ಕಷ್ಟ ಬಂದರೆ ಶಿವಣ್ಣ ಮೊದಲು ಕರೆ ಮಾಡುವುದು ಇವರಿಗೆ
ದೇಶವೇ ಆರಾಧಿಸುವ ದೊಡ್ಡ ನಟನ ಪುತ್ರ, ಇಬ್ಬರು ಖ್ಯಾತ ನಟ, ನಿರ್ಮಾಪಕರ ಅಣ್ಣ, ಕೋಟ್ಯಂತರ ಅಭಿಮಾನಿಗಳಿಗೆ ಪ್ರೀತಿಯ ಮುತ್ತಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಕಷ್ಟ ಬರುವುದು ಸಾಧ್ಯವಾ? ಕಷ್ಟ ಬಂದರೆ ಸಹಾಯಕ್ಕೆ ರಾಜ್ಯವೇ ನಿಲ್ಲುತ್ತದೆ. ಆ ಮಟ್ಟಿನ ಗೌರವ, ಪ್ರೀತಿಯನ್ನು ಶಿವಣ್ಣ ಗಳಿಸಿಕೊಂಡಿದ್ದಾರೆ.
Recommended Video
ಆದರೆ ಒಂದು ವೇಳೆ ಸಮಸ್ಯೆ ಏನಾದರೂ ಬಂದರೆ ಶಿವಣ್ಣ ಮೊದಲಿಗೆ ಕರೆ ಮಾಡುವುದು ಯಾರಿಗೆ? ಶಿವಣ್ಣನಿಗೆ ಎಲ್ಲಾ ರಾಜಕೀಯ ಪಕ್ಷದಲ್ಲೂ ಗೆಳೆಯರಿದ್ದಾರೆ. ರಾಜಕೀಯ ಕುಟುಂಬದ ಹತ್ತಿರದ ಸಂಬಂಧವೂ ಶಿವಣ್ಣನಿಗೆ ಇದೆ. ಆದರೆ ಶಿವಣ್ಣ ಕರೆ ಮಾಡುವುದು ತಮ್ಮ ರಾಜಕೀಯ ಗೆಳೆಯರಿಗಲ್ಲ.
ಸಮಸ್ಯೆ ಬಂದಾಗ ಶಿವಣ್ಣ ಮೊದಲು ಕರೆ ಮಾಡುವುದು ತಮ್ಮ ಬಾಲ್ಯದ ಗೆಳೆಯ ಗುರುದತ್ ಗೆ. ಹೌದು, ಶಿವರಾಜ್ ಕುಮಾರ್ ತಮ್ಮ ಬಾಲ್ಯದ ಗೆಳೆಯ ಚಿ.ಗುರುದತ್ ಗೆ ಮೊದಲ ಕರೆ ಮಾಡುತ್ತಾರಂತೆ. ಹೀಗೆಂದು ಸ್ವತಃ ಶಿವರಾಜ್ ಕುಮಾರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಗುರುದತ್-ಶಿವಣ್ಣ ಗೆಳೆತನ ಎಲ್ಲರಿಗೂ ಗೊತ್ತು
ಗುರುದತ್ ಹಾಗೂ ಶಿವಣ್ಣನ ಗೆಳೆತನ ಸಿನಿಮಾ ಮಂದಿಗೆ ಮಾತ್ರವಲ್ಲ ಇಡೀಯ ರಾಜ್ಯಕ್ಕೆ ಗೊತ್ತು. ಚಿ ಉದಯ್ಶಂಕರ್ ಅವರ ಪುತ್ರ ಗುರುದತ್ ಶಿವಣ್ಣ ಅವರಿಗೆ ಬಾಲ್ಯದ ಗೆಳೆಯ. ದಶಕಗಳು ಕಳೆದರೂ ಅವರ ಗೆಳೆತನ ಇನ್ನೂ ಮಾಸಿಲ್ಲ, ಬದಲಿಗೆ ಇನ್ನಷ್ಟು ಗಟ್ಟಿಯಾಗುತ್ತಲೆ ಬಂದಿದೆ.

ಗುರುದತ್ ಹೊರತಾಗಿ ಇನ್ನೂ ಇಬ್ಬರಿಗೆ ಕರೆ ಮಾಡ್ತಾರೆ
ಗುರುದತ್ ಬಿಟ್ಟರೆ ಇನ್ನೂ ಇಬ್ಬರಿಗೆ ಶೀವರಾಜ್ ಕುಮಾರ್ ಕರೆ ಮಾಡ್ತಾರೆ. ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಅದು ಬಿಟ್ಟರೆ ಶಿವಣ್ಣ ಅವರ ಸಂಬಂಧಿ ಮಧು ಬಂಗಾರಪ್ಪ ಅವರಿಗೆ ಶಿವಣ್ಣ ಕರೆ ಮಾಡ್ತಾರಂತೆ. ಅವರೊಂದಿಗೂ ಅತ್ಯುತ್ತಮ ಬಾಂಧವ್ಯವನ್ನು ಶಿವಣ್ಣ ಹೊಂದಿದ್ದಾರೆ.

ಶಿವಣ್ಣನಿಗೆ ಪ್ರತಿಸ್ಪರ್ಧಿ ನಾಯಕ ಯಾರು?
ಸಂದರ್ಶನದಲ್ಲಿ ಹಲವು ವಿಷಯ ಮಾತನಾಡಿರುವ ಶಿವಣ್ಣ, ತಮ್ಮ ಸಮಕಾಲಿನ ನಟರುಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಿತ್ರರಂಗದಲ್ಲಿ ನಿಮ್ಮ ಪ್ರತಿಸ್ಪರ್ಧಿ ಯಾರು? ಎಂಬ ಪ್ರಶ್ನೆಗೆ ದೊಡ್ಡತನದಿಂದ ಉತ್ತರಿಸಿದ ಶಿವಣ್ಣ, ನಾನೂ ಯಾರನ್ನೂ ನನ್ನ ಕಾಂಪಿಟೇಟರ್ ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ.

ಎಲ್ಲರೂ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ: ಶಿವಣ್ಣ
ಈಗ ಇರುವ ನಾಯಕರು ನನಗಿಂತ ವಯಸ್ಸಿನಲ್ಲಿ ಬಹಳ ಕಿರಿಯರು, ಆದರೆ ಅವರೆಲ್ಲರೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಿನಿಮಾದ ಮಾರ್ಕೆಟ್ ಹಿಗ್ಗಿಸುತ್ತಿದ್ದಾರೆ ಅದು ನನಗೆ ಸಂತೋಶ, ಒಳ್ಳೆಯ ಸಿನಿಮಾ ಮಾಡಲಿ ಎಂಬುದಷ್ಟೆ ನನ್ನ ಹಾರೈಕೆ ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











