ನಟರನ್ನು ಕನ್ನಡದ ಕಣ್ಮಣಿಯಾಗಿಸಿದ ಗೀತೆಗಳಿವು
'ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ' ಎಂಬ ಸಾಲುಗಳು ಕಿವಿಯ ಮೇಲೆ ಬಿದ್ದ ತಕ್ಷಣ ಪ್ರತಿಯೊಬ್ಬ ಕನ್ನಡಿಗನಲ್ಲೂ ರೋಮಾಂಚನ ಉಂಟಾಗುತ್ತದೆ.
ಭಾಷೆ ಬೆಳವಣಿಗೆಗೆ ಸಾಹಿತ್ಯ, ಸಿನಿಮಾ, ನಾಟಕ, ರಂಗಭೂಮಿ, ಹೋರಾಟಗಾರರು ಎಲ್ಲರೂ ಪೂರಕವಾಗುತ್ತಾರೆ. ಅಂತೆಯೇ ಕನ್ನಡ ಸಿನಿಮಾ ರಂಗದ ವಿವಿಧ ಹಾಡುಗಳು ನೆಲ, ಜಲ, ಭಾಷೆಯ ಕಂಪನ್ನು ಸದಾ ಪಸರಿಸುತ್ತಲೇ ಇವೆ. ಈ ಹಾಡುಗಳು ಎಷ್ಟು ಕೇಳಿದರೂ ಹಳೆಯದಾಗುವುದೇ ಇಲ್ಲ. ಯಾಕೆಂದರೆ ಕನ್ನಡ ಭಾಷೆಗಿರುವ ಶಕ್ತಿಯೇ ಅಂಥದ್ದು.

ಇಂಥ ಹಾಡುಗಳೇ ಡಾ. ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಂಕರ್ ನಾಗ್ ಅವರನ್ನು ಕನ್ನಡದ ಕಣ್ಮಣಿಗಳನ್ನಾಗಿಸಿದ್ದು. ಹಾಡುಗಳಿಗೆ ಧ್ವನಿ ನೀಡಿದ ಪಿ.ಬಿ.ಶ್ರೀನಿವಾಸ್, ಡಾ. ಎಸ್.ಪಿ.ಬಾಲಸುಬ್ರಮಣ್ಯಂ, ಯೇಸುದಾಸ್, ಘಂಟಸಾಲ ಸ್ವರ ಮಾಧುರ್ಯ ಎಂದಿಗೂ ಮರೆಯಾಗಲ್ಲ. ಹಂಸಲೇಖ, ವಿಜಯಭಾಸ್ಕರ್, ಚಿ.ಉದಯ ಶಂಕರ್, ಉಪೇಂದ್ರ ಕುಮಾರ್ ಕೊಡುಗೆಯನ್ನು ಮರೆಯುವಂತಿಲ್ಲ.
ಡಾ ರಾಜ್ ಅಭಿನಯದ ಗಂಧದಗುಡಿ, ಮಯೂರ ವಿಷ್ಣುವರ್ಧನ್ ಅಭಿನಯಿದ ಮೊದಲ ಚಿತ್ರ ನಾಗರಹಾವಿಂದ ಹಿಡಿದು ಮೋಜುಗಾರ ಸೊಗಸುಗಾರ, ಜೀವನದಿ, ವೀರಪ್ಪ ನಾಯಕ ಮತ್ತು ಆಪ್ತ ರಕ್ಷಕ ಸಿನಿಮಾವರೆಗೂ ಒಂದೆಲ್ಲ ಒಂದು ಕನ್ನಡ ಸತ್ವ ಸಾರುವ ಹಾಡುಗಳು ಜತೆಯಾಗಿದ್ದವು. ರವಿಚಂದ್ರನ್ ಗೆ ಪೂರಕವೆಂಬಂತೆ ನಾನು ನನ್ನ ಹೆಂಡ್ತಿ, ಸಿಪಾಯಿ , ಮಲ್ಲಚಿತ್ರಗಳಲ್ಲೂ ಕನ್ನಡತನ ಕಂಡುಬಂತು.

ಕನ್ನಡದ ಕಂಪು ಸಾರುವಮ ಕೆಲ ಹಾಡುಗಳನ್ನು ನೆನಪು ಮಾಡಿಕೊಂಡು ಒಮ್ಮೆ ಗುನುಗಿದರೆ ಎಷ್ಟು ಚೆಂದ ಅಲ್ಲವೇ?
ಚಿತ್ರ: ಮೋಜುಗಾರ, ಸೊಗಸುಗಾರ, ಗಾಯನ: ವಿಷ್ಣುವರ್ಧನ್
ಕನ್ನಡವೇ ನಮ್ಮಮ್ಮ,
ಅವಳಿಗೆ ಕೈ ಮುಗಿಯಮ್ಮ ,
ಮಾತಾಡೋ ದೇವರಿಳು
ನಮ್ಮ ಕಾಪಾಡೋ ಗುರು ಇವಳೂ...
ಚಿತ್ರ: ಮಲ್ಲ, ಗಾಯನ: ಎಲ್.ಎನ್. ಶಾಸ್ತ್ರೀ
ಕರುನಾಡೇ ಕೈ ಚಾಚಿದೇ ನೋಡೆ
ಹಸಿರುಗಳೇ ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾರೋ ಹಕ್ಕಿ ಸ್ವಾಗತ ಕೋರಿದೆ
ಚಿತ್ರ: ಬೆಳ್ಳಿ ಕಾಲುಂಗುರ, ಸಾಹಿತ್ಯ ಮತ್ತು ಸಂಗೀತ: ಹಂಸಲೇಖ, ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ
ಕಾಣಿಸದೇ ಹೊನ್ನ ಚರಿತೆಯಲಿ ಹಂಪೆಯ ಗುಡಿ...
ಚಿತ್ರ: ಕೃಷ್ಣ ರುಕ್ಮಿಣಿ (1988) ಸಂಗೀತ: ರಾಜನ್ ನಾಗೇಂದ್ರ, ಗಾಯನ: ಎಸ್.ಪಿ.ಬಿ
ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ ಹಾಡುವೆ ಕೇಳಿ
ಚಿತ್ರ ನಾನು ನನ್ನ ಹೆಂಡ್ತಿ, ಸಾಹಿತ್ಯ: ಹಂಸಲೇಖ, ಸಂಗೀತ: ಶಂಕರ್-ಗಣೇಶ್, ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯಮ, ಪ್ರೇಮಾಲಯ ಈ ದೇವಾಲಯ..
ವಿಷ್ಣುವರ್ಧನ್ ಅಭಿನಯದ ಸಾಮ್ರಾಟ ಚಿತ್ರದ ನಿಮ್ಮ ಕಡಿ ಹಾಡಿನ. ಮುಂದುವರಿದ ಭಾಗ..
ಬೆಳಗಾವಿಯಾದರೇನು? ಬೆಂಗಳೂರು ಆದರೇನು ನಗಬೇಕು ನಾವು ಮೊದಲು ಮಾತಾಡಲು
ಎದೆ ಭಾಷೆಯ ಅರಿವಾಗಲು...
ಚಿತ್ರ: ನಾಗರಹಾವು, ಗಾಯನ: ಪಿ.ಬಿ.ಶ್ರೀನಿವಾಸ್
ಕನ್ನಡ ನಾಡಿನ ವೀರರ ಮಣಿಯ ಗಂಡು ಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ...
ಚಿತ್ರ: ಚಲಿಸುವ ಮೋಡಗಳು (1982) ಗಾಯನ: ಡಾ ರಾಜ್ ಕುಮಾರ್
ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ
ಚಿತ್ರ: ಆಕಸ್ಮಿಕ ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಡಾ. ರಾಜ್ ಕುಮಾರ್
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಚಿತ್ರ: ಮಸಣದ ಹೂ, ಸಂಗೀತ - ವಿಜಯ ಭಾಸ್ಕರ್
ಕನ್ನಡ ನಾಡಿನ ಕರಾವಳಿ, ಕನ್ನಡ ದೇವಿಯ ಪ್ರಭಾವಳಿ
ಇದಲ್ಲದೇ ತಿರುಗುಬಾಣ ಚಿತ್ರದ ಇದೇ ಭಾಷೆ ಇದೇ ಹಾಡು, ಎಂದೆಂದೂ ನನ್ನದಾಗಿರಲಿ, ಸೋಲಿಲ್ಲದ ಸರದಾರ ಚಿತ್ರದ ಈ ಕನ್ನಡ ಮಣ್ಣನು ಮರೀಬೇಡ ಓ ಅಭಿಮಾನಿ, ಈ ನಾಡು ಚೆನ್ನ, ಈ ಮಣ್ಣು ಚಿನ್ನ ಹಾಡುಗಳು ಕಿವಿಯಲ್ಲಿ ಗುನುಗುತ್ತವೆ.

ಬರೆಯುತ್ತಾ ಹೋದರೆ ಇದಕ್ಕೊಂದು ಅಂತ್ಯ ಕಾಣಿಸುವುದು ಬಹಳ ಕಷ್ಟ, ನೂರಾರು ಹಾಡುಗಳು ನೆನಪಿನ ಪಟಲದಿಂದ ಆಚೆ ಬರುತ್ತವೆ. 'ಕನ್ನಡ ನಾಡಿನ ಜೀವನದಿ ಈ ಕಾವೇರಿ' ಎಂದ ವಿಷ್ಣುವರ್ಧನ್, ಕನ್ನಡ ಭಾಸೇನೆ ನನ್ ಜೀವ ಎಂದ ಜಗ್ಗೇಶ್, ಹೇ ರುಕ್ಕಮ್ಮಾ ,,, ನಮ್ಮ ನಾಡೇ ನಾಡಮ್ಮಾ ಎಂದ ರವಿಚಂದ್ರನ್..ಒಬ್ಬರ ಹಿಂದೆ ಒಬ್ಬರು ನೆನಪಾಗುತ್ತಾರೆ. ಇದನ್ನು ಓದಿದ ನಂತರ ನಿಮಗೆ ನೆನಪಾದ ಭಾಷೆ, ನಾಡ ಗೌರವ ಸಾರುವ ಹಾಡನ್ನು ಗುನುಗಲು ಮಾತ್ರ ಮರೆಯಬೇಡಿ. ಹಾಡಿನ ಸಾಲು ಬರೆದು ಪ್ರತಿಕ್ರಿಯೆ ತಿಳಿಸಿ.


Click it and Unblock the Notifications











