ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!
ಕಳೆದ ಎರಡು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಹೆಸರು 'ಶ್ರುತಿ ಹರಿಹರನ್'. ಕಾರಣ ಆಕೆ ಮಾಡಿರುವ ಆರೋಪ. ಅದು ನಟ ಅರ್ಜುನ್ ಸರ್ಜಾ ವಿರುದ್ಧ.!
''ವಿಸ್ಮಯ' ಚಿತ್ರದ ಶೂಟಿಂಗ್ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು. ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದರು. ನನಗೆ ಅವರಿಂದ ತುಂಬಾ ಮುಜುಗರ ಆಗಿದೆ'' ಅಂತ ಶ್ರುತಿ ಹರಿಹರನ್ ಆರೋಪಿಸಿದ್ದರು.
ಈ ಹಿಂದೆ ಹಲವು ಬಾರಿ ಕಾಸ್ಟಿಂಗ್ ಕೌಚ್ ವಿರುದ್ಧ ದನಿಯೆತ್ತಿದ್ದ ನಟಿ ಶ್ರುತಿ ಹರಿಹರನ್, ಆ ವಿವರಗಳನ್ನು ಬಯಲು ಮಾಡದೆ ಏಕಾಏಕಿ ಅರ್ಜುನ್ ಸರ್ಜಾ ವಿರುದ್ಧ ಬಾಂಬ್ ಸಿಡಿಸಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಈ ಬಗ್ಗೆ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ, ''ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ. ಅದನ್ನ ನಾನು ಕೋರ್ಟ್ ನಲ್ಲಿ ಹೇಳುವೆ'' ಎಂದು ನಟಿ ಶ್ರುತಿ ಹರಿಹರನ್ ಹೇಳಿದರು.
ಅಸಲಿಗೆ, ಇವತ್ತು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ನಟಿ ಶ್ರುತಿ ಹರಿಹರನ್ ಏನಂತ ಮಾತನಾಡಿದರು ಅಂತ ನೀವೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ...

ಒಂದುವರೆ ವರ್ಷದ ಹಿಂದೆ ಯಾಕೆ ಮಾತನಾಡಲಿಲ್ಲ.?
''ಆ ಸಮಯದಲ್ಲಿ ಏನು ಮಾಡಬಹುದಿತ್ತು, ಅದನ್ನ ಮಾತ್ರ ಮಾಡಿದೆ. ರಿಹರ್ಸಲ್ ಗೆ ಬರಲ್ಲ ಅಂತ ನಿರ್ದೇಶಕರಿಗೆ ಹೇಳಿದೆ. ಶಾಟ್ ಮುಗಿಸಿ ಸೀದಾ ಕ್ಯಾರಾವಾನ್ ಗೆ ಹೋಗುತ್ತಿದ್ದೆ. ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದಾಗ, 'ನೋ' ಅಂತ ಹೇಳಿದ್ದೇನೆ'' - ಶ್ರುತಿ ಹರಿಹರನ್, ನಟಿ

ಅವತ್ತೇ ಪ್ರೆಸ್ ಮೀಟ್ ಮಾಡಿ ಹೇಳಬಹುದಿತ್ತಲ್ವಾ.?
''ನನಗೆ ಈಗಷ್ಟೇ ಧೈರ್ಯ ಬಂದಿರೋದು. ಅದಕ್ಕೆ ಹೇಳುತ್ತಿದ್ದೇನೆ. ನನಗೆ ಆಗ ಧೈರ್ಯ ಇರಲಿಲ್ಲ. ನನಗೆ ಅಷ್ಟು ಹೆದರಿಕೆ. ನನಗೆ ಈಗ ಮೀಟೂ ಅಭಿಯಾನದಿಂದ ಸ್ವಲ್ಪ ಧೈರ್ಯ ಬಂದಿದೆ'' - ಶ್ರುತಿ ಹರಿಹರನ್, ನಟಿ

ಅಧಿಕಾರ ದುರುಪಯೋಗ
''ನಾನು ಅವರ Unprofessionalism ಹಾಗೂ misconduct ಬಗ್ಗೆ ಮಾತನಾಡಿದ್ದೆ. ನಾನು ತುಂಬಾ ಸೂಪರ್ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೇನೆ. ಯಾರೂ ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡಿಲ್ಲ'' - ಶ್ರುತಿ ಹರಿಹರನ್, ನಟಿ

ಅರ್ಜುನ್ ಸರ್ಜಾ ಹೆಸರು ಮಾತ್ರ ಯಾಕೆ.?
''ಕಾಸ್ಟಿಂಗ್ ಕೌಚ್ ಬಗ್ಗೆ ನಾನು ಮಾತನಾಡಿದ್ದೇನೆ. ಹೆಸರು ಹೇಳದೇ ಇದ್ದರೂ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಅನ್ನೋದು ಕ್ಲಿಯರ್ ಆಗಿದೆ. ಈಗ ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ತೆಗೆದುಕೊಳ್ಳಲು ಒಂದು ಕಾರಣ ಇದೆ. ಆ ಕಾರಣವನ್ನ ನಾನು ಕೋರ್ಟ್ ನಲ್ಲಿ ಕೊಡುವೆ'' - ಶ್ರುತಿ ಹರಿಹರನ್, ನಟಿ

ಅವರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ.?
''ಹೆಸರು ಹೇಳುವುದಕ್ಕಿಂತ ಅವರು ಮಾಡಿರುವ ತಪ್ಪು ತುಂಬಾ ಮುಖ್ಯ. ಹೀಗಾಗಿ, ನಾನು ಯಾಕೆ ಅವರ ಹೆಸರನ್ನ ಹೇಳುತ್ತಿದ್ದೇನೆ ಅಂತ ಪ್ರಶ್ನೆ ಮಾಡಬೇಡಿ. ನನ್ನ ಬಳಿ ಎಲ್ಲಾ ಸಾಕ್ಷಿ ಇದೆ. ಸಮಯ ಬಂದಾಗ ತೋರಿಸುವೆ'' - ಶ್ರುತಿ ಹರಿಹರನ್, ನಟಿ

ಅರ್ಜುನ್ ಸರ್ಜಾ ಮೆಸೇಜ್ ಮಾಡಿದ್ರಾ.?
''ಬಾಯ್ಮಾತಲ್ಲಿ ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದರು. ಮೆಸೇಜ್ ಮಾಡಿಲ್ಲ. ಎರಡು ಮೂರು ಫಾರ್ವರ್ಡ್ ಬಿಟ್ಟರೆ ಅವರು ನನಗೆ ಯಾವುದೇ ಮೆಸೇಜ್ ಮಾಡಿಲ್ಲ'' - ಶ್ರುತಿ ಹರಿಹರನ್, ನಟಿ

ಬೆದರಿಕೆ ಕರೆ ಬರುತ್ತಿದೆ
''ನನಗೀಗ ಪಬ್ಲಿಸಿಟಿ ಅಗತ್ಯ ಇಲ್ಲ. ಅರ್ಜುನ್ ಸರ್ಜಾ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿದೆ. ಒಂದೇ ಸಮನೆ ಕರೆ ಬರುತ್ತಿದೆ'' - ಶ್ರುತಿ ಹರಿಹರನ್, ನಟಿ


Click it and Unblock the Notifications











