ಒಂದೇ ಚಿತ್ರದಲ್ಲಿ ಉಪೇಂದ್ರ, ಶಿವಣ್ಣ ಕಾದುನೋಡಿ
ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಭಾರಿ ಬಜೆಟ್ ಐತಿಹಾಸಿಕ 'ಯುಗೇ ಯುಗೇ' ಚಿತ್ರವನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಈ ಚಿತ್ರಕ್ಕೆ ಮೊದಲು ಅವರು ಆಯ್ಕೆ ಮಾಡಿಕೊಂಡಿದ್ದದ್ದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು.
ಆದರೆ ಚಿತ್ರ ಆರಂಭವಾಗುವುದಕ್ಕೂ ಮುನ್ನವೇ ವಿಷ್ಣುವರ್ಧನ್ ಅವರು ಕಾಲವಶರಾದ ಹಿನ್ನೆಲೆಯಲ್ಲಿ ರಾಕ್ ಲೈನ್ ಚಿತ್ರವನ್ನು ಕೈಬಿಟ್ಟಿದ್ದರು. ಈಗ ಮತ್ತೊಮ್ಮೆ ಅದೇ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ವಿಷ್ಣುವರ್ಧನ್ ಪೋಷಿಸಬೇಕಾಗಿದ್ದ ಪಾತ್ರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಕರೆತರಲು ರಾಕ್ ಲೈನ್ ನಿರ್ಧರಿಸಿದ್ದಾರೆ.
ಇದೊಂದು ಐತಿಹಾಸಿಕ ಚಿತ್ರವಾಗಿದ್ದು ಎಲ್ಲಾ ಅಂದುಕೊಂಡಂತೆ ನಡೆದರೆ ಉಪ್ಪಿ ಜೊತೆ ಶಿವಣ್ಣ ಅಭಿನಯವನ್ನು ಮತ್ತೊಮ್ಮೆ ಅವರ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಈ ಹಿಂದೆ 'ಪ್ರೀತ್ಸೆ' ಹಾಗೂ 'ಲವ ಕುಶ' ಚಿತ್ರಗಳಲ್ಲಿ ಇಬ್ಬರೂ ಅಭಿನಯಿಸಿದ್ದಾರೆ. ಈಗ ಮತ್ತೊಮ್ಮೆ ಇವರಿಬ್ಬರೂ ಒಂದಾಗುತ್ತಿರುವುದು ಅಭಿಮಾನಿಗಳ ಪಾಲಿಗೆ ಸ್ವಾಗತಾರ್ಹ ಬೆಳವಣಿಗೆ.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವವರು ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ. ಒಟ್ಟು 16 ಜನ ಚಿತ್ರಕತೆ ರಚಿಸಿದ್ದು ಇದಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ ಎಸ್ಎಸ್ ರಾಜಮೌಳಿ ಅವರ ತಂದೆ ಎಸ್ ವಿಜಯೇಂದ್ರ ಪ್ರಸಾದ್. ಸದ್ಯಕ್ಕೆ ಅವರು ಕ್ಲೈಮ್ಯಾಕ್ಸ್ ಸನ್ನಿವೇಶದ ರಚನೆಯಲ್ಲಿ ಮಗ್ನರಾಗಿದ್ದಾರೆ. ಈ ಹಿಂದೆ ವಿಜಯೇಂದ್ರ ಅವರು ವಿಷ್ಣುವರ್ಧನ್ ಅವರ ಹಿಟ್ ಚಿತ್ರ 'ಅಪ್ಪಾಜಿ'ಗೆ ಸ್ಕ್ರಿಪ್ಟ್ ಬರೆದಿದ್ದರು. (ಏಜೆನ್ಸೀಸ್)


Click it and Unblock the Notifications











