TRP Scam: 'ಯಜಮಾನ' ನಿರ್ಮಾಪಕಿ ವಿರುದ್ಧ ಅಪಪ್ರಚಾರ: ದೂರು ದಾಖಲು
ದೇಶದಲ್ಲಿ ಪ್ರಸ್ತುತ ಟಿಆರ್ಪಿ ಹಗರಣ ಬಹಳ ದೊಟ್ಟ ಮಟ್ಟದಲ್ಲಿ ಚರ್ಚೆಯಲ್ಲಿದೆ. ಟಿವಿ ವಾಹಿನಿಗಳಿಗೆ ನೀಡಲಾಗುವ ರೇಟಿಂಗ್ ಪಾಯಿಂಟ್ನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಮುಖ ಟಿವಿ ವಾಹಿನಿಗಳು ಹಾಗೂ ಕೆಲವು ನಿರ್ಮಾಣ ಸಂಸ್ಥೆಗಳು ಟಿಆರ್ಪಿ ಟ್ಯಾಂಪರಿಂಗ್ ಮಾಡುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದು, ಬಾರ್ಕ್ (ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಸಂಸ್ಥೆಯ ಮಾಜಿ ಸಿಇಓ ಪಾರ್ಥೋ ದಾಸ್ ಗುಪ್ತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್ಗುಪ್ತಾ ಮತ್ತು ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ನಡುವಿನ ವಾಟ್ಸಾಪ್ ಚಾಟ್ನ 509 ಸ್ಕ್ರೀನ್ ಶಾರ್ಟ್ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಟಿಆರ್ಪಿ ದಂಧೆಯಲ್ಲಿ ರಾಷ್ಟ್ರೀಯ ಪ್ರಮುಖ ವಾಹಿನಿಗಳು ಹಾಗೂ ನಿರ್ಮಾಣ ಸಂಸ್ಥೆಗಳ ಹೆಸರು ತಳುಕುಹಾಕಿಕೊಂಡಿದೆ. ಈ ಕಡೆ ರಾಜ್ಯದಲ್ಲೂ ಕೆಲವು ವಾಹಿನಿ ಮತ್ತು ನಿರ್ಮಾಣ ಸಂಸ್ಥೆಗಳು ಈ ದಂಧೆಯಲ್ಲಿ ಭಾಗಿಯಾಗಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ.
ಟಿಆರ್ಪಿ ಹಗರಣ : ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸೋರಿಕೆ
ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಟಿ ಅರ್ ಪಿ ಟ್ಯಾಂಪರಿಂಗ್ ಮಾಡಲಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ಗಳಲ್ಲಿ ಹರಿದಾಡುತ್ತಿದೆ. ಈ ಮಧ್ಯೆ 'ಯಜಮಾನ' ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ದೂರು ಸಹ ದಾಖಲಿಸಿದ್ದಾರೆ. ಮುಂದೆ ಓದಿ....

ಶೈಲಜಾ ನಾಗ್ ಹೆಸರು ಅಪಪ್ರಚಾರ?
ಟಿಆರ್ ಪಿ ಹಗರಣದಲ್ಲಿ ನಿರ್ಮಾಪಕಿ ಶೈಲಜಾ ನಾಗ್ ಅವರ ಹೆಸರಿದೆ, ಶೈಲಜಾ ನಾಗ್ ಹಾಗೂ ಅವರ ಬಿಸಿನೆಸ್ ಪಾರ್ಟ್ನರ್ ಶಿವಕುಮಾರ್ ಜೊತೆ ಸೇರಿ ಟಿಆರ್ಪಿ ಟ್ಯಾಂಪರಿಂಗ್ ಮಾಡುತ್ತಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಶೈಲಜಾ ನಾಗ್ ಅವರ ಗಮನಕ್ಕೆ ಬಂದಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಶೈಲಜಾ ನೀಡಿರುವ ದೂರಿನಲ್ಲಿ ಏನಿದೆ?
''ಜನವರಿ 14, 2021 ರಿಂದ ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪಗಳು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಗಳು ಸಂಪೂರ್ಣವಾಗಿ ಅಸತ್ಯವಾಗಿದ್ದು, ನನ್ನ ಗೌರವಕ್ಕೆ ಚ್ಯುತಿ ತರುವಂತದ್ದಾಗಿವೆ. ನಾನು ಕಳೆದ ಎರಡು ದಶಕದಿಂದ ಶ್ರಮ ವಹಿಸಿ ಕಟ್ಟಿರುವ ನನ್ನ ಸಂಸ್ಥೆ ಮತ್ತು ನನ್ನ ವ್ಯಕ್ತಿತ್ವದ ಮೇಲೆ ಮಸಿ ಬಳಿಯುತ್ತಿವೆ. ಮತ್ತು ಚಲನಚಿತ್ರ ಹಾಗೂ ಟೆಲಿವಿಷನ್ ಉದ್ಯಮದಲ್ಲಿನ ನನ್ನ ಹೂಡಿಕೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿವೆ. ದಯಮಾಡಿ ಇಂತಹ ಸುಳ್ಳು ಸುದ್ದಿ ಹರಡುತ್ತಾ ಇರುವವರನ್ನು ಪತ್ತೆ ಮಾಡಿ ಅವರ ಮೇಲೆ ಕ್ರಮ ಜರುಗಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ'' ಎಂದು ದೂರು ನೀಡಿದ್ದಾರೆ.
ಟಿಆರ್ಪಿ ಹಗರಣ; ಅರ್ನಬ್ ಗೋಸ್ವಾಮಿಯಿಂದ ಲಕ್ಷ ಲಕ್ಷ ಲಂಚ?

ಎನ್ಸಿಆರ್ ದಾಖಲಿಸಿರುವ ಪೊಲೀಸರು
ನಿರ್ಮಾಪಕಿ ಶೈಲಜಾ ನಾಗ್ ಅವರ ದೂರಿನ ಅನ್ವಯ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಾಪ್ಗಳಲ್ಲಿ ಈ ಸಂದೇಶ ಹೇಗೆ ಹರಿಯಬಿಡಲಾಗಿದೆ, ಯಾರು ಎಡಿಟ್ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ಮಾಡಲಿದ್ದಾರೆ.

ಟಿಆರ್ಪಿ ಪ್ರಕಟಣೆ ಸ್ಥಗಿತಗೊಂಡಿದೆ
ಟಿಆರ್ಪಿ ಹಗರಣ ಬೆಳಕಿಗೆ ಬಂದ ನಂತರ ಬಾರ್ಕ್ ಸಂಸ್ಥೆ ಪ್ರತಿ ವಾರ ಪ್ರಕಟಣೆ ಮಾಡುವ ಟಿಆರ್ಪಿಗೆ ಬ್ರೇಕ್ ಹಾಕಿದೆ. ಹಲವು ವಾರಗಳಿಂದ ಟಿಆರ್ಪಿ ಪ್ರಕಟಿಸುತ್ತಿಲ್ಲ. ಟಿಆರ್ಪಿ ಹಗರಣದ ಬಗ್ಗೆ ಹಾಗೂ ಟಿಆರ್ಪಿ ಟ್ಯಾಂಪರಿಂಗ್ ಮಾಡುತ್ತಿರುವ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಇದು ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.


Click it and Unblock the Notifications











