'ಶಿರಸಿಭವನ'ದಿಂದ 'ಕಾಫಿ ತೋಟ'ಕ್ಕೆ ತೇಜಸ್ವಿನಿ ಅಕ್ಕ
ಬ್ಲಾಗರ್, ಲೇಖಕಿ, ಗೃಹಿಣಿ, ಸೂಕ್ಷ್ಮ ಸಂವೇದಿ ತೇಜಸ್ವಿನಿ ಹೆಗ್ಡೆ ಯವರು ಟಿ.ಎನ್.ಸೀತಾರಾಂ ನಿರ್ದೇಶನದ 'ಕಾಫಿ ತೋಟ' ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
'ಒನ್ ಇಂಡಿಯಾ'ದಲ್ಲಿ 'ಶಿರಸಿಭವನ' ಹೆಸರಿನಲ್ಲಿ ಅಂಕಣ ಬರೆಯುತ್ತಿದ್ದ ಬರಹಗಾರ್ತಿ ತೇಜಸ್ವಿನಿ ಹೆಗ್ಡೆ ಯವರು 'ಕಾಫಿ ತೋಟ' ಸಿನಿಮಾದಲ್ಲಿ ಅಭಿನಯಿಸಿದ ಅನುಭವನ್ನ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಓದಿರಿ...

ಸುಮಾರು ಏಳು ತಿಂಗಳ ಹಿಂದೆ 'ಕಾಫಿ ತೋಟ' ಚಿತ್ರ ತಂಡದ ಚಂದನ್ ಅವರು ಕಾಲ್ ಮಾಡಿ ನಮ್ಮ ಚಲನಚಿತ್ರದಲ್ಲಿ ಒಂದು ಪುಟ್ಟ ಪಾರ್ಟ್ ಮಾಡ್ತೀರಾ ಎಂದು ಕೇಳಿದಾಗ.. ನನ್ನ ಮೊದಲ ರಿಯಾಕ್ಷನ್ ಹಿಂದೇಟೇ ಆಗಿತ್ತು.
ನಾನು ಈವರೆಗೂ ಸರಿಯಾಗಿ ಕ್ಯಾಮರಾ ಎದುರಿಸಿಲ್ಲ (ಜನದನಿಯ ಕಿರುಚಿತ್ರವೊಂದಕ್ಕಾಗಿ ಬಿಟ್ಟು..) ನಾನೆಲ್ಲಿ.. ನಟನೆ ಎಲ್ಲಿ? ಅದ್ರ ಎ.ಬಿ.ಸಿ.ಡಿ ಗೊತ್ತಿಲ್ಲ.. ಎಂದೇ ನೇರ ಹೇಳಿದ್ದೆ.. ಆಗ ಅವರು ನೀವು ಅದೆಲ್ಲಾ ಚಿಂತೆ ಮಾಡ್ಬೇಡಿ.. ಸೀತಾರಾಂ ಸರ್ ಹೇಳಿದ್ದಾರೆ.. ಸಾಧ್ಯವಾದ್ರೆ ಬನ್ನಿ ಅಂದ್ರು. ಆದರೂ ನನಗೆ ಅಂಜಿಕೆ.. ನನ್ನಿಂದ ಸಾಧ್ಯವೇ? ಏನೂ ಗೊತ್ತಿಲ್ಲದೇ ಅಲ್ಲಿ ಹೋಗಿ ಎಂತ ಮಾಡುವುದಪ್ಪ ಎಂದು ಸುಮ್ಮನಾದೆ.
ರಾಮ್ "ನಿನಗೆ ಇಷ್ಟವಿದ್ದರೆ ಹೋಗಿ ಮಾಡು.. ಇದೊಂದು ಒಳ್ಳೆಯ ಅವಕಾಶ.." ಎಂದರು. ಭೂಮಿಕಾ ಸ್ಟುಡಿಯೋ ಕೂಡ ನಮ್ಮ ಮನೆಗೆ ಹತ್ತಿರವೇ ಇತ್ತಲ್ಲ. ಆದರೂ ತಕ್ಷಣ ಒಪ್ಪಲು ನನಗೇ ನನ್ನ ಮೇಲೆ ಭರವಸೆಯಿರಲಿಲ್ಲ.
ಕೊನೆಗೆ ಜಯಲಕ್ಷ್ಮಿ ಮೇಡಮ್ ಮತ್ತು ಪಲ್ಲವಿ ಅವರಿಗೆ ಈ ತಂಡದ ಕೆಲವರು ಮೊದಲೇ ಪರಿಚಯವಿರುವುದು ತಿಳಿದಿತ್ತಾಗಿದ್ದರಿಂದ ಅಭಿಪ್ರಾಯ ಕೇಳಿದೆ. ಇಬ್ಬರೂ ಬಹಳ ಮೋಟಿವೇಟ್ ಮಾಡಿದರು ಮತ್ತು ಅಲ್ಲಿ ನಿಮಗೇನೂ ಖಂಡಿತ ತೊಂದರೆ ಆಗದು.. ಆಪ್ತ ವಾತಾವರಣವಿರುವುದು.. ಸೀತಾರಾಮ್ ಸರ್ ಅವ್ರ ಫಿಲ್ಮ್ ಇದು ಸೋ ಏನೂ ಯೋಚ್ನೆ ಮಾಡ್ದೇ ಈ ಒಳ್ಳೆ ಅವಕಾಶದಲ್ಲಿ ಭಾಗಿಯಾಗಿ ಎಂದು ಬಹಳ ಪ್ರೋತ್ಸಾಹ ನೀಡಿದ್ದರಿಂದ ಗಟ್ಟಿ ಮನಸ್ಸು ಮಾಡಿಕೊಂಡು ಒಪ್ಪಿದ್ದೆ.
ಮರು ದಿವಸ ಅಲ್ಲಿಗೆ ಹೋಗುವವರಿಗೂ ಏನೋ ಟೆನ್ಷನ್.. ಒಪ್ಪಿದ್ದು ಸರಿಯೋ ತಪ್ಪೋ.. ಈ ಕ್ಷೇತ್ರದ ಏನೊಂದೂ ಅನುಭವವಿರದ ನನ್ನಿಂದ ಯಾವುದೇ ಅನವಶ್ಯಕ ತೊಂದ್ರೆ ಆಗ್ಬರ್ದು ಚಿತ್ರ ತಂಡಕ್ಕೆ.. ಎಷ್ಟು ಟೇಕ್ ತೆಗೆದುಕೊಳ್ತೇನೋ ಏನೊ.. ಎಂದೆಲ್ಲಾ ಚಿಂತಿಸಿದ್ದೆ. ಆದರೆ... ಅಲ್ಲಿ ಸಿಕ್ಕ ಆತ್ಮೀಯ ವಾತಾವರಣ.. ಆಪ್ತ ಮಾತು ಕತೆ.. ಕೆಲವು ಪರಿಚಿತರ, ಸ್ನೇಹಿತರ ಭೇಟಿಯಿಂದಾಗಿ ಮನಸು ಕ್ರಮೇಣ ಶಾಂತವಾಯಿತು ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಂಡಿತು. ತುಸು ಅನಾರೋಗ್ಯವಿದ್ದರೂ ಸಂಜೆ ಸೀತಾರಾಮ್ ಸರ್ ಖುದ್ದಾಗಿ ಬಂದು ಡೈರೆಕ್ಷನ್ ಮಾಡಿದ್ರು ನನ್ನ ಸೀನ್ ಅನ್ನು. ಬಹಳ ಆತ್ಮೀಯತೆಯಿಂದ ಮಾತನಾಡಿಸಿದರು.
ಕಶ್ಯಪ್ ಸರ್ ಅವರ ಮಾರ್ಗದರ್ಶನ.. ನಾಯಕ, ನಾಯಕಿ ಹಾಗೂ ಇನ್ನಿತರ ನಟರ ಸ್ನೇಹಪೂರಿತ ವರ್ತನೆಯಿಂದಾಗಿ ನಾನು ಈ ಫೀಲ್ಡಿಗೆ ಹೊರಗಿನವಳು.. ಹೊಸಬಳು.. ನಟನೆ ಗೊತ್ತಿಲ್ಲದವಳು ಎಂಬ ಭಾವ ಆ ಒಂದು ಕ್ಷಣಕ್ಕೆ ಮರೆಯಾಗಿ ಕೊಟ್ಟ ಪುಟ್ಟ ಪಾತ್ರವನ್ನು ಬಹಳ ಬೇಗ ಧೈರ್ಯದಿಂದ ಮಾಡಿ ಮುಗಿಸಲುು ಸಾಧ್ಯವಾಯಿತು.
ಹೇಗೆ ಬಂದಿದೆ.. ಏನು ಆ ಪಾತ್ರ ಇದೆಲ್ಲವೂ ರಿಲೀಸ್ ಆದ್ಮೇಲೆ ನೀವೇ ನೋಡಿಯೇ ಹೇಳ್ಬೇಕು ಅಷ್ಟೆ.. ಸ್ವತಃ ನನಗೂ ನನ್ನ ನಟನೆ, ಪಾತ್ರ ಹೇಗೆ ಬಂದಿದೆಯೇನೋ ಎಂಬ ನರ್ವಸ್ನೆಸ್ ಇದೆ.. ಶೂಟಿಂಗ್ ಎಂದರೆ ಏನು? ಎಷ್ಟೆಲ್ಲಾ ಪರಿಶ್ರಮಗಳಲ್ಲಿರುತ್ತವೆ.. ಎಷ್ಟು ಸಹನೆ ಬೇಕಾಗುತ್ತದೆ.. ಏನೆಲ್ಲಾ ಪೂರ್ವ ತಯಾರಿ ಇದ್ದಿರುತ್ತದೆ.. ಎಷ್ಟು ಕಷ್ಟವಿದೆ ಎಂಬುದರ ಅರಿವು ಬಹಳ ಸ್ಪಷ್ಟವಾಗಿ ನನಗೆ ಅಂದು ದೊರೆಯಿತು. ಒಂದೊಳ್ಳೆ ಅನುಭವ, ಕಲಿಕೆಗೆ ಸದವಕಾಶವನ್ನಿತ್ತ ಕಾಫಿ ತೋಟದ ಚಿತ್ರ ತಂಡಕ್ಕೆ ಅದರಲ್ಲೂ ವಿಶೇಷವಾಗಿ ಸೀತಾರಾಂ ಸರ್ ಅವರಿಗೆ ತುಂಬಾ ಧನ್ಯವಾದಗಳು. ಅಶೋಕ್ ಕಶ್ಯಪ್ ಅವರ ಸಿನಿಮೆಟೋಗ್ರಾಫಿಯ ಅದ್ಭುತ ಝಲಕ್ ಈಗಾಗಲೇ ಸುಶ್ರಾವ್ಯ ಹಾಡುಗಳಲ್ಲಿ ನೋಡಲು ನಮಗೆ ಸಿಕ್ಕಿದೆ. ಹಾಗೆಯೇ ಬಿಡುಗಡೆಗೊಂಡಿರುವ ಟೀಸರ್ ಕೂಡ ಇಷ್ಟವಾಯ್ತು.
ಫಿಲ್ಮ್ ರಿಲೀಸ್ ಆಗೋ ಸಮಯದಲ್ಲಿ ಈ ಪೋಸ್ಟ್ ಹಾಕೋಣ ಅಂತಿದ್ದೆ. ಆದರೆ ನಿನ್ನೆ ಬಿಡುಗೊಂಡೆಗೊಂಡಿರುವ ಟೀಸರ್ನಲ್ಲಿ ನನ್ನದೊಂದು ಸಣ್ಣ ಗ್ಲಿಮ್ಸ್ ಬರುತ್ತದೆ. ಅದನ್ನು ನೋಡಿದ ಕೆಲವರು "ಇದು ನೀವಾ?" ಎಂದು ಮೆಸ್ಸೇಜ್ ಮಾಡಿದ್ದಾರೆ. ಸೋ ಇವತ್ತೇ ಈ ಪೋಸ್ಟ್ ಹಾಕ್ಬೇಕಾಯ್ತು :) ಕಾಫಿ ತೋಟ ಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ ಹಾರ್ದಿಕ ಶುಭಕಾಮನೆಗಳು. All the very best - ತೇಜಸ್ವಿನಿ ಹೆಗ್ಡೆ


Click it and Unblock the Notifications











