'ತಿಪ್ಪಜ್ಜಿ ಸರ್ಕಲ್'ನಲ್ಲಿ ವಾತ್ಸಾಯನ ರತಿ ಮನ್ಮಥ ಡಾನ್ಸ್
ಮದಕರಿ ನಾಯಕನ ನಾಡಾದ ಚಿತ್ರದುರ್ಗದಲ್ಲಿ ಬಾಳಿ ಬದುಕಿದ್ದ ದೇವದಾಸಿ ತಿಪ್ಪಜ್ಜಿಯ ಕಥೆ ಚಲನಚಿತ್ರರೂಪದಲ್ಲಿ ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆ ಚಿತ್ರದಲ್ಲಿ ನಟಿ ಪೂಜಾಗಾಂಧಿ ತಿಪ್ಪಜ್ಜಿಯ ಪಾತ್ರ ನಿರ್ವಹಿಸಿರುವುದು ಕೂಡ ಹೊಸ ವಿಷಯವೇನಲ್ಲ. ಆದರೆ ಈಗ ಹೇಳುತ್ತಿರುವುದು ಹೊಸ ವಿಷಯ.
ಈ ಚಿತ್ರದಲ್ಲಿನ ಹಾಡೊಂದಕ್ಕೆ ಮಾದಕ ನೃತ್ಯ ಮಾಡಲು ಉಕ್ರೇನ್ ಮೂಲಕ ಚೆಲುವೆಯೊಬ್ಬಳು ಬಂದಿರುವುದು ಫ್ರೆಶ್ ನ್ಯೂಸ್. ಕಳೆದ ವಾರ ರಾಕ್ ಲೈನ್ ಸ್ಟುಡಿಯೋದಲ್ಲಿ 'ತಿಪ್ಪಜ್ಜಿ ಸರ್ಕಲ್' ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯಿತು.
ಉಕ್ರೇನ್ ಮೂಲದವರಾದರೂ ಈಗ ಬಾಂಬೆಯಲ್ಲಿ ನೆಲೆಸಿರುವ ಆನಾ ಎಂಬ ಬೊಗಸೆ ಕಣ್ಗಳ ಚೆಲುವೆ ಜೊತೆ ಡಾ.ಸುರೇಶ್ ಶರ್ಮ ಹಾಡುತ್ತ ಹೆಜ್ಜೆ ಹಾಕುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ತುಂಡುಗೆಯಲ್ಲಿ ಆನಾ ಮಾದಕ ಹೆಜ್ಜೆ
ಛಾಯಾಗ್ರಾಹಕ ಪಿ.ಕೆ.ಹಚ್.ದಾಸ್ ಚಿತ್ರೀಕರಿಸಿಕೊಳ್ಳುತ್ತಿದ್ದ ಈ ಹಾಡಿಗೆ ನೃತ್ಯ ನಿರ್ದೇಶಕ ತ್ರಿಭುವನ್ ಸ್ಟೆಪ್ ಹೇಳಿಕೊಡುತ್ತಿದ್ದರು. ರಾಕ್ ಲೈನ್ ಸ್ಟುಡಿಯೋದಲ್ಲಿ ಒಂದು ಕೃತಕ ಕೊಳ ನಿರ್ಮಿಸಿ ಅದರಲ್ಲಿ ಗುಲಾಬಿ ಎಸಳುಗಳಿಂದ ತುಂಬಿದ ನೀರಿನ ನಡುವೆ ತುಂಡುಗೆಯಲ್ಲಿ ಮಾದಕವಾಗಿ ಹೆಜ್ಜೆ ಹಾಕಿದ 'ಆನಾ'ರ ದೇಹ ಸಿರಿಯನ್ನು ದಾಸ್ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ತಿಪ್ಪಜ್ಜಿ ಹರೆಯದಲ್ಲಿದ್ದಾಗ ನಡೆಯುವ ಕಥೆಯಿದು
ಪತ್ರಕರ್ತರೊಂದಿಗೆ ಮಾತು ಪ್ರಾರಂಭಿಸಿದ ನಿರ್ದೇಶಕ ಚಿಕ್ಕಣ್ಣ, ತಿಪ್ಪಜ್ಜಿ ಹರೆಯದಲ್ಲಿದ್ದಾಗ ನಡೆಯುವ ಕಥೆಯಿದು. ಆಕೆಯ ಸಹವಾಸ ಮಾಡಿದ್ದಕ್ಕೆ ಮನೆಯವರೆಲ್ಲ ಪ್ರತಿಭಟಿಸಿದಾಗ ಮನೆಯಲ್ಲಿ ಚಿಕ್ಕ ಯುದ್ಧವೇ ನಡೆಯುತ್ತದೆ. ಆ ಸಂದರ್ಭದಲ್ಲಿ ಮನೆ ಕೆಲಸದಾಕೆ ಹಿಂದೆ ನಮ್ಮ ಮಾಲೀಕರು ಹೇಗಿದ್ದರು ಅಂತ ಕನಸು ಕಾಣುತ್ತಾಳೆ. ಆಗ ಬರುವ ಡ್ರೀಮ್ ಸಾಂಗ್ ಇದು.

ವಾತ್ಸಾಯನನ ಸೂತ್ರ ನೆನಪಿಸುವ ಹಾಡು
ನಮ್ಮ ಸಾಹುಕಾರ ಎಷ್ಟೆಲ್ಲಾ ವೈಭವಗಳನ್ನು ಕಂಡಿದ್ದರು ಅಂತ ಕನಸು ಕಾಣುತ್ತಾಳೆ ಅದೇ ಈ ಹಾಡು. ಗೋಟೂರಿ ಸಾಹಿತ್ಯ ಬರೆದಿದ್ದಾರೆ ಎಂದು ಚಿತ್ರೀಕರಣದ ಸಂದರ್ಭವನ್ನು ವಿವರಿಸಿದರು. ನೃತ್ಯ ನಿರ್ದೇಶಕ ತ್ರಿಭುವನ್ ಮಾತನಾಡಿ ವಾತ್ಸಾಯನನ ಹಾಡನ್ನು ಮಾಡಬೇಕು ಎಂದಾಗ ಈ ಕಾನ್ಸೆಪ್ಟ್ ಯೋಚಿಸಿದೆ. ನಮ್ಮ ನಿರೀಕ್ಷೆಗಿಂತ ಉತ್ತಮವಾಗಿ ಈ ಹಾಡು ಮೂಡಿ ಬಂದಿದೆ ಎಂದರು.

ಈ ಹಾಡಿನ ಬಗ್ಗೆ ಆನಾ ಏನಂತಾಳೆ?
ಅಂದಿನ ಮುಖ್ಯ ಆಕರ್ಷಣೆ ಆನಾ ಮಾತನಾಡಿ, "ನನಗೆ ಬಾಲ್ಯದಿಂದಲೂ ನೃತ್ಯದ ಬಗ್ಗೆ ತುಂಬ ಆಸಕ್ತಿಯಿದೆ. ಹಾಗಾಗಿ ಅಭಿನಯದ ಬಗ್ಗೆ ಆಸಕ್ತಿಯಿಲ್ಲ. ನೃತ್ಯಗಾರ್ತಿಯಾಗಿಯೇ ಮುಂದುವರೆಯುತ್ತೇನೆ ಎಂದು ಹೇಳಿದರು. ಅಲ್ಲದೆ ನೃತ್ಯ ನಿರ್ದೇಶಕರು ಹಾಗೂ ನಾಯಕ ಡಾ.ಸುರೇಶ್ ಶರ್ಮ ಅವರ ಬಗ್ಗೆಯೂ ಮೆಚ್ಚಿ ಮಾತನಾಡಿದರು.

ಪೂಜಾಗಾಂಧಿ ನಿಜಕ್ಕೂ ಅದ್ಭುತ ನಟಿ
ಡಾ.ಶರ್ಮ ಮಾತನಾಡುತ್ತಾ, "ಚಿತ್ರ ನಮ್ಮೆಲ್ಲರ ನಿರೀಕ್ಷೆಗಿಂತ ಅದ್ದೂರಿಯಾಗಿ ಬರುತ್ತಿದೆ. ಪೂಜಾಗಾಂಧಿ ನಿಜಕ್ಕೂ ಅದ್ಭುತ ನಟಿ. ಅವರ ಅಭಿನಯದಲ್ಲಿ ಎಲ್ಲೂ ಕೃತಕತೆ ಕಾಣವುದಿಲ್ಲ. ಸಾಹುಕಾರ ತನ್ನ ನೆಮ್ಮದಿಗೋಸ್ಕರ ತಿಪ್ಪಕ್ಕನ ಸಹವಾಸ ಮಾಡಿದ್ದರೂ ಆಕೆ ಆತನನ್ನೇ ತನ್ನ ಯಜಮಾನ ಎಂದುಕೊಂಡಿರುತ್ತಾಳೆ ಎಂದು ಕಥೆಯ ಪ್ರಾಮುಖ್ಯತೆಯನ್ನು ಹೇಳಿಕೊಂಡರು.

ಚಿತ್ರದುರ್ಗದ ಕೇಂದ್ರ ಭಾಗದಲ್ಲಿರುವ ತಿಪ್ಪಜ್ಜಿ ಸರ್ಕಲ್
ಸಂಗೀತ ನಿರ್ದೇಶಕ ಭರಣಿ ಶ್ರೀ ಮಾತನಾಡಿ ಇದು ನನ್ನ 4ನೇ ಚಿತ್ರ. ಮೂಲತಃ ಕಾಸರಗೋಡಿನವನು 20 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದೇನೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಆರ್.ಜಿ.ಸಿದ್ದರಾಮಯ್ಯ ಹಾಜರಿದ್ದರು. ಈ ಚಿತ್ರದ ಮೂಲಕಥೆಯನ್ನು ಸಾಹಿತಿ ಬಿ.ಎಲ್.ವೇಣುರವರು ಬರೆದಿದ್ದಾರೆ. ಚಿತ್ರದುರ್ಗದ ಕೇಂದ್ರ ಭಾಗದಲ್ಲಿರುವ ಈ ವೃತ್ತಕ್ಕೆ ಬಸವೇಶ್ವರ ಸರ್ಕಲ್ ಅಂತ ನಾಮಕರಣ ಮಾಡಿದ್ದರೂ ಜನ ಮಾತ್ರ ಈಗಲೂ ತಿಪ್ಪಜ್ಜಿ ಸರ್ಕಲ್ ಎಂದು ಗುರುತಿಸುತ್ತಾರೆ.


Click it and Unblock the Notifications











