'ಹುಟ್ಟುಹಬ್ಬ ಆಚರಣೆ ಬೇಡ' ಎಂದ ಸುದೀಪ್ ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ
ಕಿಚ್ಚ ಸುದೀಪ್ ರವರ ಹುಟ್ಟುಹಬ್ಬಕ್ಕೆ ಇನ್ನೂ ಒಂದುವರೆ ತಿಂಗಳು ಬಾಕಿ ಇರುವಾಗಲೇ, ಅವರ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರು ಬರ್ತಡೇ ಹೆಸರಿನಲ್ಲಿ ದುಡ್ಡು ಕಲೆಕ್ಟ್ ಮಾಡುತ್ತಿದ್ದರು. ಈ ವಿಚಾರ ಸುದೀಪ್ ಕಿವಿಗೆ ಬಿದ್ದ ಮೇಲೆ ಕೊಂಚ ಗರಂ ಆಗಿದ್ದರು. ಜೊತೆಗೆ 'ಹುಟ್ಟುಹಬ್ಬ ಆಚರಣೆ ಬೇಡ' ಎಂಬ ಸಂದೇಶವನ್ನೂ ತಮ್ಮ ಕಟ್ಟಾ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ನೀಡಿದ್ದರು.
''ನೀವು ಖರ್ಚು ಮಾಡುವ ಆ ಎಲ್ಲಾ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಿ. ಒಂದು ದಿನದ ಊಟಕ್ಕಾಗಿ ಒದ್ದಾಡುವವರ ಹಸಿವು ನೀಗಿಸುವುದಕ್ಕೆ ಈ ಹಣವನ್ನು ಬಳಸಿ. ನೀವು ಕೇಕು ಮತ್ತು ಸಿಂಗಾರಕ್ಕೆ ಬಳಸುವ ಆ ಹಣದಿಂದ ಅದೆಷ್ಟೋ ಮನೆಗಳನ್ನು ಉಳಿಸಬಹುದು. ಅದೆಷ್ಟೋ ಜೀವಗಳನ್ನು ಉಳಿಸಬಹುದು. ನನ್ನನ್ನು ನಂಬಿ. ಇದು ನೀವು ನನಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ. ಸಂಭ್ರಮಿಸುವ ಅತ್ಯುತ್ತಮ ವಿಧಾನ ಕೂಡ ಇದೇ ಅಂತ ನಾನಂದುಕೊಂಡಿದ್ದೇನೆ. ಇದು ಅವಶ್ಯಕತೆಯಲ್ಲಿರುವ ನಮ್ಮ ಜನಕ್ಕೆ ನಾವು ಮಾಡಬಹುದಾದ ಪುಟ್ಟ ಸಹಾಯ''
''ಇನ್ನು ಮುಂದೆ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ. ಅವತ್ತು ನಾನು ಮನೆಯಿಂದ ದೂರ ಇರುತ್ತೇನೆ. ಬಹುಶಃ ನಾನು ನಿಮಗೆ ಏನು ಮಾಡಲು ಹೇಳಿದ್ದೇನೋ ಅದನ್ನೇ ಮಾಡುತ್ತಿರುತ್ತೇನೆ. ನನ್ನ ಈ ಮಾತನ್ನು ನೀವೆಲ್ಲರೂ ಗೌರವಿಸುತ್ತೀರಿ ಅಂತಂದುಕೊಂಡಿದ್ದೇನೆ'' ಎಂದು ತಮ್ಮ ಮನದಾಳದ ಮಾತುಗಳನ್ನ ಸುದೀಪ್ ಹೊರಹಾಕಿದ್ದರು.
ಸುದೀಪ್ ರವರ ಈ ಮಾತುಗಳನ್ನ ಕೆಲ ಅಭಿಮಾನಿಗಳು ಸ್ವಾಗತಿಸಿದ್ದರೆ, ಕೆಲವರು ಬೇಸರಗೊಂಡಿದ್ದಾರೆ. ಸುದೀಪ್ ರವರ ಈ ನಿರ್ಧಾರಕ್ಕೆ ಕೋಟ್ಯಾಂತರ ಅಭಿಮಾನಿ ಬಳಗದಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ಮುಂದೆ ಓದಿರಿ...

ನೀವು ತೋರಿಸಿದ ಹಾದಿಯಲ್ಲಿ ನಡೆಯುತ್ತೇವೆ.!
''ನಿಮ್ಮ ಮಾತುಗಳಿಗೆ ಖಂಡಿತ ನಾವು ಗೌರವ ಕೊಡುತ್ತೇವೆ. ನೀವು ತೋರಿಸಿದ ಹಾದಿಯಲ್ಲಿ ನಾವು ನಡೆಯುತ್ತೇವೆ'' ಎಂದು ಸುದೀಪ್ ಅಭಿಮಾನಿ ಬಳಗ ಹೇಳಿಕೊಂಡಿದೆ.

ನೋವು ತಂದಿದೆ.!
''ನಿಮ್ಮ ಮಾತಿಗೆ ಗೌರವ ಕೊಡುತ್ತೇವೆ. ಆದ್ರೆ, ಹುಟ್ಟುಹಬ್ಬದ ದಿನ ನಿಮ್ಮನ್ನ ನೋಡೋಕೆ ಅಭಿಮಾನಿಗಳು ಎಲ್ಲೆಲ್ಲಿಂದಲೋ ಬಂದಿರ್ತಾರೆ. ನೀವು ಬರ್ತಡೇ ದಿನ ನಮ್ಮೊಂದಿಗೆ ಇರಲಿಲ್ಲ ಅಂದ್ರೆ ಖಂಡಿತ ನೋವಾಗುತ್ತದೆ'' ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಲೀಸ್ ಮನೆಯಲ್ಲಿ ಇರಿ...
''ಹುಟ್ಟುಹಬ್ಬದ ದಿನ ಪ್ಲೀಸ್ ಮನೆಯಲ್ಲಿಯೇ ಇರಿ. ಅದೊಂದೇ ದಿನ ನಿಮ್ಮನ್ನ ಅಭಿಮಾನಿಗಳು ಹತ್ತಿರದಿಂದ ನೋಡಲು ಸಾಧ್ಯ'' ಎಂದು ಅಭಿಮಾನಿಗಳು ಸುದೀಪ್ ರವರನ್ನ ಬೇಡಿಕೊಳ್ಳುತ್ತಿದ್ದಾರೆ.

ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಕೊಡ್ಬೇಡಿ
''ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಕೊಡಬೇಡಿ. 'ಕಿಚ್ಚೋತ್ಸವ'ದಲ್ಲಿ ಅಭಿಮಾನಿಗಳ ಮಧ್ಯೆ ನಿಮ್ಮನ್ನ ನೋಡಬೇಕು'' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಮ್ಮ ದುರಾದೃಷ್ಟ
''ನಿಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಕೆಲವರು ದುಡ್ಡು ಕಲೆಕ್ಟ್ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ನೀವು ಈ ನಿರ್ಧಾರ ಮಾಡಿದ್ರೆ ದುರಾದೃಷ್ಟಕರ. ಅವರೆಲ್ಲರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಹ್ಯಾಟ್ಸ್ ಆಫ್
ಸುದೀಪ್ ರವರ ಈ ನಿರ್ಧಾರಕ್ಕೆ ಕೆಲವರು ಹ್ಯಾಟ್ಸ್ ಆಫ್ ಕೂಡ ಹೇಳಿದ್ದಾರೆ.


Click it and Unblock the Notifications











