ಡಬ್ಬಿಂಗ್ ಗೆ ಅಂಕುಶ ಹಾಕಲು ಪ್ರಾದೇಶಿಕ ಪಕ್ಷದ ಅಗತ್ಯವಿದೆ
ಡಬ್ಬಿಂಗ್ ಚಿತ್ರಗಳಿಗೆ ವಿರೋಧ ವ್ಯಕ್ತಪಡಿಸಿದ ರಾಜ್ಯದಾದ್ಯಂತ ಕರೆಕೊಟ್ಟಿರುವ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು. ಬೆಂಗಳೂರು ಸೆಂಟ್ರಲ್ ಕಾಲೇಜು ಮೈದಾನದ ಡಾ.ರಾಜ್ ಕುಮಾರ್ ವೇದಿಕೆಯಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರು ಡಬ್ಬಿಂಗ್ ವಿರುದ್ಧ ತಮ್ಮದೇ ಆದಂತಹ ನಿಲುವನ್ನು ವ್ಯಕ್ತಪಡಿಸಿದರು. ಅವರ ಮಾತುಗಳ ಸಂಪೂರ್ಣ ಚಿತ್ರಣ ಇಲ್ಲಿದೆ.
"ಸುಮಾರು ಐವತ್ತು ವರ್ಷಗಳ ಹಿಂದೆ ಭಾಷಾವಾರು ಪ್ರಾಂತ್ಯಗಳನ್ನು ಮಾಡಿ ನಮಗೊಂದು ರಾಜ್ಯ, ತಮಿಳರಿಗೊಂದು, ತೆಲುಗರಿಗೊಂದು ಬಂಗಾಳಿಗಳಿಗೊಂದು ಎಂದು ಕೊಟ್ಟರು. ಅವರು ಕಾಂಪೌಂಡ್ ಕಟ್ಟಿಕೊಂಡು, ಬೇಲಿ ಹಾಕಿಕೊಂಡು ತಮ್ಮ ಭಾಷೆ ಹಾಗೂ ತಮ್ಮ ಜನಗಳನ್ನು ಕಾಪಾಡಿಕೊಂಡರು.

ಆದರೆ ನಾವು ಬಂದವರನ್ನೆಲ್ಲಾ ಒಳಗಡೆ ಬಿಟ್ಟುಕೊಂಡು ನಮ್ಮ ಕರ್ನಾಟಕ ರಾಜ್ಯವನ್ನು ಗೋಮಾಳ ಮಾಡಿಬಿಟ್ಟೆವು. ಈ ಹೊತ್ತು ಇಲ್ಲಿ ಜನ ಒಳ್ಳೆಯವರು, ಇಲ್ಲಿನ ವಾತಾವರಣ ಚೆನ್ನಾಗಿದೆ ಎಂದು ಹೇಳಿಕೊಂಡು ಎಲ್ಲರೂ ಇಲ್ಲಿಗೆ ಬರುತ್ತಿದ್ದಾರೆ. ನಮಗೆ ಬೇಲಿ ಇಲ್ಲ. ಈ ಹೊತ್ತು ಡಬ್ಬಿಂಗ್ ಬಂದಿದೆ ಎಂದು ಸಭೆ ಸೇರಿದ್ದೇವೆ.
ಆದರೆ ನಮ್ಮವರೇ ಕಮಲ್ ಹಾಸನ್ ಚಿತ್ರವನ್ನು ಐದು ಕೋಟಿ ಕೊಟ್ಟು ತಂದಾಗ, ರಜನಿಕಾಂತ್ ಸಿನಿಮಾನ ಒಂಭತ್ತು ಕೋಟಿಗೆ ತಂದಾಗ, ಚಿರಂಜೀವಿ ಸಿನಿಮಾನ ಆರು ಕೋಟಿಗೆ ತಂದಾಗ ನಾವು ಮಾತನಾಡಲಿಲ್ಲ. ಏಕೆಂದರೆ ನಮ್ಮ ವಾಣಿಜ್ಯ ಮಂಡಳಿಯಲ್ಲಿ ಇರುವ ಜನರೇ ಆ ಕೆಲಸ ಮಾಡಿದರು.
ಆದ್ದರಿಂದ ನಮ್ಮ ನಾಯಕರಾದ ವಾಟಾಳ್ ನಾಗರಾಜ್ ಅವರಿಗೆ ಇನ್ನಿತರ ಕನ್ನಡಪರ ಸಂಘಟನೆಗಳಿಗೆ, ರೈತ ನಾಯಕರಿಗೆ, ದಲಿತ ಸಂಘಟನೆಗಳಿಗೆ, ಕಾರ್ಮಿಕ ಸಂಘಟನೆಗಳಿಗೆ ನಾನು ಹೇಳುವುದೇನೆಂದರೆ...ತಮಿಳುನಾಡಲ್ಲಿ ಪ್ರಾದೇಶಿಕ ಪಕ್ಷ ಇದೆ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಒಂದು ವೇದಿಕೆ ಇದೆ. ಕನ್ನಡಿಗರು ರಾಜಕೀಯವಾಗಿ ಬೆಳೆಯದಿದ್ದರೆ ನಮ್ಮನ್ನು ಯಾರೂ ಕ್ಯಾರೆ ಅನ್ನುವುದಿಲ್ಲ.
ಹಾಗಾಗಿ ಕರ್ನಾಟಕ ದೇಶಕ್ಕೆ ಒಂದು ಪ್ರಾದೇಶಿಕ ಪಕ್ಷವನ್ನು ಘೋಷಣೆ ಮಾಡಲು ಆದೇಶ ಮಾಡಿ ದೆಹಲಿಯ ದರ್ಬಾರ್ ಕರ್ನಾಟಕಕ್ಕೆ ಬರುವಂತೆ ಮಾಡಿ ಈ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನವರಾಗಲಿ ದೆಹಲಿ ದರ್ಬಾರಿಗೆ ತಲೆಬಾಗುತ್ತಾರೆಯೇ ವಿನಃ ಕನ್ನಡ, ಕನ್ನಡಿಗ ಕರ್ನಾಟಕ ಹಿತರಕ್ಷಣೆ ಮಾಡೋದಿಲ್ಲ.
ಆದ್ದರಿಂದ ಗಂಭೀರವಾಗಿ ಆಲೋಚನೆ ಮಾಡಿ ಪ್ರಾದೇಶಿಕ ಪಕ್ಷ ರಚನೆ ಮಾಡಿಕೊಂಡರೆ ನಮ್ಮ ನೆಲ, ಜಲ, ಭಾಷೆ ಚಿತ್ರರಂಗ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಪ್ರಯತ್ನಿಸಬೇಕು ಎಂದು ಅಶೋಕ್ ಅವರು ಅಭಿಪ್ರಾಯಪಟ್ಟರು. (ಒನ್ಇಂಡಿಯಾ ಕನ್ನಡ)


Click it and Unblock the Notifications











