ಜನಾರ್ಧನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಒಂದಾಗಲಿದೆ 'ರಣಧೀರ' ಜೋಡಿ
ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಮೊದಲ ಸಿನಿಮಾದ ಟೀಸರ್ ಬಿಡುಗಡೆ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ನಟಿ ಜೆನಿಲಿಯಾ ಡಿಸೋಜಾ, ಶ್ರೀಲೀಲಾ, ನಟ ರವಿಚಂದ್ರನ್ ಇನ್ನೂ ಹಲವರು ಭಾಗವಹಿಸಿದ್ದರು.
ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಸಿನಿಮಾಕ್ಕೆ ಬಹಳ ದೊಡ್ಡ ತಾಂತ್ರಿಕ ವರ್ಗವನ್ನು ಒಟ್ಟು ಮಾಡಲಾಗಿದೆ. 'ಬಾಹುಬಲಿ' ಸಿನಿಮಾದ ಕ್ಯಾಮೆರಾಮನ್ ಸೆಂಥಿಲ್, ಜನಪ್ರಿಯ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಇನ್ನೂ ಹಲವರು ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿದ್ದಾರೆ. ನಟಿ ಜೆನಿಲಿಯಾ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ 'ರಣಧೀರ' ಜೋಡಿ ಈ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದೆ. ಹೌದು, ನಟ ರವಿಚಂದ್ರನ್ ಹಾಗೂ ಖುಷ್ಬು ಕಿರೀಟಿಯ ಈ ಸಿನಿಮಾ ಮೂಲಕ ಒಟ್ಟಿಗೆ ನಟಿಸುತ್ತಿದ್ದಾರೆ.

ಮತ್ತೆ ಒಂದಾಗುತ್ತಿರುವ ಜೋಡಿ
'ರಣಧೀರ', 'ಅಂಜದ ಗಂಡು', 'ಯುಗ ಪುರುಷ' ಸಿನಿಮಾಗಳಲ್ಲಿ ರವಿಚಂದ್ರನ್ ಹಾಗೂ ಖುಷ್ಬು ಒಟ್ಟಿಗೆ ನಟಿಸಿದ್ದರು. ಈ ಜೋಡಿ ಭಾರಿ ಜನಪ್ರಿಯತೆಗಳಿಸಿತ್ತು. 'ಯುಗ ಪುರುಷ' ಸಿನಿಮಾದ ಬಳಿಕ ಈ ಜೋಡಿ ನಾಯಕ-ನಾಯಕಿಯಾಗಿ ನಟಿಸಿದ್ದಿಲ್ಲ. ಇದೀಗ ಕಿರೀಟಿಯ ಹೊಸ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ಖುಷ್ಬು ಪತಿ-ಪತ್ನಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಳ್ಳೆಯ ಪ್ಯಾಕೇಜ್ ಈ ಸಿನಿಮಾಕ್ಕಿದೆ: ರವಿಚಂದ್ರನ್
ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರವಿಚಂದ್ರನ್, ಸಿನಿಮಾಕ್ಕೆ ಬಹಳ ಒಳ್ಳೆಯ ಪ್ಯಾಕೇಜ್ ದೊರೆತಿದೆ. ಒಳ್ಳೆಯ ನಿರ್ಮಾಪಕರು, 'ಬಾಹುಬಲಿ' ಕ್ಯಾಮೆರಾಮನ್ ಸೆಂಥಿಲ್, ದೇವಿಶ್ರೀ ಪ್ರಸಾದ್ ಸಂಗೀತ, ಶ್ರೀಲೀಲಾ ಅಂಥಹಾ ಸುಂದರ ನಟಿ, ಜೆನಿಲಿಯಾ ಇದ್ದಾರೆ ನಾನು ಇದ್ದೀನಿ ಇದಕ್ಕಿಂತಲೂ ಒಳ್ಳೆಯ ಪ್ಯಾಕೇಜ್ ದೊರಕಲಾರದು. ಒಬ್ಬ ನಟನಿಗೆ ಲಾಂಚ್ ಆಗಲು ಇದಕ್ಕಿಂತಲೂ ಒಳ್ಳೆಯ ಪ್ಯಾಕೇಜ್ ಇನ್ನೇನು ಬೇಕು ಎಂದಿದ್ದರು. ಆದರೆ ಈ ಸಿನಿಮಾದಲ್ಲಿ ತಮ್ಮೊಂದಿಗೆ ಖುಷ್ಬು ಸಹ ನಟಿಸುತ್ತಿದ್ದಾರೆ ಎಂಬ ವಿಷಯವನ್ನು ರವಿಚಂದ್ರನ್ ಬಚ್ಚಿಟ್ಟಿದ್ದರು. ಅದೀಗ ಬಹಿರಂಗಗೊಂಡಿದೆ.

ಕನ್ನಡದಲ್ಲಿ ನಟಿಸಿದ್ದ ಖುಷ್ಬು
ನಟಿ ಖುಷ್ಬು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಜೊತೆ ಖುಷ್ಬು ನಟಿಸಿದ ಎಲ್ಲ ಸಿನಿಮಾಗಳು ಸೂಪರ್ ಹಿಟ್. ಆದಾದ ಬಳಿಕ ಅಂಬರೀಶ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಅವರೊಟ್ಟಿಗೂ ಖುಷ್ಬು ನಟಿಸಿದ್ದಾರೆ. 90ರ ದಶಕದ ಅಂತ್ಯದ ವರೆಗೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖುಷ್ಬು ನಂತರದ ವರ್ಷಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರಾದರು. 2005 ರಲ್ಲಿ ಬಿಡುಗಡೆ ಆದ 'ಮ್ಯಾಜಿಕ್ ಅಜ್ಜಿ' ಖುಷ್ಬು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ. 2010 ರಲ್ಲಿ ಬಿಡುಗಡೆ ಆದ 'ಜನನಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಷ್ಟೆ ನಟಿಸಿದ್ದಾರೆ.

14 ವರ್ಷಗಳ ಬಳಿಕ ಕನ್ನಡಕ್ಕೆ ಜೆನಿಲಿಯಾ
ರವಿಚಂದ್ರನ್-ಖುಷ್ಬು ಒಟ್ಟಿಗೆ ನಟಿಸುತ್ತಿರುವ ಕಿರೀಟಿಯ ಹೊಸ ಸಿನಿಮಾದಲ್ಲಿ ನಟಿ ಜೆನಿಲಿಯಾ ಸಹ ನಟಿಸುತ್ತಿದ್ದಾರೆ. 14 ವರ್ಷಗಳ ನಂತರ ಜೆನಿಲಿಯಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆನಿಲಿಯಾ, ''ಇದು ಬಹಳ ವಿಶೇಷವಾದ ಸಿನಿಮಾ, ಈ ಸಿನಿಮಾದ ಬಗ್ಗೆ ನನಗೆ ಬಹಳ ಉತ್ಸುಕತೆ ಇದೆ. ನಿಮ್ಮ ಚಿತ್ರರಂಗ ಪ್ರವೇಶಕ್ಕೆ ಶುಭಾಶಯ. ನಿಮಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರು ಸಿಕ್ಕಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ. ನನಗೆ ಇದು ಬಹಳ ವಿಶೇಷವಾದ ಸಮಯ ಏಕೆಂದರೆ ನಾನೂ ಸಹ ನಟನೆಗೆ ಮರಳುತ್ತಿದ್ದೇನೆ. ನಾನು ನಿಮ್ಮೊಂದಿಗೆ ನಟನೆಗೆ ಮರಳುತ್ತಿದ್ದೇನೆ. ಹಾಗಾಗಿ ನಾನು ಸಹ ನಿಮ್ಮಂತೆಯೇ ಹೊಸ ನಟಿ, ಇಬ್ಬರೂ ಒಟ್ಟಿಗೆ ಚೆನ್ನಾಗಿ ನಟಿಸೋಣ'' ಎಂದರು.


Click it and Unblock the Notifications











