ಶ್ರೀನಗರದಲ್ಲೆಲ್ಲಾ ಬರ್ತಡೇ ಬಾಯ್ ಕಿಟ್ಟಿಯ ಕಟೌಟುಗಳು
ಸ್ಯಾಂಡಲ್ ವುಡ್ ಮಂದಿಗೆ ಇದೀಗ ಮತ್ತೆ ಸಂಭ್ರಮ. ಮೊನ್ನೆ ತಾನೇ 'ಲೂಸ್ ಮಾದ' ಯೋಗೇಶ್ 25ನೇ ವರ್ಷಕ್ಕೆ ಕಾಲಿಟ್ಟು, ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡರು ಅಲ್ವಾ.
ಇಂದು ಇನ್ನೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ನಟ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಅವರು ಯಾರು ಅಂತೀರಾ, ಅವರೇ ನಮ್ಮ ಡೈಮಂಡ್ ಸ್ಟಾರ್ ಶ್ರೀ ನಗರ ಕಿಟ್ಟಿ. [ಡೈಮಂಡ್ ಸ್ಟಾರ್ ಕಿಟ್ಟಿಗೆ ಎಸ್.ಮಹೇಂದರ್ ಆಕ್ಷನ್ ಕಟ್]
ಕಿಟ್ಟಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಶ್ರೀನಗರದ ಬೀದಿ ಬೀದಿಗಳಲ್ಲಿ ಸಿಹಿ ಹಂಚುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಅವರ ಭಾವಚಿತ್ರವಿರುವ ಫ್ಲೆಕ್ಸ್, ಕಟೌಟ್ ಗಳು ಬನಶಂಕರಿ, ಕತ್ರಿಗುಪ್ಪೆ, ಹನುಮಂತನಗರ ಮುಂತಾದೆಡೆ ರಸ್ತೆಯ ಇಕ್ಕೆಲಗಳಲ್ಲಿ, ಟ್ರಾಫಿಕ್ ಸಿಗ್ನಲ್ ಗಳಲ್ಲಿ ಎಲ್ಲೆಡೆ ವರ್ಣರಂಜಿತವಾಗಿ ರಾರಾಜಿಸುತ್ತಿದೆ.
'ಸಂಜು ವೆಡ್ಸ್ ಗೀತಾ' ಚಿತ್ರದಲ್ಲಿ ಮನೆಮಾತಾಗಿ, 'ಬಹುಪರಾಕ್' ಚಿತ್ರದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಬಹುಪರಾಕ್ ['ಬಹುಪರಾಕ್' ವಿಮರ್ಶೆ: ನಾನಾರೆಂಬುದು ನಾನಲ್ಲ] ಎಂದ ಶ್ರೀನಗರ ಕಿಟ್ಟಿ, ಇಂದು 38ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ, ಸಮಾಜ ಸೇವೆ ಮಾಡುವ ಮೂಲಕ, ವಿಶಿಷ್ಠವಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಶ್ರೀನಗರ ಕಿಟ್ಟಿ ಗೆಳೆಯರ ಬಳಗವು ಕಿಟ್ಟಿ ಹುಟ್ಟುಹಬ್ಬದ ಪ್ರಯುಕ್ತ, ನಾರಾಯಣ ಹೃದಯಾಲಯ-ಬೆಂಗಳೂರು ಮತ್ತು ವಿಠ್ಠಲಾ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ 'ಉಚಿತ ಹೃದಯ ಮತ್ತು ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರ' ವನ್ನು ಇಂದು ಬೆಳಿಗ್ಗೆ 9 ಗಂಟೆಯಿಂದ, ಮಧ್ಯಾಹ್ನ 3 ಗಂಟೆಯವರೆಗೆ, ಬೆಂಗಳೂರಿನ ಕೆಂಪೇಗೌಡ ಆಟದ ಮೈದಾನ, ಶಂಕರ್ ನಾಗ್ ಸರ್ಕಲ್ ಹತ್ತಿರ ಹಮ್ಮಿಕೊಂಡಿದ್ದಾರೆ. [ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಬೇಸರಕ್ಕೆ ಕಾರಣವೇನು?]
ಗಾಂಧಿನಗರದಲ್ಲಿ ಅಷ್ಟಾಗಿ ಏನೂ ಹೆಸರು ಗಳಿಸದ ಶ್ರೀನಗರ ಕಿಟ್ಟಿ ಅವರ ರೀಸೆಂಟ್ ಹಿಟ್ 'ಹುಡುಗರು' ನಂತರ 'ಬಹುಪರಾಕ್' ಬಿಟ್ಟರೆ ಇನ್ನೂ ಯಾವುದೂ ಹೆಸರು ತಂದುಕೊಡಲಿಲ್ಲಾ. ಆ ನಂತರ ರಾಗಿಣಿ, ನಿಖಿಶಾ ಪಟೇಲ್ ಜೊತೆ ಕಾಣಿಸಿಕೊಂಡ 'ನಮಸ್ತೇ ಮೇಡಂ' ಚಿತ್ರ ಮಕಾಡೆ ಮಲಗಿರೋದು ನಿಮಗೆ ಗೊತ್ತೇ ಇದೆ.
ಅದೇನೆ ಇರಲಿ ಚಿತ್ರರಂಗದಲ್ಲಿ ಯಶಸ್ವಿ ನಟ ಆಗದಿದ್ದರೇನಂತೆ, ಸಮಾಜ ಸೇವೆ ಮಾಡುವ ಮೂಲಕ ರಿಯಲ್ ಹೀರೋ ಅನ್ನಿಸಿಕೊಂಡಿರುವ ಶ್ರೀನಗರ ಕಿಟ್ಟಿ ಅವರಿಗೆ ನಮ್ಮ ಪರವಾಗಿಯೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.


Click it and Unblock the Notifications













