ಕನ್ನಡ ಚಿತ್ರಗಳ ಸಬ್ಸಿಡಿಗೆ ಸಂಚಕಾರ, ವಾಟಾಳ್ ಹರತಾಳ
ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ನೀಡಬೇಕೆ ನೀಡಬಾರದೆ ಎಂಬುದು ಈಗ ಸ್ಯಾಂಡಲ್ ವುಡ್ ನಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ. ಪ್ರೇಕ್ಷಕರು ನೋಡದ ಚಿತ್ರಗಳಿಗೆ ಸಬ್ಸಿಡಿ ಏಕೆ ಕೊಡಬೇಕು. ಕನ್ನಡ ಚಲನಚಿತ್ರಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ನಿಲ್ಲಿಸಬೇಕೆಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ನಾಗೇಂದ್ರಸ್ವಾಮಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದನ್ನು ಬಲವಾಗಿ ಖಂಡಿಸಿರುವ ಕನ್ನಡ ಚಳವಳಿ ವಾಟಾಲ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕಿಡಿಕಿಡಿಯಾಗಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಸಬ್ಸಿಡಿ ನಿಡುತ್ತಿರುವುದು ಪ್ರೇಕ್ಷಕರ ಹಿತಕಾಯಲು ಅಲ್ಲ, ಕನ್ನಡ ಚಿತ್ರರಂಗದ ಉಳಿವಿಗೆ ಎಂದು ಗುಡುಗಿದ್ದಾರೆ ವಾಟಾಳ್.
ನಾಗೇಂದ್ರಸ್ವಾಮಿ ಅವರು ನೀಡಿರುವ ವರದಿಯನ್ನು ಜಾರಿಗೆ ತಂದರೆ ಮೊದಲೇ ಸೊರಗುತ್ತಿರುವ ಕನ್ನಡ ಚಿತ್ರರಂಗ ಅಧಃಪತನದತ್ತ ಸಾಗುತ್ತದೆ. ಇದನ್ನು ನಾಗೇಂದ್ರಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟದಲ್ಲಿದ್ದ ಚಿತ್ರರಂಗವನ್ನು ಮುಖ್ಯವಾಹಿನಿಗೆ ತರಲು ಸಬ್ಸಿಡಿ ನೀಡುವ ಪರಿಪಾಠ ಆರಂಭವಾಗಿದ್ದನ್ನು ವಾಟಾಳ್ ನೆನಪಿಸಿಕೊಂಡರು.

ಕನ್ನಡ ಚಿತ್ರಗಳಿಗೆ ಸಬ್ಸಿಡಿ ನಿಲ್ಲಿಸಿದರೆ ಕನ್ನಡ ಚಿತ್ರೋದ್ಯಮ ಹಳ್ಳಹಿಡಿಯುತ್ತದೆ. ನಾಗೇಂದ್ರಸ್ವಾಮಿ ಅವರ ವರದಿ ಖಂಡನೀಯ. ಈ ವರದಿಯನ್ನು ಸರ್ಕಾರ ಕಸದಬುಟ್ಟಿಗೆ ಹಾಕಬೇಕು. ಕನ್ನಡ ಚಿತ್ರರಂಗ ಮೈಸೂರಿನಲ್ಲಿದ್ದಾಗ ನಾವು ಹೋರಾಟ ಮಾಡಿ ಸಬ್ಸಿಡಿ ನೆರವನ್ನು ತಂದೆವು. ಆಗ ರು.50 ಸಾವಿರ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ರು.10 ಲಕ್ಷ ನೀಡಲಾಗುತ್ತಿದೆ.
ಕನ್ನಡ ಚಿತ್ರರಂಗ ಬೆಳೆಯಬೇಕಾದರೆ ಸಬ್ಸಿಡಿ ನೀಡುವುದನ್ನು ಮುಂದುವರಿಸಬೇಕು. ಒಂದು ವೇಳೆ ಅದನ್ನು ನಿಲ್ಲಿಸಲು ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಾಟಾಳ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸಬ್ಸಿಡಿ ನೀಡುವುದರಿಂದ ಪ್ರೋತ್ಸಾಹ, ಉತ್ತೇಜನ ನೀಡಿದಂತಾಗುತ್ತದೆ.
ಸೆನ್ಸಾರ್ ಮಂಡಳಿಯವರು ಮನಬಂದಂತೆ ಹೇಳಿಕೆ ನೀಡುವುದನ್ನು ಕೈಬಿಡಬೇಕು. ಈ ರೀತಿಯ ವರದಿಗಳನ್ನು ನೀಡುವುದು ಸಮಂಜಸವಲ್ಲ. ಸರ್ಕಾರ ಇದನ್ನು ಪರಿಗಣಿಸಬಾರದು. ಮೊದಲೇ ನಿರ್ಲಕ್ಷ್ಯಕ್ಕೊಳಗಾಗಿರುವ ಕನ್ನಡ ಚಿತ್ರರಂಗ ಇನ್ನಷ್ಟು ಬಲಗುಂದಲಿದೆ ಎಂದಿದ್ದಾರೆ ವಾಟಾಳ್. (ಏಜೆನ್ಸೀಸ್)


Click it and Unblock the Notifications











