ದರ್ಶನ್ - ಸುದೀಪ್ ಬೇರೆ ಆಗಿದ್ರೆ ಅಲ್ವಾ ಒಂದಾಗೋದು ಎಂದ 'ಪುಷ್ಪವತಿ' ನಿಮಿಕಾ ರತ್ನಾಕರ್!
ಕ್ರಾಂತಿ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ತೆರೆಗೆ ಬರುತ್ತಿದೆ. ಬರೋಬ್ಬರಿ ಇಪ್ಪತ್ತು ತಿಂಗಳ ಬಳಿಕ ತಮ್ಮ ನೆಚ್ಚಿನ ನಟ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರವನ್ನು ತೆರೆಯ ಮೇಲೆ ನೋಡಲು ದರ್ಶನ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಇತ್ತ ಕ್ರಾಂತಿ ಚಿತ್ರತಂಡ ಚಿತ್ರದ ಮೇಲಿನ ನಿರೀಕ್ಷೆಯನ್ನು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಹೆಚ್ಚಿಸುತ್ತಿದೆ.
ಒಂದೊಂದು ಊರಿನಲ್ಲಿ ಒಂದೊಂದು ಹಾಡನ್ನು ಬಿಡುಗಡೆ ಮಾಡಿದ ಕ್ರಾಂತಿ ಚಿತ್ರತಂಡ ಇಲ್ಲಿಯವರೆಗೆ ಒಟ್ಟು ಮೂರು ಹಾಡುಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿಯೂ ಚಿತ್ರದ ಮೂರನೇ ಹಾಡಾದ 'ಶೇಕ್ ಇಟ್ ಪುಷ್ಪವತಿ' ಎಲ್ಲೆಡೆ ಸದ್ದು ಮಾಡ್ತಿದೆ. ಇದೊಂದು ಐಟಂ ಹಾಡಾಗಿದ್ದು, ಮಂಗಳೂರು ಬೆಡಗಿ ನಿಮಿಕಾ ರತ್ನಾಕರ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ.
ಇನ್ನು ಈ ಹಾಡು ವೈರಲ್ ಆಗುತ್ತಿದ್ದಂತೆ ನಿಮಿಕಾ ರತ್ನಾಕರ್ ಸಹ ವೈರಲ್ ಆದರು. ಸಿನಿ ರಸಿಕರು ನಿಮಿಕಾ ರತ್ನಾಕರ್ ಪಡ್ಡೆ ಹೈಕಳ ಹೊಸ ಕ್ರಶ್ ಎಂದು ಮೀಮ್ಸ್ ಮಾಡಲು ಶುರು ಮಾಡಿದರು. ಮೊದಲೆರಡು ಹಾಡುಗಳಿಗಿಂತ ಪುಷ್ಪವತಿ ಹಿಟ್ ಆಯಿತು ಹಾಗೂ ಚಿತ್ರದ ನಟಿಗಿಂತಲೂ ಹೆಚ್ಚಾಗಿ ನಿಮಿಕಾ ರತ್ನಾಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಹೆಚ್ಚಾಯಿತು. ಇಷ್ಟರ ಮಟ್ಟಿಗೆ ವೈರಲ್ ಆದ ಕಾರಣ ನಿಮಿಕಾ ರತ್ನಾಕರ್ ಸಂದರ್ಶನಗಳನ್ನು ಮಾಡಲು ಶುರುವಿಟ್ಟುಕೊಂಡಿದ್ದಾರೆ ಯುಟ್ಯೂಬ್ ಮಂದಿ. ಹೀಗೆ ಸಂದರ್ಶನಗಳಲ್ಲಿ ಭಾಗವಹಿಸಿ ಮಾತನಾಡಿರುವ ನಿಮಿಕಾ ರತ್ನಾಕರ್ ದರ್ಶನ್ ಹಾಗೂ ಸುದೀಪ್ ಗೆಳೆತನದ ಬಗ್ಗೆ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದರ್ಶನ್ - ಸುದೀಪ್ ಮತ್ತೆ ಒಂದಾಗೋದರ ಬಗ್ಗೆ ನಿಮಿಕಾ ಮಾತು
ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಕುರಿತು ಸುದೀಪ್ ಪ್ರತಿಕ್ರಿಯಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ರು. ಇದಕ್ಕೆ ದರ್ಶನ್ ಸಹ ಧನ್ಯವಾದ ಸೂಚಿಸಿ ಹಲವು ದಿನಗಳ ಬಳಿಕ ಇಬ್ಬರು ಮಾತನಾಡಿದರು. ಇದು ಕಳೆದ ವರ್ಷದ ಅತ್ಯುತ್ತಮ ವಿಷಯಗಳಲ್ಲಿ ಒಂದಾಗಿತ್ತು. ಈ ಕುರಿತಾಗಿ ನಿಮಿಕಾಗೆ ದರ್ಶನ್ ಹಾಗೂ ಸುದೀಪ್ ಒಂದಾಗುವ ಮುನ್ಸೂಚನೆ ಸಿಕ್ಕಿದೆಯಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಿಮಿಕಾ ರತ್ನಾಕರ್ "ಒಂದಾಗ್ತಾರೆ ಅನ್ನೋ ಮುನ್ಸೂಚನೆ ಸಿಗೋಕೆ ಮೊದಲಿಗೆ ಅವರಿಬ್ಬರು ಬೇರೇನೇ ಆಗಿಲ್ಲ, ಈಗ ನಾನು ನನ್ನ ಸ್ನೇಹಿತೆ ಜತೆ ಫೋನ್ ಮಾಡಿ ಮಾತನಾಡುತ್ತೇನೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳಬೇಕು ಎಂದೇನಿಲ್ಲ ಅಲ್ವಾ? ಅದೇ ರೀತಿ ದರ್ಶನ್ ಹಾಗೂ ಸುದೀಪ್ ಸರ್ ಕೂಡ" ಎಂದು ಹೇಳಿಕೆ ನೀಡಿದರು.

ಸುದೀಪ್ ಸರ್ ಜತೆ ಕೆಲಸ ಮಾಡುವಾಸೆ
ಇನ್ನು ಸುದೀಪ್ ಅವರ ಜತೆ ಕೆಲಸ ಮಾಡುವ ಅವಕಾಶ ಸಿಗಲಿ ಎಂದು ಕಾಯುತ್ತಿದ್ದೇನೆ ಎಂದಿರುವ ನಿಮಿಕಾ ರತ್ನಾಕರ್ ಇಂತಹ ಉತ್ತಮ ಅವಕಾಶ ಸಿಕ್ಕರೆ ಖಂಡಿತ ಸುದೀಪ್ ಸರ್ ಜತೆ ನಟಿಸುತ್ತೇನೆ ಎಂದಿದ್ದಾರೆ ಹಾಗೂ ಕಾಲೇಜು ದಿನಗಳಲ್ಲಿ ಅವರ ನಟನೆಯ ಚಿತ್ರ ನೋಡಿಕೊಂಡು ಬೆಳೆದಿರುವ ತನಗೆ ಸುದೀಪ್ ಅವರ ಕಡಲ ದಾಟಿ ಬಂದ ಫೇವರಿಟ್ ಹಾಡು ಎಂದಿದ್ದಾರೆ.

ದರ್ಶನ್ ಜತೆ ಕೆಲಸ ಮಾಡಿದ್ದರ ಬಗ್ಗೆ ನಿಮಿಕಾ ಹೇಳಿದ್ದಿಷ್ಟು
ಮೂಲತಃ ಮಂಗಳೂರಿನವರಾದ ನಿಮಿಕಾ ರತ್ನಾಕರ್ ಮೊದಲಿಗೆ ತಾನು ಕ್ರಾಂತಿ ಚಿತ್ರದ ಹಾಡಿಗೆ ಆಯ್ಕೆಯಾಗುವುದು ಅನುಮಾನ ಎಂದುಕೊಂಡಿದ್ದರಂತೆ. ಅನುಮಾನದೊಂದಿಗೆ ಆಡಿಷನ್ ಮುಗಿಸಿದ್ದ ತನಗೆ ಅವಕಾಶ ಸಿಕ್ಕಾಗ ಅದನ್ನು ನಂಬಲಾಗಲಿಲ್ಲ ಎಂದು ನಿಮಿಕಾ ತಿಳಿಸಿದರು. ಇನ್ನು ಶೂಟಿಂಗ್ ವೇಳೆ ದರ್ಶನ್ ಅವರು ತಿಂಡಿ ಆಯಿತಾ, ಊಟ ಆಯಿತಾ ಎಂದು ವಿಚಾರಿಸುತ್ತಿದ್ದರು, ಅದನ್ನು ಬಿಟ್ಟರೆ ಅವರು ಹೆಚ್ಚೇನೂ ಮಾತನಾಡುತ್ತಿರಲಿಲ್ಲ, ಅವರು ತುಂಬಾ ಸರಳ ವ್ಯಕ್ತಿ ಎಂದೂ ಸಹ ನಿಮಿಕಾ ತಿಳಿಸಿದರು.


Click it and Unblock the Notifications











