ವೀರಪ್ಪನ್ ಅಟ್ಟಹಾಸ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು

ಸಾಕಷ್ಟು ವಾದ ವಿವಾದ,ಚರ್ಚೆಗೆ ಕಾರಣವಾಗಿರುವ ಅಟ್ಟಹಾಸ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಎಎಂಆರ್ ರಮೇಶ್ ತಿಳಿಸಿದ್ದಾರೆ. ಬಾಲಿವುಡ್ ನಟ ಸುರೇಶ್ ಒಬೆರಾಯ್ ಅವರು ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಪೋಷಿಸಿದ್ದಾರೆ. ಸುಲಕ್ಷಣಾ ಅವರು ಪಾರ್ವತಮ್ಮ ರಾಜ್ ಕುಮಾರ್ ಆಗಿ ಕಾಣಿಸಲಿದ್ದಾರೆ.
ಉಳಿದಂತೆ ನರಹಂತಕ ವೀರಪ್ಪನ್ ಪಾತ್ರದಲ್ಲಿ ಕಿಶೋರ್ ಮೀಸೆ ತಿರುವಿದ್ದಾರೆ. ರಾಜ್ ಅವರೊಂದಿಗೆ ಅಪಹರಣಕ್ಕೆ ಒಳಗಾಗಿದ್ದ ನಾಗಪ್ಪ ಮರಡಗಿ ಅವರೂ ಚಿತ್ರದಲ್ಲಿ ಸ್ವತಃ ಅಭಿನಯಿಸಿರುವುದು ವಿಶೇಷ. ಉಳಿದಂತೆ ಅರ್ಜುನ್ ಸರ್ಜಾ, ಜಯಚಿತ್ರಾ, ವಿಜಯಲಕ್ಷ್ಮಿ, ರವಿಕಾಳೆ ಮುಂತಾದವರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಹಾಗೂ ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ. ಅಟ್ಟಹಾಸ ಚಿತ್ರಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ನಮ್ಮ ಅನುಮತಿ ಪಡೆಯದೆ ಚಿತ್ರವನ್ನು ಎ.ಎಂ.ಆರ್ ರಮೇಶ್ ತೆರೆಗೆ ತರುತ್ತಿದ್ದಾರೆ ಎಂದು 'ನಕ್ಕೀರನ್' ಪತ್ರಿಕೆಯ ಸಂಪಾದಕ ಆರ್ ಆರ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದರು.
ಅದಾದ ಬಳಿಕ ಅಟ್ಟಹಾಸ ಚಿತ್ರ ಕೃತಿಚೌರ್ಯ ಆರೋಪಕ್ಕೂ ಗುರಿಯಾಯಿತು. ತಮ್ಮ 'ವೀರಪ್ಪನ್: ನರಹಂತಕನ ರುದ್ರ ನರ್ತನ' ಎಂಬ ಕೃತಿಯಿಂದ ಕತೆಕದ್ದು ಚಿತ್ರಕಥೆ ಮಾಡಿದ್ದಾರೆ ಎಂದು ಪತ್ರಕರ್ತ ಟಿ.ಗುರುರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು. (ಏಜೆನ್ಸೀಸ್)


Click it and Unblock the Notifications











