ತಮ್ಮ ದೇವರು ಕಾಶೀನಾಥ್ ಬಗ್ಗೆ ಓಪನ್ ಆಗಿ ಮಾತನಾಡಿದ ಉಪೇಂದ್ರ
Recommended Video

ತಂದೆ, ತಾಯಿ ರೀತಿಯಲ್ಲಿ ಗುರುವಿಗೂ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಮಹತ್ವ ಇದೆ. 'ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:' ಎನ್ನುವ ಹಾಗೆ ಒಬ್ಬ ಸಾಧಕನಿಗೆ ಅವನ ಗುರಿ ಮುಟ್ಟಲು ಗುರು ತುಂಬ ಮುಖ್ಯ.
ನಟ ಉಪೇಂದ್ರ ಅವರಿಗೆ ಚಿತ್ರರಂಗದ ಗುರು ಆಗಿದ್ದವರು ನಟ, ನಿರ್ದೇಶಕ ಕಾಶೀನಾಥ್. ರಿಯಲ್ ಸ್ಟಾರ್ ಉಪ್ಪಿಗೆ ಮೊದಲು ಸಿನಿಮಾ ಪ್ರಪಂಚದ ದರ್ಶನ ಮಾಡಿಸಿದ್ದ ಕಾಶೀನಾಥ್ ಇಂದು ಅವರೊಂದಿಗೆ ಇಲ್ಲ. ಗುರುವನ್ನು ಕಳೆದುಕೊಂಡಿರುವ ಉಪೇಂದ್ರ ಜೊತೆ ಸದ್ಯ ಇರುವುದು ಅವರ ನೆನಪುಗಳು ಮಾತ್ರ. ಕಾಶೀನಾಥ್ ಸಾವಿನ ಬಳಿಕ ಹಿಂದೆ ಅವರ ಜೊತೆಗೆ ಕಳೆದ ದಿನಗಳ ಬಗ್ಗೆ, ಕಾಶೀನಾಥ್ ಅವರ ಸಿನಿಮಾ ಮೇಕಿಂಗ್ ಬಗ್ಗೆ ಉಪ್ಪಿ ಮನಸು ಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನವೊದರಲ್ಲಿ ಮಾತನಾಡಿದ ಉಪೇಂದ್ರ ''ನಂದು ಕಾಶೀ ಸರ್ ಅವರದ್ದು 32 ವರ್ಷಗಳ ಸಂಬಂಧ. ಅವರು ನನ್ನ ಪಾಲಿನ ದೇವರು. ಗುರು ಸಾಕ್ಷತ್ ಪರಬ್ರಹ್ಮ ಎನ್ನುವುದು ನನ್ನ ಜೀವನದಲ್ಲಿ ಸತ್ಯ ಆಗಿದೆ.'' ಎಂದು ಕಾಶೀನಾಥ್ ಅವರನ್ನು ನೆನಪು ಮಾಡಿಕೊಂಡಿದ್ದು ಹೀಗೆ....

ಅವರದ್ದೇ ಒಂದು ಪಾಲಿಸಿ ಇತ್ತು
''ಅವರು ಬಹಳ ವಿಭಿನ್ನ. ಅವರು ಬೇರೆಯವರಿಂದ ಪ್ರಭಾವ ಪಡೆಯುತ್ತಿರಲಿಲ್ಲ. ಅವರದ್ದೇ ಒಂದು ಪಾಲಿಸಿ ಇತ್ತು. ತುಂಬ ಫ್ರಾಂಕ್ ಆಗಿ ಮಾತನಾಡುತ್ತಿದ್ದರು. ಸಿನಿಮಾ ಮಾಡುವಾಗ ಎಲ್ಲರಿಗೂ 'ನೀವು ಎಷ್ಟು ಇದರಲ್ಲಿ ತೊಡಗಿಸಿಕೊಳ್ಳುತ್ತಿರೋ ಅಷ್ಟು ಕೆಲಸ ಕೊಡುತ್ತೇನೆ. ನೀವು ಕೆಲಸ ಮಾಡದೇ ಇದ್ದರೂ ನಾನು ಕೇಳುವುದಿಲ್ಲ' ಎಂದು ಮೊದಲೇ ಹೇಳುತ್ತಿದ್ದರು.''

ಹೆಚ್ಚು ಒಂಟಿಯಾಗಿ ಇರುತ್ತಿದ್ದರು
''ಅವರು ಹೆಚ್ಚು ಒಂಟಿಯಾಗಿ ಇರುತ್ತಿದ್ದರು. ಒಬ್ಬರೇ ಕೂತು ಏನೇನೋ ಬರೆಯುತ್ತಿದ್ದರು. ನೀವು ಮತ್ತೆ ಸಿನಿಮಾಗಳನ್ನು ನಿರ್ದೇಶನ ಮಾಡಿ ಸರ್.. ಎಂದಾಗ ಜಾಸ್ತಿ ಏನು ಹೇಳುತ್ತಿರಲಿಲ್ಲ. ಮತ್ತೆ ಸಿನಿಮಾ ಮಾಡುವುದು ನನಗೆ ಅನಿಸಬೇಕು ಎನ್ನುತ್ತಿದ್ದರು. ಯಾವಾಗಲೂ ಅವರು ಅವರ ಲೋಕದಲ್ಲಿಯೇ ಇರುತ್ತಿದ್ದರು. ತುಂಬ ಟ್ಯಾಲೆಂಟೆಡ್ ವ್ಯಕ್ತಿ ಅವರು.''

ಸ್ಕ್ರಿಪ್ಟ್ ಅನ್ನು ತುಂಬ ನಂಬುತ್ತಿದ್ದರು
''ಒಂದು ಡೈಲಾಗ್ ಗೆ ಕೂಡ 10 ಬಾರಿ ಯೋಜನೆ ಮಾಡುತ್ತಿದ್ದರು. ಸಿನಿಮಾ ಹೀಗೆಯೇ ಬರಬೇಕು ಅಂತ ಅವರಿಗೆ ಕನಸು ಇತ್ತು. ಸ್ಕ್ರಿಪ್ಟ್ ಅನ್ನು ತುಂಬ ನಂಬುತ್ತಿದ್ದರು. ಅದೇ ರೀತಿ ಕೆಲಸ ಮಾಡುತ್ತಿದ್ದರು. ಅವರೇ ಹೀರೋ, ಡೈರೆಕ್ಟರ್, ರೈಟರ್ ಆಗಿ ಪ್ರೊಡ್ಯೂಸ್ ಸಹ ಮಾಡುತ್ತಿದ್ದರು. ಎಲ್ಲದರಲ್ಲಿಯೂ ತುಂಬ ಫರ್ಫೆಕ್ಟ್ ಆಗಿದ್ದರು.''

ಸ್ಕ್ರಿಪ್ಟ್ ಚರ್ಚೆ ಮಾಡುವಾಗ
''ಕಾಶೀ ಸರ್ ಅವರ ತಂಡವನ್ನು ಜಾಗರುಕತೆಯಿಂದ ಆಯ್ಕೆ ಮಾಡುತ್ತಿದ್ದರು. ಸ್ಕ್ರಿಪ್ಟ್ ಮಾತುಕತೆ ಟೈಂ ನಲ್ಲಿ ಇಬ್ಬರು ಅಥವಾ ಮೂರು ಜನರನ್ನು ಮಾತ್ರ ತಮ್ಮ ಜೊತೆಗೆ ಇಟ್ಟುಕೊಳ್ಳುತ್ತಿದ್ದರು. ನಾವು ಬೇರೆ ಯಾರನಾದರೂ ಜೊತೆಗೆ ಕರೆದುಕೊಂಡು ಹೋದರೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಎಲ್ಲ ಡೈರೆಕ್ಟ್ ಆಗಿ ಹೇಳುತ್ತಿದ್ದರು.''

ನಾನು ಮೊದಲು ಭೇಟಿ ಆದಾಗ
''ನಾನು ಮೊದಲು ಭೇಟಿ ಆದಾಗ ಅವರು ತುಂಬ ಬಿಜಿ ಇದ್ದರು. ನನ್ನ ಸಂಬಂದಿಯೊಬ್ಬರಿಂದ ಅವರನ್ನು ಮೀಟ್ ಆದೆ. ಆಗ ನಾನು ಬರೆದ ಕಥೆ, ಕವನ, ಡೈಲಾಗ್ ಎಲ್ಲವನ್ನು ತೋರಿಸಿದೆ, ಕ್ಯಾಸೆಟ್ ನಲ್ಲಿ ಒಂದು ಡ್ರಾಮಾ ರೆಕಾರ್ಡ್ ಮಾಡಿ ಕೊಟ್ಟೆ. ಅದರ ಮರು ದಿನವೇ ನನ್ನ ಜೊತೆ ಕೆಲಸ ಮಾಡು ಅಂದರು.''

ನನಗೆ ಡೈರೆಕ್ಷನ್ ಆಫರ್ ಬಂತು
''ಅವರು ಸ್ಟಾರ್ ಆದ ಮೇಲೆ ನನಗೆ ಹೆಚ್ಚು ಕೆಲಸ ಇರಲಿಲ್ಲ. ಆಗ ಶಿವರಾಮ್ ಅಂತ ಒಬ್ಬರು ಕಾಶೀ ಸರ್ ಬಳಿ ಕೇಳಿ ನನ್ನನ್ನು ಶಂಕರ್ ನಾಗ್ ಅವರ ಚಿತ್ರಕ್ಕೆ ಡೈಲಾಗ್ ಬರೆಯುವುದಕ್ಕೆ ಬಿಟ್ಟರು. ಆಮೇಲೆ 'ಅಜಗಜಾಂತರ' ಚಿತ್ರಕ್ಕೆ ಮತ್ತೆ ಕಾಶೀ ಸರ್ ಕರೆದರು. ನಂತರ ನನಗೆ ಡೈರೆಕ್ಷನ್ ಆಫರ್ ಬಂದು ನಾನು ಒಬ್ಬನ್ನೇ ಸಿನಿಮಾ ಶುರು ಮಾಡಿದೆ''

ಜೊತೆಗೆ ಸಿನಿಮಾ ಮಾಡುವ ಆಸೆ ಇತ್ತು
''ನನಗೆ ಅವರು ನಿರ್ದೇಶನ ಅಥವಾ ಅವರಿಗೆ ನಾನು ನಿರ್ದೇಶನ ಮಾಡುವ ಆಸೆ ತುಂಬ ಇತ್ತು... ನಾನು ನೀನು ಮಾಡುವಾಗ ಎಂಬ ನಿರೀಕ್ಷೆ ಇರುತ್ತದೆ ಒಂದು ಒಳ್ಳೆಯ ಸ್ಕ್ರಿಪ್ಟ್ ಮಾಡಿ ಸಿನಿಮಾ ಮಾಡೋಣ ಅಂತ ಹೇಳಿದ್ದರು. ಆದರೆ ಒಂದು ನಾನು ಬಿಜಿ ಆದರೆ, ಅವರು ಕೂಡ ನಟನೆ ಮಾಡುತ್ತಿದ್ದರು. ನಾನು ಅವರಿಗಾಗಿ ತುಂಬ ಕಾಮಿಡಿ ಸ್ಕ್ರಿಪ್ಟ್ ಮಾಡಿಕೊಂಡಿದೆ. ಆದರೆ ಯಾವುದು ಆಗಲೇ ಇಲ್ಲ.''

ಆತುರ ಮಾಡುತ್ತಿರಲಿಲ್ಲ... ತಾಳ್ಮೆ ಹೆಚ್ಚಿತ್ತು...
''ಅವರು ಆತುರದಿಂದ ಏನನ್ನು ಮಾಡುತ್ತಿರಲಿಲ್ಲ. ತಾಳ್ಮೆ ಹೆಚ್ಚಿತ್ತು. ಯಾವಾಗಲೂ ಅವರು ಬದಲಾಗಲಿಲ್ಲ. ನನ್ನ ಇತ್ತೀಚಿನ ಐದಾರೂ ಚಿತ್ರಗಳ ಕೆಲವು ಪಾತ್ರಗಳಿಗೆ ಅವರನ್ನು ಕೇಳಿದೆ. ಆದರೆ ನಾನು ನೀನು ಇಬ್ಬರೇ ಒಟ್ಟಿಗೆ ಸಿನಿಮಾ ಮಾಡಬೇಕು. ನಮ್ಮಿಬ್ಬರ ಸಿನಿಮಾ ಬೇರೆ ರೀತಿ ಇರಬೇಕು ಅಂತ ಹೇಳುತ್ತಿದ್ದರು.''

ಎಲ್ಲಿಯೂ 'ನಾನು ಉಪೇಂದ್ರಗೆ ಬ್ರೇಕ್ ಕೊಟ್ಟೆ' ಎಂದು ಹೇಳಿಲ್ಲ
''ಅವರು ಎಂದಿಗೂ ನಾನು ಉಪೇಂದ್ರಗೆ ಬ್ರೇಕ್ ಕೊಟ್ಟೆ ಎಂದು ಹೇಳಿಕೊಂಡಿಲ್ಲ. ಅವರದ್ದು ದೊಡ್ಡ ವ್ಯಕ್ತಿತ್ವ. ಅವರಿಗೆ ಕಾಯಿಲೆ ಇತ್ತು ಅಂತ ನನಗೆ ಗೊತ್ತಿರಲಿಲ್ಲ. ಅವರು ಯಾರ ಬಳಿ ಏನು ಹೇಳಿರಲಿಲ್ಲ. ಇತ್ತೀಚಿನ ಸಿನಿಮಾ ಶೂಟಿಂಗ್ ನಲ್ಲಿ ಕೂಡ ತುಂಬ ಉತ್ಸಾಹದಿಂದ ಇರುತ್ತಿದ್ದರಂತೆ. ನಾನು ಲಾಸ್ಟ್ ಟೈಂ ಭೇಟಿ ಆದಾಗ ಚೆನ್ನಾಗಿ ಮಾತನಾಡಿದ್ದರು.''

ಎಷ್ಟೊ ಜನರಿಗೆ ಅವರು ಸ್ಪೂರ್ತಿ
''ಕನ್ನಡ ಚಿತ್ರರಂಗ ಅವರನ್ನು ಎಂದಿಗೂ ಮರೆಯುವುದಿಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಅವರಿಗೆ ಒಂದು ವಿಶೇಷ ಸ್ಥಾನವಿದೆ. ತುಂಬ ಜನ ಹೀರೋಗಳು ಡೈರೆಕ್ಟರ್ ಗಳು ಚಿತ್ರರಂಗಕ್ಕೆ ಬರುತ್ತಾರೆ ಹೋಗುತ್ತಾರೆ. ಆದರೆ ಅವರೂ ಎಷ್ಟು ಸಿನಿಮಾ ಮಾಡುವವರಿಗೆ ಸ್ಪೂರ್ತಿ.''


Click it and Unblock the Notifications











