ಅಪ್ಪನ ಹಾದಿ ಹಿಡಿದ ಶಿವಣ್ಣ: ಮಾಡಿದರು 'ಬೆಳಕು ನೀಡುವ' ಕಾರ್ಯ
ಡಾ.ರಾಜ್ಕುಮಾರ್ ಹಾದಿಯನ್ನೇ ಹಿಡಿದಿರುವ ಶಿವರಾಜ್ ಕುಮಾರ್ ನೇತ್ರದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.
ಡಾ.ರಾಜ್ಕುಮಾರ್ ಅವರು ನೇತ್ರವನ್ನು ದಾನ ಮಾಡಲಾದ ನಾರಾಯಣ ನೇತ್ರಾಲಯದಲ್ಲಿಯೇ ಶಿವರಾಜ್ ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿ ಸಹಿ ಮಾಡಿದ್ದಾರೆ.
ಇತ್ತೀಚೆಗಷ್ಟೆ ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾ 'ಅಕ್ಷಿ' ತಂಡದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅವರು ನೇತ್ರದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ, ಎಲ್ಲರೂ ನೇತ್ರದಾನ ಮಾಡುವಂತೆ ಮನವಿ ಮಾಡಿದರು.

1994 ರಲ್ಲಿ ಡಾ.ರಾಜ್ಕುಮಾರ್ ನೇತ್ರ ಬ್ಯಾಂಕ್ ಸ್ಥಾಪನೆ ಆಗಿತ್ತು. ಅಂದು ಡಾ.ರಾಜ್ಕುಮಾರ್ ಅವರು ನೇತ್ರ ಬ್ಯಾಂಕ್ ಉದ್ಘಾಟನೆ ಮಾಡಿ, ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದರು. ರಾಜ್ಕುಮಾರ್ ಅವರ ಮರಣಾನಂತರ ಅವರ ನೇತ್ರವನ್ನು ಸಂರಕ್ಷಿಸಿ ಕಣ್ಣಿಲ್ಲದವರಿಗೆ ನೀಡಲಾಯಿತು.
ಡಾ.ರಾಜ್ಕುಮಾರ್ ಅವರ ಮರಣಾನಂತರ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಿತ್ತು. ರಾಜ್ಕುಮಾರ್ ಮಾಡಿದ ಮಾದರಿ ಕಾರ್ಯವನ್ನು ಲಕ್ಷಾಂತರ ಮಂದಿ ಅನುಸರಿಸಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ಸಹ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದ್ದು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚು-ಹೆಚ್ಚು ಸಂಖ್ಯೆಯಲ್ಲಿ ನೇತ್ರದಾನ ಮಾಡುವಂತೆ ಕರೆ ನೀಡಿದ್ದಾರೆ.
Recommended Video
'ಅಕ್ಷಿ' ಸಿನಿಮಾವು ನೇತ್ರದಾನದ ವಿಷಯವನ್ನು ವಸ್ತುವಾಗಿಸಿಕೊಂಡು ನಿರ್ಮಿಸಿರುವ ಸಿನಿಮಾ ಆಗಿದೆ. ಸಿನಿಮಾ ತೆಗೆಯಲು ಡಾ.ರಾಜ್ಕುಮಾರ್ ಅವರೇ ಸ್ಪೂರ್ತಿ ಎಂದು ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.


Click it and Unblock the Notifications











