ಅವರ ಖಾತೆ ಸಂಖ್ಯೆ. Canara bank, A/c no.2513101010498, Kamakya complex, BSK 3rd stage, B,lore 560058, IFSC CODE: CNRB OOO2513