ಮಾಲಾಶ್ರೀ 'ವೀರ' ಅಂದರ್; ಶಿವಣ್ಣ ಚಿತ್ರ ಬಾಹರ್
ಎಲ್ಲಾ ಸುಸೂತ್ರವಾಗಿ, ಸುಗಮವಾಗಿ ನಡೆದಿದ್ದರೆ ಮಾರ್ಚ್ 29ಕ್ಕೆ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರ 'ಅಂದರ್ ಬಾಹರ್' ಚಿತ್ರ ಪ್ರೇಕ್ಷಕರ ಮುಂದೆ ಬರಬೇಕಾಗಿತ್ತು. ಆದರೆ ಅದೇ ಸಮಯಕ್ಕೆ ನಿರ್ಮಾಪಕರ ನಡುವೆ ತಿಕ್ಕಾಟ ಶುರುವಾಯಿತು.
ಈ ಚಿತ್ರಕ್ಕೆ ಒಟ್ಟು ಆರು ಮಂದಿ ನಿರ್ಮಾಪಕರು. ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಅವಿನಾಶ್, ಜಗದೀಶ್ ಹಾಗೂ ಶ್ರೀನಿವಾಸ್. ಆದರೆ ನಿರ್ಮಾಪಕರಲ್ಲಿ ಒಬ್ಬರಾದ ಜಗದೀಶ್ ಅವರು ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಫಿಲಂ ಚೇಂಬರ್ ಮೆಟ್ಟಿಲೇರಿಬಿಟ್ಟರು.
ಬಳಿಕ ಸಮಸ್ಯೆಯನ್ನು ನಿರ್ಮಾಪಕರೇ ಒಂದೆಡೆ ಕೂತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿತ್ರ ಏಪ್ರಿಲ್ 5ರಂದು ತೆರೆಗೆ ಅಪ್ಪಳಿಸುತ್ತಿದೆ. ಇದರ ಲಾಭ ಮಾಲಾಶ್ರೀ ಅವರ 'ವೀರ' ಚಿತ್ರಕ್ಕಾಗಿದೆ. ಮಾರ್ಚ್ 29ಕ್ಕೆ ವೀರ ಬಿಡುಗಡೆಯಾಗುತ್ತಿದೆ. ಶಿವಣ್ಣನ ಚಿತ್ರ ಮುಂದಕ್ಕೆ ಹೋಗಿದೆ.
ಮಾಲಾಶ್ರೀ 'ವೀರ' ಚಿತ್ರ ಅಂದರ್ ಆಗುತ್ತಿದ್ದರೆ ಶಿವಣ್ಣನ ಚಿತ್ರ ಬಾಹರ್ ಆಗಿದೆ. ಒಟ್ಟಿನಲ್ಲಿ ಈ ಅಂದರ್ ಬಾಹರ್ ಗಲಾಟೆಯಲ್ಲಿ ವೀರ ಚಿತ್ರಕ್ಕೆ ಲಾಭವಾಗಿದೆ. ಅಂದರ್ ಬಾಹರ್ ಚಿತ್ರವನ್ನು ಸರಿಸುಮಾರು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.ಒಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಂದರ್ ಬಾಹರ್ ಬಿಡುಗಡೆ ಮಾಡಲಾಗುತ್ತಿದೆ. ಫಣೀಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ ಟಿವಿ ರೈಟ್ಸ್ ಸುವರ್ಣ ವಾಹಿನಿ ಪಾಲಾಗಿದೆ. ಮೂಲಗಳ ಪ್ರಕಾರ ರು.2 ಕೋಟಿ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ ಎಂಬುದು ಅಂದರ್ ಕಾ ಬಾತ್.
ಚಿತ್ರದಲ್ಲಿ ಶಿವಣ್ಣನಿಗೆ ಸಾಥ್ ನೀಡುತ್ತಿರುವವರು ಪಾರ್ವತಿ ಮೆನನ್. ಪಾತ್ರವರ್ಗದಲ್ಲಿ ಶಶಿಕುಮಾರ್, ಅರುಂಧತಿ ನಾಗ್ ಇದ್ದಾರೆ. ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದು ಶೇಖರ್ ಚಂದ್ರು ಛಾಯಾಗ್ರಹಣವಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












