ಸುಧಾಮೂರ್ತಿ ಹೆಸರಲ್ಲಿ ನಟ ವಿಜಯ್ ದೇವರಕೊಂಡಗೆ ಪತ್ರ: ಟೆಕ್ಕಿ ಬಂಧನ
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಸಹಿಯನ್ನು ನಕಲು ಮಾಡಿ, ತೆಲುಗು ನಟ ವಿಜಯ್ ದೇವರಕೊಂಡ ಅವರಿಗೆ ಪತ್ರ ಬರೆದಿದ್ದ ಐಟಿ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ್ದ ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಲಾವೆಂಟಿ ಸಾಯಿಕೃಷ್ಣ (24) ಎಂಬಾತ ಅವರ ಸಹಿಯನ್ನು ನಕಲು ಮಾಡಿ ವಿಜಯ್ ದೇವರಕೊಂಡಗೆ ಪತ್ರಬರೆದಿದ್ದ. ಈ ಆರೋಪದ ಮೇರೆಗೆ ಸಾಯಿಕೃಷ್ಣನನ್ನು ಬೆಂಗಳೂರಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2013ರಲ್ಲಿಯೇ ಈ ಟೆಕ್ಕಿ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಜಯ್ ದೇವರಕೊಂಡ ಅವರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಲು ಸುಧಾಮೂರ್ತಿ ಅವರ ಹೆಸರಿನಲ್ಲಿ ಶಿಫಾರಸು ಪತ್ರ ಕಳುಹಿಸಿದರೆ ತನ್ನ ಕೆಲಸವಾಗುತ್ತದೆ ಎಂದು ಆತ ಭಾವಿಸಿದ್ದ.

ವಿಜಯ್ ದೇವರಕೊಂಡ ರಾಯಭಾರಿ
ಸಾಯಿಕೃಷ್ಣ ಒಂದು ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದ. ಅದನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಆತ ತಂತ್ರ ರೂಪಿಸಿದ್ದ. ಒಂದು ವೇಳೆ ವಿಜಯ್ ದೇವರಕೊಂಡ ತನ್ನ ಆಪ್ಗೆ ರಾಯಭಾರಿಯಾದರೆ ಅದು ಕ್ಲಿಕ್ ಆಗುತ್ತದೆ ಎಂದು ಭಾವಿಸಿದ್ದ.

ಅನುಮಾನ ಬಂದು ಮಾಹಿತಿ
ವಿಜಯ್ ದೇವರಕೊಂಡ ಅವರಿಗೆ ಶಿಫಾರಸು ಪತ್ರದಂತೆ ಸುಧಾಮೂರ್ತಿ ಅವರ ಹೆಸರಿನ ನಕಲಿ ಲೆಟರ್ ಹೆಡ್ನಲ್ಲಿ ಆತ ಪತ್ರ ರವಾನಿಸಿದ್ದ. ಅದನ್ನು ವಿಜಯ್ ಸಿಬ್ಬಂದಿ ಪರಿಶೀಲಿಸಿದ್ದಾಗ ಅನುಮಾನ ಉಂಟಾಗಿತ್ತು. ಕೂಡಲೇ ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಮಾಹಿತಿ ನೀಡಿದ್ದರು.

ಬೆಂಗಳೂರಿಂದ ಪರಾರಿಯಾಗಿದ್ದ
ಬಳಿಕ ಆತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ಮೂಲತಃ ವಿಜಯವಾಡ ನಿವಾಸಿಯಾಗಿರುವ ಸಾಯಿಕೃಷ್ಣ, ತನ್ನ ವಿರುದ್ಧದ ಪ್ರಕರಣ ದಾಖಲಾಗಿದ್ದು ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ತನ್ನ ಮನೆಯನ್ನು ಖಾಲಿ ಮಾಡಿ ಹೈದರಾಬಾದ್ಗೆ ತೆರಳಿ ಮನೆ ಮಾಡಿಕೊಂಡಿದ್ದ.

ಹೈದರಾಬಾದ್ನಲ್ಲಿ ಸಿಕ್ಕಿಬಿದ್ದ
ವಿಜಯವಾಡದಲ್ಲಿ ಸಾಯಿಕೃಷ್ಣನಿಗೆ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಆತ ಹೈದರಾಬಾದ್ನಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಶನಿವಾರ ರಾತ್ರಿ ಅತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಜಯ್ ದೇವರಕೊಂಡ ಅವರ ಮನವೊಲಿಸುವ ಸಲುವಾಗಿ ಆತ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.


Click it and Unblock the Notifications











