ಕಿಚ್ಚನನ್ನು ಮೈಸೂರಿಗೆ ಸೆಳೆದ ಕ್ರಿಕೆಟ್: ಮಹಾರಾಜ ಟ್ರೋಫಿ ಅನಾವರಣ
ನಟ ಕಿಚ್ಚ ಸುದೀಪ್ರ ಮೆಚ್ಚಿನ ಹವ್ಯಾಸಗಳಲ್ಲಿ ಕ್ರಿಕೆಟ್ ಸಹ ಒಂದು. ನಟನೆ, ಅಡುಗೆ ಮಾಡುವುದು, ಚಿತ್ರಕಲೆಗಳ ಜೊತೆಗೆ ಕ್ರಿಕೆಟ್ ಅನ್ನೂ ಸಹ ಅತಿಯಾಮಿ ಪ್ರೀತಿಸುತ್ತಾರೆ ಸುದೀಪ್.
ಸಿಸಿಎಲ್ ಸೇರಿದಂತೆ ಹಲವು ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಗಳಲ್ಲಿ ಬ್ಯಾಟ್ ಬೀಸಿರುವ ಸುದೀಪ್, ಭಾರತ ಹಾಗೂ ಕರ್ನಾಟಕ ಕ್ರಿಕೆಟ್ ತಂಡದ ಜೊತೆಗೆ ಆತ್ಮೀಯ ಬಂಧವನ್ನು ಸಹ ಹೊಂದಿದ್ದಾರೆ.
ಸ್ವತಃ ಉತ್ತಮ ಕ್ರಿಕೆಟಿಗರಾಗಿರುವ ಸುದೀಪ್, ಉತ್ತಮ ಕ್ರಿಕೆಟ್ ಆಟಗಾರರಿಗೆ ಬೆನ್ನು ತಟ್ಟುತ್ತಿರುತ್ತಾರೆ ಹಾಗೂ ಕ್ರಿಕೆಟ್ ಆಟ ಆಡುವವರಿಗೆ ಬೆಂಬಲ ನೀಡುತ್ತಲಿರುತ್ತಾರೆ.

ಇದರ ಭಾಗವಾಗಿಯೇ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಕಪ್ ಅನ್ನು ಗುರುವಾರ ನಟ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.
ಅದೇ ಕಾರ್ಯಕ್ರಮದಲ್ಲಿ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಪ್ರಶಸ್ತಿಗಾಗಿ ಹೋರಾಡುವ ಆರು ತಂಡಗಳ ನಾಯಕರ ಹೆಸರನ್ನು ಪ್ರಕಟಿಸಲಾಯಿತು. ಆಗಸ್ಟ್ 7 ರಿಂದ 26 ರವರೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.
ಕೊರೊನಾ ಕಾರಣದಿಂದ ಎರಡು ವರ್ಷ ಈ ಟೂರ್ನಿಮೆಂಟ್ ನಡೆದಿರಲಿಲ್ಲ. ನಟ ಕಿಚ್ಚ ಸುದೀಪ್ ಟೂರ್ನಿ ರಾಯಭಾರಿಯಾಗಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಹಾಗೂ ಮಂಗಳೂರು ಹೆಸರಿನಲ್ಲಿ 6 ತಂಡಗಳು ಸ್ಪರ್ಧಿಸುತ್ತಿವೆ. ಆ.7ರಂದು ಮೈಸೂರಿನ ಗ್ಲೇಡ್ಸ್ ಮೈದಾನದಲ್ಲಿ ಟೂರ್ನಿಗೆ ಚಾಲನೆ ಸಿಗಲಿದ್ದು, ಒಟ್ಟು 18 ಪಂದ್ಯಗಳು ಮೊದಲ ಚರಣದಲ್ಲಿ ನಡೆಯಲಿವೆ. ಬಳಿಕ ಫೈನಲ್ ಸೇರಿದಂತೆ 16 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ''ನಾನೊಬ್ಬ ಕ್ರೀಡಾ ಪ್ರೇಮಿಯಾಗಿದ್ದೇನೆ, ಕ್ರಿಕೆಟ್ ಎಂದಿಗೂ ಉಳಿಯಬೇಕು, ಬೆಳೆಯಬೇಕು. ಕರ್ನಾಟಕವು ಬಹಳ ಪ್ರತಿಭಾವಂತರನ್ನು ಹೊಂದಿದೆ. ಆ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಬೇಕಿದೆ. ಆ ವೇದಿಕೆಯನ್ನು ಕೆಎಸ್ಸಿಎ ನಿರ್ಮಿಸಿ ಕೊಡುತ್ತಿದೆ'' ಎಂದರು. ಜೊತೆಗೆ ತಮ್ಮ ಹಾಗೂ ಕೆಎಸ್ಸಿಎ ಜೊತೆಗಿನ ಉತ್ತಮ ಬಾಂಧವ್ಯದ ಬಗ್ಗೆಯೂ ಮಾತನಾಡಿದರು.
ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, ಫ್ರಾಂಚೈಸಿಗಳ ಬದಲಿಗೆ ಪ್ರಾಯೋಜಕತ್ವದಡಿ ಟೂರ್ನಿ ಆಯೋಜಿಸಲಾಗುತ್ತಿದೆ. ಸ್ವತಃ ಕ್ರಿಕೆಟ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಸುದೀಪ್ ಅವರನ್ನು ಟೂರ್ನಿ ಬ್ರಾಂಡ್ ರಾಯಭಾರಿ ಎಂದು ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.
ಕೆಎಸ್ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ್ ಗ್ರೂಪ್ ವಹಿಸಲಿದೆ. ಈ ಋತು ಸೇರಿದಂತೆ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಗ್ರೂಪ್ ಟೈಟಲ್ ಪ್ರಾಯೋಜಕತ್ವ ವಹಿಸಲಿದೆ. ಮೂರು ವಾರಗಳ ಕಾಲ ನಡೆಯುವ ಟಿ-20 ಕ್ರಿಕೆಟ್ ಹಬ್ಬದ ಪ್ರಾಯೋಜಕತ್ವವನ್ನು ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗಲಿದೆ. ಹೆಚ್ಚಿನ ಪ್ರಮಾಣದ ಬಳಕೆಗಾಗಿ ಫ್ಯಾಯಾನ್ಕೋಡ್ ಆಪ್ನಲ್ಲಿಯೂ ವೀಕ್ಷಿಸಬಹುದು ಎಂದರು.
ಕರ್ನಾಟಕ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಜೆ.ಸುಚಿತ್, ದೇವದತ್ ಪಡಿಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಪ್ರವೀಣ್ ದುಬೆ ಹಾಗೂ ಅಭಿಮನ್ಯು ಮಿಥುನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್ ಅನ್ನು ಕಾಣಲು ಭಾರಿ ಸಂಖ್ಯೆಯ ಅಭಿಮಾನಿಗಳು ಹೊರಗೆ ನೆರೆದಿದ್ದರು. ಸುದೀಪ್ ಸಹ ಕಾರಿನಲ್ಲಿ ನಿಂತು ಎಲ್ಲರಿಗೂ ಕೈ ಬೀಸಿ ಧನ್ಯವಾದ ಹೇಳಿದರು. ಹಲವರೊಟ್ಟಿಗೆ ಕೈಕುಲುಕಿ ಹೊರಟರು. ಸುದೀಪ್ ಅನ್ನು ಕಾಣಲು ಭಾರಿ ಸಂಖ್ಯೆಯ ಜನ ಸೇರಿದ್ದ ಕಾರಣ ಕೆಲ ಸಮಯ ಟ್ರಾಫಿಕ್ ಜಾಮ್ ಸಹ ಆಯಿತು.


Click it and Unblock the Notifications











