ಶಿವಣ್ಣ ಮಹತ್ವಾಕಾಂಕ್ಷಿ 'ಬಾದ್ ಷಾ'ಗೆ ಬಾಹುಬಲಿ ತಂಡ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು 'ಬಾದ್ ಷಾ' ಆಗಲು ಅಣಿಯಾಗುತ್ತಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ತಮ್ಮ ಮುಂದಿನ ಚಿತ್ರ 'ಬಾದ್ ಷಾ' ಅತಿ ಶೀಘ್ರದಲ್ಲೇ ಎಂದು ಚಂದ್ರು ಪ್ರಕಟಿಸಿದ್ದಾರೆ.
ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ 'ಮೈಲಾರಿ' ಚಿತ್ರ ಮಾಡಿ ಗೆದ್ದಿದ್ದರು ಚಂದ್ರು. ಇದೀಗ ಮತ್ತೊಂದು ಭರ್ಜರಿ ಗೆಲುವಿಗಾಗಿ ಚಂದ್ರು ಸಿದ್ಧತೆ ನಡೆಸಿದ್ದಾರೆ. 'ಬಾದ್ ಷಾ' ಚಿತ್ರ ಇಷ್ಟೊತ್ತಿಗೆ ಸೆಟ್ಟೇರಬೇಕಾಗಿತ್ತು. ಆದರೆ ಆರ್ ಚಂದ್ರು ಅವರಿಗೆ ಟಾಲಿವುಡ್ ನಿಂದ ಕರೆಬಂದ ಕಾರಣ ಅವರು ಟಿ ಟೌನ್ ಗೆ ಹಾರಿದರು. [ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಈಗ 'ಬಾದ್ ಷ']

ತಮ್ಮ 'ಚಾರ್ಮಿನಾರ್' ಚಿತ್ರದ ತೆಲುಗು ರೀಮೇಕ್ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಮುಗಿಸಿಕೊಂಡು ಮತ್ತೆ ಸ್ಯಾಂಡಲ್ ವುಡ್ ಗೆ ವಾಪಸ್ ಆಗಿದ್ದಾರೆ. ಇದೀಗ 'ಬಾದ್ ಷಾ' ಪ್ರೀ ಪ್ರೊಡಕ್ಷನ್ ವರ್ಕ್ ಮಗ್ನರಾಗಿದ್ದಾರೆ ಚಂದ್ರು. ತಮ್ಮ ಈ ಮಹತ್ವಾಕಾಂಕ್ಷಿ ಚಿತ್ರಕ್ಕಾಗಿ ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಟೀಂ ಸಹಾಯ ಪಡೆಯಲಿದ್ದಾರೆ ಚಂದ್ರು.
ಬಾದ್ ಷಾ ಚಿತ್ರದ ಸ್ರ್ಕಿಪ್ಟ್ ವರ್ಕ್ ಗಾಗಿ ಬಾಹುಬಲಿ ಟೀಂ ಕೆಲಸ ಮಾಡಲಿದೆಯಂತೆ. ಇದರ ಜೊತೆಗೆ ಟಾಲಿವುಡ್ ನ ಸ್ಟಾರ್ ನಟಿಯೊಬ್ಬರನ್ನು ಸ್ಯಾಂಡಲ್ ವುಡ್ ಗೆ ಕರೆತರುವ ಸುದ್ದಿಯೂ ಇದೆ. ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ತಿಪಟೂರು ಮೈಲಾರಪ್ಪ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬ್ರಹ್ಮ' ಚಿತ್ರದ ಸಕ್ಸಸ್ ಮೀಟ್ ನಲ್ಲಿ 'ಬಾದ್ ಷಾ' ಚಿತ್ರ ಘೋಷಿಸಿದ್ದರು ಚಂದ್ರು. ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದ ಟೈಟಲ್ ಲಾಂಚ್ ಮಾಡಿದ್ದರು. ಇದೀಗ ಚಿತ್ರ ಸೆಟ್ಟೇರಿಸಲು ಸೂಕ್ತ ಮುಹೂರ್ತಕ್ಕೆ ಕಾದಿದ್ದಾರೆ ಚಂದ್ರು. (ಏಜೆನ್ಸೀಸ್)


Click it and Unblock the Notifications











