ಅವಮಾನ ಮಾಯ ಮಾಡಿದ ಅಣ್ಣಾವ್ರ ಕಥೆ ಹೇಳಿದ ಟಿ.ಎನ್ ಸೀತಾರಾಂ
ಆ ದಿನಗಳಲ್ಲಿ ರಾಜಕುಮಾರ್ ರವರು ಕನ್ನಡದ ಮನಸ್ಸು ಗಳನ್ನು ಅಕ್ಷರಶಃ ಆಳುತ್ತಿದ್ದರು.. ನನಗೆ ಅವರನ್ನು ಮಾತನಾಡಿಸಿ ಸಾಧ್ಯವಾದರೆ ಅವರ ಜತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ನನ್ನ ಹೈಸ್ಕೂಲ್ ದಿನಗಳಿಂದ ಇದ್ದು, ಆ ಆಸೆ ಈಡೇರದೆ ಕಮರಿ ಹೋಗಿತ್ತು.. ಆ ದಿನಗಳಲ್ಲಿ ನನ್ನ ಮಾಯಾಮೃಗ ಮುಗಿದಿತ್ತು..ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೆ....ಆ ಅವಮಾನ ಕಾಡುತ್ತಿತ್ತು..
ನಂತರ ಕೆಲವು ದಿನಕ್ಕೆ ಈಟಿವಿ ಶುರುವಾಯಿತು.... ಆ ಸಮಯದಲ್ಲಿ ಒಂದು ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನ ಫೋನ್ ಮಾಡಿದರು. ಚೆನ್ನ ರಾಜ್ ಕುಮಾರ್ ರವರ ಅತ್ಯಂತ ಆತ್ಮೀಯ ವ್ಯಕ್ತಿ, ಸೆಕ್ರೆಟರಿ, ಎಲ್ಲಾ.. ನನಗೆ ಗೊತ್ತಿದ್ದ ಮನುಷ್ಯ..
"ಅಣ್ಣ ಇಲ್ಲೊಬ್ಬರು ನಿಮ್ಮ ಹತ್ತಿರ ಮಾತನಾಡಬೇಕಂತೆ" ಎಂದರು
"ಯಾರು" ಎಂದೆ.
ನೋಡಿದರೆ ಮಾತನಾಡುತ್ತಿದ್ದುದು ಸ್ವತಹ ರಾಜಕುಮಾರ್ ರವರು.

"ನಮಸ್ಕಾರ... ...ನಿಮ್ಮ ಧಾರಾವಾಹಿಗಳ ಅಭಿಮಾನಿ...ನಿಮ್ಮ ಮಾಯಾಮೃಗವಂತೂ ನಾವು ಒಂದು ದಿನ ಬಿಟ್ಟಿಲ್ಲ..." ಎಂದು ಹೇಳುತ್ತಿದ್ದಂತೆ ನನ್ನ ಗಂಟಲು ಒಣಗಿ,ಎದೆ ಹೊಡೆದು ಕೊಳ್ಳಲು ಆರಂಭಿಸಿತು...
'ಈಗ ನಾವು ನಮ್ಮ ಬ್ಯಾನರ್ ನ ಅಡಿಯಲ್ಲಿ ಒಂದು ಧಾರಾವಾಹಿ ಈಟಿವಿ ಗೆ ಮಾಡಬೇಕೆಂದು ತೀರ್ಮಾನ ವಾಗಿದೆ...ನಾಳೆ ಭಾನುವಾರ ಚಿತ್ರೀಕರಣ ಆರಂಭ....ತಾವು ಮುಖ್ಯ ಅತಿಥಿಗಳಾಗಿ ಬಂದು ಕ್ಯಾಮರಾ ಆನ್ ಮಾಡಬೇಕು." ಎಂದರು.ಅನಿರೀಕ್ಷಿತವಾಗಿ ಬಂದ ಈ ಸಂತೋಷದಿಂದಾಗಿ ನನಗೆ ಮಾತೇ ಹೊರಡಲಿಲ್ಲ. ಅದನ್ನು ಅವರು ತಪ್ಪು ತಿಳಿದರು.
"ನಿಮಗೆ ಅವತ್ತು ಬಿಡುವಿಲ್ಲ ಅಂದರೆ ಹೇಳಿ.ನಿಮಗೆ ಅನುಕೂಲವಾದ ದಿನಕ್ಕೆ ಚಿತ್ರೀಕರಣವನ್ನು ಮುಂದೂಡುತ್ತೇವೆ " ಎಂದರು.ನನಗೆ ನಾಚಿಕೆ ಆಯಿತು."ಇಲ್ಲ ಸಾರ್...( ಸಾರ್ ಅನ್ನಬೇಕೋ, ಅಣ್ಣಾವ್ರೇ ಅನ್ನಬೇಕೋ ಎಂಬ ಗೊಂದಲ)...ಬಿಡುವಾಗಿದ್ದೇನೆ ಬರುತ್ತೇನೆ"
ಎಂದು ಹೇಳಿಬಿಟ್ಟೆ. ಅವತ್ತೆಲ್ಲ ನನಗೆ ಅನುಮಾನ.. ಬೇರೆಯವರಿಗೆ ಹೇಳಲುಹೋಗಿ ನನಗೆ ಹೇಳಿರಬಹುದೇ ಎಂದು.
ಭಾನುವಾರ ಗೀತಾ, ಅಶ್ವಿನಿ ಜತೆ ಹೋದೆ.ಅವರ ಮನೆಯ ಎಲ್ಲರೂ ಇದ್ದರು..ಅವರಂಥ ಸೌಜನ್ಯದ ಮೂರ್ತಿ ಯನ್ನು ನಾನು ನೋಡೇ ಇರಲಿಲ್ಲ.. ನಾನು ಹೋಗುವುದಕ್ಕೆ ಕಾಯುತ್ತಿದ್ದರು.ಹಾರ ಹಾಕಿದರು.ಅದೇ ಗೀತಾ ಕೈಲಿ ಚಿತ್ರದಲ್ಲಿ ಇರುವ ಹಾರ. ನಾನು ಸೋತಿದ್ದರ ಅವಮಾನ ನಂತರ ಮಾಯವಾಯಿತು.
(ಟಿಎನ್ ಸೀತಾರಾಂ ಅವರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಕಟ ಮಾಡಿಕೊಂಡಿರುವ ಸಾಲುಗಳನ್ನ ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ)


Click it and Unblock the Notifications











