"ಸಂಜೆ ಕೆಂಪಾದಾಗ" ಚಲೆಗಯಿ ಚಾಂದನಿ ಆಗಯಿ
"ಸಂಜೆ ತಂಪಾದಾಗ ಕೆನ್ನೆ ಕೆಂಪಾದಾಗ ಅತ್ತಿತ್ತ ಕತ್ತಲಾದಾಗ ಚಲೆಗಯಿ ಚಾಂದಿನಿ..." ಎಂದು 'ಎ' ಚಿತ್ರದಲ್ಲಿ ಅಭಿನಯಿಸಿದ್ದ ಚಾಂದನಿ ಮತ್ತೆ ಗಾಂಧಿನಗರಕ್ಕೆ ಹಿಂತಿರುಗಿದ್ದಾರೆ. 'ಸೈಕೋ' ಖ್ಯಾತಿಯ ಗುರುದತ್ ಅವರು ಚಾಂದಿನಿಯನ್ನು ಮತ್ತೆ ಕನ್ನಡದಲ್ಲಿ ಬಣ್ಣಹಚ್ಚುವಂತೆ ಮಾಡಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ 'ಖೈದಿ' ಎಂಬ ಚಿತ್ರಕ್ಕೆ ಚಾಂದಿನಿ ಅವರನ್ನು ಆಯ್ಕೆ ಮಾಡಿದ್ದಾರೆ. ಸುದೀರ್ಘ ಸಮಯದ ಬಳಿಕ ಕ್ಯಾಮೆರಾ ಎದುರಿಸುತ್ತಿದ್ದರೂ, ಜನ ಮಾತ್ರ ಚಾಂದಿನಿ ಅವರನ್ನು ಮರೆತಿಲ್ಲ. "ಕನ್ನಡ ಚಿತ್ರರಸಿಕರು ತಮ್ಮ ಪಾತ್ರಗಳನ್ನು ಇನ್ನೂ ಮರೆತಿಲ್ಲ. ನನ್ನನ್ನು ಆರಾಧಿಸುವ ಅಭಿಮಾನಿಗಳು ಇನ್ನೂ ಇದ್ದಾರೆ" ಎನ್ನುತ್ತಾರೆ ಚಾಂದಿನಿ.
ಮತ್ತೆ ಅಭಿನಯಿಸಬೇಕು ಎಂಬ ಅದಮ್ಯ ಉತ್ಸಾಹವೇ ತಾನು ಮತ್ತೆ ಬಣ್ಣಹಚ್ಚಲು ಕಾರಣ ಎನ್ನಲು ಅವರು ಮರೆಯುವುದಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಅವರ 'ಎ' ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಚಾಂದಿನಿ ಬಳಿಕ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು.ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಶಿವಮಣಿ ಜೊತೆ ತೆರೆಹಂಚಿಕೊಂಡರು. 'ಸೈಕೋ' ಚಿತ್ರದಲ್ಲಿ ಅಭಿನಯಿಸಿದ್ದ ಧನುಷ್ ಅವರು ಖೈದಿ ಚಿತ್ರದ ನಾಯಕ ನಟ.
ಈ ಚಿತ್ರದ ಮುಹೂರ್ತ ಮೇ 9ರಂದು ನಡೆಯಲಿದ್ದು ಮೇ 4ರಂದೇ ಚಾಂದಿನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಗುರುದತ್ ಅವರು, "ಸೈಕೋ ಚಿತ್ರದ ನಿರ್ಮಾಪಕರಲ್ಲಿ ನಾನೂ ಒಬ್ಬ. ಇದೀಗ 'ಖೈದಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದೇನೆ. ಈ ಚಿತ್ರದಲ್ಲಿ ಹಲವಾರು ಬಹುಮುಖಿ ಪ್ರತಿಭೆಗಳಿದ್ದಾರೆ. ಚಿತ್ರರಸಿಕರಿಗೆ ತಮ್ಮ 'ಖೈದಿ' ಖಂಡಿತ ನಿರಾಸೆಪಡಿಸಲ್ಲ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications












