ಶಿವಣ್ಣ 'ಶಿವ'ನಿಗೆ ಎಲ್ಲೆಡೆ ಭರ್ಜರಿ ನಿರೀಕ್ಷೆ, ಪ್ರಚಾರ

ಕಳೆದ ಜುಲೈ 27ರಂದೇ ತೆರೆಗೆ ಬರಬೇಕಾಗಿದ್ದ ಚಿತ್ರ, ಗ್ರಾಫಿಕ್ಸ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನಂತರ ಆಗಸ್ಟ್ 10 ರಂದು ಬಿಡುಗಡೆ ಘೋಷಿಸಿ ಚಿತ್ರತಂಡಕ್ಕೆ ಆಗಲೂ ಚಿತ್ರವನ್ನು ತೆರೆಗೆ ತರಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿಕೊಂಡಿರುವ ಚಿತ್ರತಂಡ, ಇದೇ 24ಕ್ಕೆ ತೆರೆಮೇಲೆ ವಿಜೃಂಭಿಸಲಿದೆ. ಆದರೆ ಲೇಟಾದರೂ ಲೇಟೆಸ್ಟ್ ಆಗಿದೆ ಎಂಬುದು ಚಿತ್ರತಂಡದ ಹೇಳಿಕೆ.
ರಾಜ್ಯದಾದ್ಯಂತ ಶಿವಣ್ಣರ ಅಭಿಮಾನಿ ಸಂಘಗಳು 'ಶಿವ' ಚಿತ್ರಕ್ಕೆ ವಿಶೇಷ ಸ್ವಾಗತ ಕೋರಲು ಸಜ್ಜಾಗಿದ್ದು ಈಗಾಗಲೇ ಸಂತೋಷ್ ಚಿತ್ರಮಂದಿರದ ಎದುರು ಬೃಹತ್ ಶಿವನ ಮೂರ್ತಿಯನ್ನು ಇಡಲಾಗಿದೆ. ನಾಳೆ ಶಿವನ ಮೂರ್ತಿಗೆ ಹಾಗೂ ಪಕ್ಕದಲ್ಲಿ ನಿಲ್ಲಿಸಲಾಗಿರುವ ಶಿವರಾಜ್ ಕುಮಾರ್ ಮೂರ್ತಿಗೆ ಹೂವಿನ ಹಾರ ಹಾಗೂ ಹಾಲಿನ ಅಭಿಷೇಕ ನಡೆಯಲಿದೆ. ಶಿವ ಚಿತ್ರದ ನಿರ್ಮಾಪಕ ಹಾಗೂ ಶಿವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಕೆಪಿ ಶ್ರೀಕಾಂತ್ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಲು ಸಿದ್ಧರಾಗಿದ್ದಾರೆ.
ಜೋಗಯ್ಯ ನಂತರ ಶಿವಣ್ಣ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಂದಿದ್ದ ಜೋಗಯ್ಯ ಕೂಡ 'ಫ್ಲಾಪ್'. ಹೀಗಾಗಿ ಶಿವ ಚಿತ್ರದ ಬಗ್ಗೆ ಶಿವಣ್ಣರ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಭಾರಿ ಭರವಸೆ ಮೂಡಿದೆ. ಈ ಹಿಂದಿನ ಓಂ ಪ್ರಕಾಶ್ ರಾವ್ ಹಾಗೂ ಶಿವಣ್ಣ ಜೋಡಿಯ ಚಿತ್ರ 'ಎಕೆ 47' ಸೂಪರ್ ಹಿಟ್ ಆಗಿದ್ದೂ ಕೂಡ ಈ ಪರಿ ನಿರೀಕ್ಷೆಗೆ ಕಾರಣ. ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆರಾಜ್ಯದ ಘಟಾನುಘಟಿಗಳೂ ಕೂಡ ಈ ಚಿತ್ರದ ಬಗ್ಗೆ ನಿರೀಕ್ಷೆ ಹೊಂದಿರುವುದು ವಿಶೇಷ.
ಕೆಪಿ ಶ್ರೀಕಾಂತ್ ಬಹುನಿರೀಕ್ಷೆ ನಿರ್ಮಾಣದ ಈ ಚಿತ್ರಕ್ಕೆ ನಾಯಕ ಶಿವರಾಜ್ ಕುಮಾರ್ ಎದುರು ಮೊದಲ ಬಾರಿಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿದ್ದಾರೆ. ಶಿವಣ್ಣರ ಮೈಲಾರಿ ನಂತರ ಮತ್ತೆ ಈ 'ಶಿವ'ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಉಳಿದಂತೆ ಚಿತ್ರವು ತಾಂತ್ರಿಕವಾಗಿ ತುಂಬಾ ಅದ್ದೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ. ಅದರಲ್ಲೂ ವಿಶೇಷ ಗ್ರಾಫಿಕ್ಸ್ ಬಳಕೆ ಈ ಚಿತ್ರದ ಹೈಲೈಟ್. ಒಟ್ಟಿನಲ್ಲಿ, ಶಿವಣ್ಣರ ಅಭಿಮಾನಿಗಳು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ನಾಳೆಗಾಗಿ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











