ಶಿವಣ್ಣ ಅಂದರ್ ಬಾಹರ್ ಚಿತ್ರದ ಲೇಟೆಸ್ಟ್ ನ್ಯೂಸ್

ಈ ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರು ಸೊಗಸಾದ ಗೀತೆಗಳನ್ನು ರಚಿಸಿಕೊಟ್ಟಿದ್ದಾರೆ. "ಮಳೆಯಲಿ ಮಿಂದ ಹೂವಿನ ಹಾಗೆ..." ಎಂಬುದು ಒಂದು ಹಾಡು. 'ಓಂ' ಚಿತ್ರದ ಬಳಿಕ ಶಿವಣ್ಣ ಅವರು ಒಪ್ಪಿಕೊಂಡಿರುವ ಅತ್ಯುತ್ತಮ ಅಂಡರ್ ವರ್ಲ್ಡ್ ಸಬ್ಜೆಕ್ಟ್ ಇದ್ದಾಗಿದೆಯಂತೆ. ಶಿವಣ್ಣ ಅಭಿನಯಿಸುತ್ತಿರುವ 103ನೇ ಚಿತ್ರ ಇದಾಗಿದೆ. ಆದರೆ ನಿರ್ದೇಶಕ ಫಣೀಶ್ ಅವರಿಗೆ ಇದು ಚೊಚ್ಚಲ ಚಿತ್ರ.
ನುರಿತ ಕಲಾವಿದರು, ತಂತ್ರಜ್ಞರು ಚಿತ್ರದ ಬೆನ್ನಿಗಿರುವ ಕಾರಣ 'ಅಂದರ್ ಬಾಹರ್' ಸಿನೆಮಾ ಚಿತ್ರೋದ್ಯಮದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಈ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಕಡಲತೀರದ ಮುರಡೇಶ್ವರದಲ್ಲಿ ನಡೆದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಶಿವಣ್ಣ, ಅರುಂಧತಿನಾಗ್, ಶ್ರೀನಾಥ್ ಮುಂತಾದವರು ಭಾಗವಹಿಸಿದ್ದರು.
ಗೋಕರ್ಣದಿಂದ ಗೋವಾವರೆಗಿನ ಚೇಸಿಂಗ್ ಸನ್ನಿವೇಶ ಹಾಗೂ ಗೋಕರ್ಣ, ಹೊನ್ನವಾರದಲ್ಲಿ ಕೆಲವು ಮಾತಿನ ಭಾಗದ ಚಿತ್ರೀಕರಣವನ್ನು ನಿರ್ದೇಶಕ ಫಣೀಶ್ ಚಿತ್ರಿಸಿಕೊಂಡಿದ್ದಾರೆ. ಸದ್ಯ ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ನಾಲ್ಕು ಹಾಡುಗಳು ಹಾಗೂ ಒಂದು ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ.
ಫಣೀಶ್ ಎಸ್ ರಾಮನಾಥಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಪಾರ್ವತಿ ಮೆನನ್ ಚಿತ್ರದ ನಾಯಕಿಯಾಗಿದ್ದಾರೆ. ಅರುಂಧತಿನಾಗ್, ಶ್ರೀನಾಥ್, ಶಶಿಕುಮಾರ್, ಸೃಜನ್ಲೋಕೇಶ್, ರಘುರಾಂ, ಚಸ್ವ, ಸ್ಪೂರ್ತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಆಸ್ಕರ್ ಪ್ರಶಸ್ತಿ ಪಡೆದ ಜೈಹೋ ಹಾಡಿನಲ್ಲಿ ಹಾಡಿದ್ದ ವಿಜಯಪ್ರಕಾಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಮೂಲತಃ ಮೈಸೂರಿನವರಾದ ವಿಜಯ್ ಪ್ರಕಾಶ್ ಗಾಯಕರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಮುಂತಾದವ ಬಳಿ ಸಂಗೀತದ ಅನುಭವ ಪಡೆದುಕೊಂಡಿದ್ದಾರೆ.
ಶೇಖರ್ ಚಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಜೋ.ನಿ.ಹರ್ಷ ಸಂಕಲನ, ಥ್ರಿಲ್ಲರ್ಮಂಜು, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಇಮ್ರಾನ್, ಹರ್ಷ, ಚಿನ್ನಿಪ್ರಕಾಶ್, ಪ್ರದೀಪ್ ಅಂತೋಣಿ ನೃತ್ಯ ನಿರ್ದೇಶನ ಅಂದರ್ ಬಾಹರ್ ಚಿತ್ರಕ್ಕಿದೆ. ಲೇಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ ಮೂಲಕ ರಜನೀಶ್, ಪ್ರಸಾದ್, ಅಂಬರೀಶ್, ಭಾಸ್ಕರ್, ಅವಿನಾಶ್ ಚಿತ್ರದ ನಿರ್ಮಾಪಕರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











