ಚಿರಂಜೀವಿಗೆ ಪಾಠ ಮಾಡುತ್ತಿರುವ ಕಿಚ್ಚ ಸುದೀಪ್
ಕನ್ನಡದ ಕಿಚ್ಚ ಸುದೀಪ್ ಸ್ವಲ್ಪ ಗ್ಯಾಪ್ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಆದರೆ ಇದರಲ್ಲೂ ಹೊಸತನ ಮೆರೆದಿದ್ದಾರೆ. ಈ ಬಾರಿ ಅವರು ನಿರ್ದೇಶಿಸುತ್ತಿರುವುದು ಸಿನಿಮಾದ ಬದಲು ಒಂದು ಕಿರುಚಿತ್ರ. ಇದರಲ್ಲಿ ಅವರಿಗೆ ಶಿಷ್ಯನಾಗಿ ಚಿರಂಜೀವಿ ಸರ್ಜಾ ಸಾಥ್ ನೀಡಲಿದ್ದಾರೆ. ಸಿಸಿಎಲ್, ವರದನಾಯಕ ಚಿತ್ರದ ನಂತರ ಚಿರು-ಕಿಚ್ಚ ಸಖತ್ ಕ್ಲೋಸ್. ಇದು ಸದ್ಯ ಗಾಂಧಿನಗರದಲ್ಲಿ ಸುತ್ತುತ್ತಿರುವ ಸುದ್ದಿ.
ವರದನಾಯಕ ಚಿತ್ರದಲ್ಲಿನ ಸುದೀಪ್ ಭಾಗದ ಚಿತ್ರೀಕರಣವಿನ್ನೂ ಮುಗಿದಿಲ್ಲ. ಅದರ ಮಧ್ಯದಲ್ಲೇ ಸುದೀಪ್ ಕಿರುಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಹೊಸ ಹುಡುಗರನ್ನು ಈ ಕಿರುಚಿತ್ರಕ್ಕೆ ನಟರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಸುದೀಪ್. ಇಷ್ಟು ಸುದ್ದಿ ಮಾತ್ರ ಸುದೀಪ್ ಟ್ಟಿಟ್ಟರ್ ನಿಂದ ಬಹಿರಂಗಗೊಂಡಿದೆ. ಯಾವ ವಿಷಯದ ಮೇಲೆ ಕಿರುಚಿತ್ರ, ಹೆಸರೇನು? ಎನ್ನುವ ಪ್ರಶ್ನೆಗಳಿಗೆಲ್ಲಾ ಸದ್ಯಕ್ಕೆ ಉತ್ತರವಿಲ್ಲ.
ಚಿರು ಜೊತೆ ಸುದೀಪ್ ಒಡನಾಟ ಸ್ನೇಹಕ್ಕಷ್ಟೇ ಸೀಮಿತವಾಗದೇ ಚಿರುಗೆ ನಿರ್ದೇಶನದ ಪಾಠವನ್ನೂ ಹೇಳಿಕೊಡುತ್ತಿದ್ದಾರಂತೆ. "ಕಿರುಚಿತ್ರ ನಿರ್ಮಾಣದಲ್ಲಿ ಚಿರಂಜೀವಿ ನನಗೆ ಸಹಕಾರ ನೀಡುತ್ತಿದ್ದಾರೆ" ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಮುಂದೊಮ್ಮೆ ಚಿರಂಜೀವಿ ಸರ್ಜಾ ನಿರ್ದೇಶಕರಾಗಲೂಬಹುದು. ಒಟ್ಟಾರೆ, ತಮಗೆ ನಿರ್ದೇಶನ ಮರೆಯಬಾರದೆಂದೋ ಅಥವಾ ಚಿರುಗೆ ನಿರ್ದೇಶನ ಕಲಿಸಲೆಂದೋ ಗೊತ್ತಿಲ್ಲ, ಸುದೀಪ್ ಕಿರುಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











