ಕಂಪ್ಲೀಟ್ ಡಿಫರೆಂಟ್ ಚಿತ್ರ ಟೋನಿ, ಶ್ರೀನಗರ ಕಿಟ್ಟಿ
ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರು ತುಂಬು ಕನಸಿನೊಂದಿಗೆ ರು.4.30 ಕೋಟಿಗಳಲ್ಲಿ ನಿರ್ಮಿಸಿ ನಟಿಸಿರುವ ಬಹುನಿರೀಕ್ಷಿತ 'ಟೋನಿ' ಚಿತ್ರ ಇದೇ ಆಗಸ್ಟ್ 9ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸರಿಸುಮಾರು 125ರಿಂದ 150 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
'ಒಲವೇ ಮಂದಾರ' ಖ್ಯಾತಿಯ ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಾಕಷ್ಟು ವಿಶೇಷಗಳುಂಟು ಎನ್ನುತ್ತಾರೆ ಕಿಟ್ಟಿ. ತಮ್ಮ ಮಹತ್ವಾಕಾಂಕ್ಷಿ ಚಿತ್ರದ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದರು. ಚಿತ್ರದ ಹಲವು ಹತ್ತು ವಿಷಯಗಳನ್ನು ಹಂಚಿಕೊಂಡರು. ಕಿಟ್ಟಿ ಜೊತೆಗಿನ ಸಂದರ್ಶನದ ಆಯ್ದ ಭಾಗ ನಿಮ್ಮ ಮುಂದೆ.
1. ಅಂಬರೀಶ್-ಲಕ್ಷ್ಮಿ ಜೋಡಿಯ 'ಟೋನಿ' (1980) ಚಿತ್ರಕ್ಕೂ ಕಿಟ್ಟಿ-ಐಂದ್ರಿತಾ ರೇ 'ಟೋನಿ'ಗೂ ಏನು ವ್ಯತ್ಯಾಸ?
ವ್ಯತ್ಯಾಸ ತುಂಬಾನೇ ಇದೆ. ಆದರೆ ಸಾಮ್ಯತೆ ಇರುವುದು ಎರಡೇ ಎರಡು ವಿಷಯಗಳಲ್ಲಿ ಮಾತ್ರ. ಆ ಚಿತ್ರದ ಹೆಸರು ಟೋನಿ. ತಮ್ಮ ಚಿತ್ರದ ಹೆಸರು ಟೋನಿ. ಆ ಚಿತ್ರದಲ್ಲಿ ಅಂಬರೀಶ್ ಅವರು ನಟಿಸಿ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ನಾನು ನಟಿಸಿ ನಿರ್ಮಿಸಿದ್ದೇನೆ. ಈ ಎರಡು ವಿಷಯಗಳು ಬಿಟ್ಟರೆ ಇನ್ನು ಯಾವುದೇ ವಿಧದಲ್ಲೂ ಸಂಬಂಧವಿಲ್ಲ.
2. ಚಿತ್ರದಲ್ಲಿ ಇಬ್ಬರು ಸಂಗೀತ ನಿರ್ದೇಶಕರು, ಒಂಭತ್ತು ಹಾಡುಗಳು ಏನಿದರ ವಿಶೇಷ?
ಚಿತ್ರದಲ್ಲಿನ ಐದು ಹಾಡುಗಳು ಪೂರ್ಣ ಪ್ರಮಾಣದಲ್ಲಿವೆ. ಇನ್ನು ಉಳಿದ ಹಾಡುಗಳು ಜನಪದ ಬಿಟ್ ಗಳು. ನಮ್ಮ ಸಂಸ್ಕೃತಿ, ಜನಪದ, ಹಳ್ಳಿಗಾಡಿನ ಬಗ್ಗೆ ಔದಾರ್ಯ ತೋರಿಸುವ ಸನ್ನಿವೇಶಗಳು ಚಿತ್ರದಲ್ಲಿ ಸಾಕಷ್ಟಿವೆ. ಈ ಸಂದರ್ಭದಲ್ಲಿ ಈ ಬಿಟ್ ಹಾಡುಗಳು ಮೂಡಿಬರುತ್ತವೆ.
3. ಚಿತ್ರದಲ್ಲಿ ರಘು ದೀಕ್ಷಿತ್, ಸಾಧು ಕೋಕಿಲ ಸಂಗೀತ ಝಲಕ್ ಏನು?
ರಘು ದೀಕ್ಷಿತ್ ಅವರು ಒಂದು ಹಾಡನ್ನು ಹಾಡುವುದರ ಜೊತೆಗೆ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶನ ಸಾಧು ಕೋಕಿಲ ಅವರದು. ಇನ್ನೊಂದು ಹಾಡನ್ನು ವಿ.ಹರಿಕೃಷ್ಣ ಹಾಡಿದ್ದಾರೆ. ಒಟ್ಟು ಮೂರು ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಈಗಾಗಲೆ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದಲ್ಲಿ ಹಾಡುಗಳಷ್ಟೇ ವಿಶೇಷವಲ್ಲ. ಕಂಪ್ಲೀಟ್ ಚಿತ್ರವೇ ಹಲವು ವಿಶೇಷತೆಗಳಿಂದ ಕೂಡಿದೆ. ಯಾವುದೇ ಚಿತ್ರಕ್ಕೆ ಹಾಡುಗಳು ಆಮಂತ್ರಣ ಪತ್ರಿಕೆ ಇದ್ದಂತೆ. ಅದು ಅದ್ದೂರಿಯಾಗಿದ್ದರೆ ಮದುವೆ ಇನ್ನೂ ಅದ್ಭುತವಾಗಿರುತ್ತದೆ.

4. 'ಒಲವೇ ಮಂದಾರ' ಜಯತೀರ್ಥ ಅವರ ನಿರ್ದೇಶನದ ಬಗ್ಗೆ?
ಚಿತ್ರವನ್ನು ಹೇಗೆ ತೋರಿಸಬೇಕು ಎಂಬುದು ಜಯತೀರ್ಥ ಅವರಿಗೆ ಬಹಳ ಸ್ಪಷ್ಟವಾಗಿ ಗೊತ್ತು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಒಂದಷ್ಟು ಅಂಶಗಳನ್ನು ಕಮರ್ಷಿಯಲ್ ಚಿತ್ರದಲ್ಲಿ ಬೆರೆಸಿದ್ದಾರೆ. ಹಾಗಂತ ಇದು ಕಲಾತ್ಮಕ ಚಿತ್ರವಲ್ಲ ಪ್ರಯೋಗಾತ್ಮಕ ಚಿತ್ರ. ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯುಳ್ಳ ಬಹಳಷ್ಟು ಕಲಾವಿದರನ್ನೂ ಬಳಸಿಕೊಂಡಿದ್ದಾರೆ. ಎಲ್ಲಾ ವಿಚಾರಗಳಲ್ಲೂ ತುಂಬಾ ಸ್ಪಷ್ಟತೆ ಇದೆ. ಇನ್ನು ಚಿತ್ರಕಥೆ ವಿಚಾರಕ್ಕೆ ಬಂದರೆ ಇದುವರೆಗೂ ಯಾರೂ ಮಾಡದೇ ಇರುವಂತಹ ಸಬ್ಜೆಕ್ಟ್ ಇದು. ಆ ಒಂದು ಮಟ್ಟಕ್ಕೆ ಅವರು ಪ್ರಯತ್ನಿಸಿದ್ದಾರೆ. ಒಬ್ಬನಟನಾಗಿ, ನಿರ್ಮಾಪಕನಾಗಿ ಜಯತೀರ್ಥ ಅವರ ಜೊತೆ ತುಂಬಾ ತುಂಬಾ ಹೊಂದಾಣಿಕೆ ಇತ್ತು.


Click it and Unblock the Notifications












