ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ
ಡಾ ರಾಜ್ ಕುಮಾರ್ ಸ್ಮಾರಕ ಆಗೋಗಿದೆ. ಅದೇ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆ ಮತ್ತು ಸ್ಮಾರಕವೂ ನಿರ್ಮಾಣವಾಗಲಿದೆ. ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಸ್ಮಾರಕ ಒಂದೇ ಕಡೆಯಾದ್ರೆ, ಮತ್ತೊಬ್ಬ ದಂತಕಥೆ ವಿಷ್ಣು ಅವರ ಸ್ಮಾರಕ ಯಾಕೆ ಅಲ್ಲೆಲ್ಲೋ ಇರಬೇಕು. ಅದನ್ನ ಕಂಠೀರವ ಸ್ಟುಡಿಯೋಗೆ ಶಿಫ್ಟ್ ಮಾಡಿ ಎಂಬ ಮಾತು ಒಂದು ವರ್ಗದಲ್ಲಿ ಆರಂಭವಾಗಿದೆ.
ಈ ಯೋಚನೆ ಎಷ್ಟು ಸರಿಯೋ ಎಷ್ಟು ತಪ್ಪೋ ಗೊತ್ತಿಲ್ಲ. ಆದ್ರೆ, ಸುಮಾರು 9 ವರ್ಷಗಳಿಂದ ವಿಷ್ಣು ಸ್ಮಾರಕ ಸಮಸ್ಯೆಯನ್ನ ಬಗರಹರಿಸಲು ಸಾಧ್ಯವಾಗಲಿಲ್ಲ, ಈಗ ಅಂಬಿ ನಿಧನ ಹೊಂದಿರುವ ಸಮಯದಲ್ಲಿ ದಾದಾ ಸ್ಮಾರಕ ಕುರಿತು ಯಾಕೆ ಮಾತು ಎಂಬುದು ಸಾಹಸ ಸಿಂಹ ಅಭಿಮಾನಿಗಳ ಪ್ರಶ್ನೆ.?
ಈ ಬಗ್ಗೆ ಹೇಳುವುದಕ್ಕೂ, ಕೇಳುವುದಕ್ಕೂ ತುಂಬಾ ವಿಷ್ಯಗಳಿದೆ. ಈ ಬಗ್ಗೆ ಡಾ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಅಭಿಪ್ರಾಯವನ್ನ ಫೇಸ್ ಬುಕ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅವರ ಈ ಮಾತಿನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕರೂ ಸಿಗಬಹುದು. ವೀರಕಪುತ್ರ ಶ್ರೀನಿವಾಸ್ ಅವರ ಯಥಾವತ್ ಸಾಲುಗಳನ್ನ ಇಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ....

ವಿಷ್ಣು ಅಭಿಮಾನಿ ಎಚ್ಚರಿಕೆಯ ನುಡಿ
ಮಾನ್ಯ ಮಹನೀಯರುಗಳೇ.. ನೀವು ಕೊಟ್ಟ ಬಟ್ಟೆಯಲ್ಲಿ ಒಬ್ಬ ಮಗನಿಗೆ ಶರ್ಟ್ ಹೊಲಿದ ಮೇಲೂ ಇನ್ನೂ ಬಟ್ಟೆ ಉಳಿದಿದೆ, ಅದರಲ್ಲೇ ಮತ್ತೊಬ್ಬ ಮಗನಿಗೆ ಚೆಡ್ಡಿ ಹೊಲಿದು ಬಿಡ್ಲಾ? ಅಂತ ಟೈಲರೊಬ್ಬ ಕೇಳುತ್ತಿರುವ ಹಾಗಿದೆ ನನಗೀಗ! ರಾಜ್ ಅಲ್ಲೇ ಇದ್ದಾರೆ, ಈಗ ಅಂಬಿಯೂ ಹೋಗ್ತಿದ್ದಾರೆ ಮತ್ತೆ ವಿಷ್ಣು ಯಾಕೆ ಎಲ್ಲೋ ಇರೋದು, ಅವರನ್ನೂ ಕಂಠೀರವ ಸ್ಟುಡಿಯೋಗೆ ತಂದುಬಿಡಿ ಅನ್ನೋ ನಿಮ್ಮ ಆಲೋಚನಾ ಶೈಲಿಗೆ ಮೂಕ ವಿಸ್ಮಿತರಾಗಿದ್ದೇವೆ. ವಿಷ್ಣು ಮೇಲೆ ನಿಮಗೆಲ್ಲಾ, ಎಂಥಾ ಪ್ರೀತಿ! ಎಂಥಾ ಪ್ರೀತಿ!! ವಾಹ್ ವಾಹ್.. ಗ್ರೇಟ್!!

ಇಷ್ಟು ದಿನ ಎಲ್ಲಿ ಹೋಗಿತ್ತು ನಿಮ್ಮ ಪ್ರೀತಿ
ಅಲ್ಲಾ ಸ್ವಾಮಿ, ವಿಷ್ಣು ಅಲ್ಲೆಲ್ಲೋ ಇದ್ದಾರೆ ಅನ್ನೋ ಸಂಗತಿ, ಈಗ ನೆನಪಾಯಿತಾ? ಹತ್ತು ವರ್ಷದಿಂದ ಆ ಜ್ಙಾನ ಇರಲಿಲ್ಲವಾ? ವಿಷ್ಣು ಮೇಲಿನ ಪ್ರೀತಿ ಸತ್ತು ಹೋಗಿತ್ತಾ? ಅಯ್ಯೋ ರಾಜ್ಕುಮಾರ್ ಅವರಿಗೆ ಸ್ಮಾರಕ ಆಗ್ಹೋಯ್ತು, ಅಂಬಿಗೂ ಮಾಡ್ಬಿಡ್ತೀವಿ ಇನ್ನು ವಿಷ್ಣುದು ಮಾಡದಿದ್ರೆ ಸುಮ್ನೆ ವಿವಾದ ಆಗುತ್ತೆ ಅಂತ ಹೀಗೊಂದು ಹೇಳಿಕೆ ಕೊಡ್ತಿದ್ದೀರಾ? ಅದೂ ಎಂಥಹಾ ಹೇಳಿಕೆ, ಸ್ಥಳಾಂತರ ಮಾಡುವ ಹೇಳಿಕೆ.. ಅದನ್ನೇನು ಟೂರಿಂಗ್ ಟಾಕೀಸ್ ಸಿನಿಮಾ ಅಂದ್ಕೊಂಡ್ ಬಿಟ್ರಾ ಸ್ವಾಮಿ? ಯಾವಾಗಂದ್ರೆ ಆವಾಗ, ಎಲ್ಲಿಗಂದ್ರೆ ಅಲ್ಲಿಗೆ ಶಿಫ್ಟ್ ಮಾಡೋಕೆ?

ಪುಣ್ಯಭೂಮಿ ಅಲ್ಲೆ ಆಗ್ಬೇಕು
ಶಿಪ್ಟ್ ಮಾಡೋ ಹಾಗಿದ್ರೆ ಇಷ್ಟು ದಿವ್ಸ ಕಾಯ್ಬೇಕಿತ್ತಾ ನಾವು? ಯಾವಾಗ್ಲೋ ಸ್ಮಾರಕವಾಗ್ಬಿಡ್ತಿತಿತ್ತು. ಅಷ್ಟಕ್ಕೂ ರಾಜ್ ಅವರನ್ನು ಕಂಠೀರವದಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದು, ಅಂಬರೀಷ್ ಅವರನ್ನೂ ಅಲ್ಲೇ ಸಂಸ್ಕಾರ ಮಾಡ್ತಿದ್ದೀರಿ. ಆದ್ದರಿಂದ ಅವರಿಗೆ ಅಲ್ಲೇ ಸ್ಮಾರಕ ಮಾಡೋದು ನ್ಯಾಯೋಚಿತ ನಿರ್ಧಾರ! ಆದರೆ ವಿಷ್ಣು ಅವರನ್ನು ಸಂಸ್ಕಾರ ಮಾಡಿರುವಂತಹುದ್ದು ಅಭಿಮಾನ್ ಸ್ಟುಡಿಯೋದಲ್ಲಿ ಎಂಬುದು ನೆನಪಿರಲಿ. ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು.

ನಮ್ಮ ಜೊತೆ ಯಾರೂ ಇಲ್ಲದಿರಬಹುದು
ಸರ್ಕಾರಗಳು ನಮ್ಮ ಜೊತೆ ಇಲ್ಲದಿರಬಹುದು, ರಾಜಕೀಯದ ಗೆಳೆಯರು ನಮಗಿಲ್ಲದಿರಬಹುದು, ಪ್ರಭಾವಿ ಉತ್ತರಾಧಿಕಾರಿಗಳು ಇಲ್ಲದಿರಬಹುದು ಆದ್ರೆ ಅವರನ್ನು ಆರಾಧಿಸೋ ನನ್ನ ತರಹದ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನಮಗೆ ಹಣದ ಸಮಸ್ಯೆ ಇಲ್ಲ. ನಾವೆಲ್ಲಾ ಒಟ್ಟಾದ್ರೆ ಬೆಟ್ಟ ಮಾಡ್ಬಿಡ್ತೀವಿ! ಜಾಗದ ಸಮಸ್ಯೆ ಇಲ್ಲ! ಈಗ್ಲೂ ಒಂದೆರೆಡು ಎಕರೆ ಜಾಗವನ್ನು ದಾನ ಕೊಡುವಂತಹ ಅಭಿಮಾನಿಗಳು ಸಾಕಷ್ಟಿದ್ದಾರೆ! ಆದ್ರೆ ನಮಗೆ ಯಾವ್ ಯಾವ ಜಾಗಗಳೋ ಬೇಡ. ನಮ್ಮೆಜಮಾನ್ರು ಮಲಗಿರೋ ಜಾಗವೇ ಬೇಕು. ಅದಕ್ಕಾಗಿಯೇ ಈ ಹೋರಾಟಗಳು. ನೋವಿನ ನರಳಾಟಗಳು.

ಒಂದು ಅಲುಗಾಡಿದ್ರು ಪರಿಸ್ಥಿತಿಗಳು ನೆಟ್ಟಗಿರಲ್ಲ
ನಮ್ಮೆಜಮಾನ್ರು ಬದುಕಿದ್ದಾಗಲೂ ನೆಮ್ಮದಿ ಕಾಣಲಿಲ್ಲ, ಕನಿಷ್ಠ ಸಾವಿನಲ್ಲೂ ನೆಮ್ಮದಿ ಕಾಣಬಾರದೇ? ಅಥವಾ ಹಾಗೆ ನೆಮ್ಮದಿ ಕಾಣುವಂತಾಗಲಿ ಎಂದು ನಾವು ಭಾವಿಸುವುದು ತಪ್ಪೇ? ಈಗ್ಲೂ ಹೇಳ್ತೀವಿ ಕೇಳಿ.. ನೀವು ಸ್ಮಾರಕವನ್ನು ಮೈಸೂರಲ್ಲಿ ಮಾಡಿ, ಕಂಠೀರವದಲ್ಲೇ ಮಾಡಿ ನಮಗೇನು ಅಭ್ಯಂತರವಿಲ್ಲ! ಆದ್ರೆ ಪುಣ್ಯಭೂಮಿ ಮಾತ್ರ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು. ಅಲ್ಲಿರುವ ಒಂದೇ ಒಂದು ಕಲ್ಲು ಅಲುಗಾಡಿದ್ರೂ ಪರಿಸ್ಥಿತಿಗಳು ನೆಟ್ಟಗಿರಲ್ಲ.

ಅಂಬರೀಶ್ ಸಾವಿನ ದುಃಖದಲ್ಲಿದ್ದೀವಿ
ನಿಮ್ಮ ಹೇಳಿಕೆಗಳು ಬಾಯ್ಮಾತಿನ ತೀಟೆಗಳಾಗದಿರಲಿ. ಯಾರೋ ಸಣ್ಣಪುಟ್ಟ ವ್ಯಕ್ತಿಗಳ ಬಗ್ಗೆ ಅಲ್ಲ, ಯಜಮಾನ್ರಿಗೆ ಸಂಬಂಧಿಸಿ ನೀವು ಹೇಳಿಕೆ ಕೊಡ್ತಿದ್ದೀರಿ ಎಂಬ ಅರಿವಿರಲಿ. ನಮ್ಮೆಜಮಾನ್ರ ಜೀವದ ಗೆಳೆಯರಾದ ಅಂಬರೀಷ್ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದೀವಿ ನಾವು. ಅವರನ್ನು ಗೌರವದಿಂದ ಕಳುಹಿಸಿಕೊಡೋ ಸಮಯವಿದು. ಅದು ಬಿಟ್ಟು ಅಂಬರೀಷ್ ಅವರ ಅಗಲಿಕೆಯ ಹೊತ್ತಿನಲ್ಲಿ ವಿಷ್ಣು ಅವರ ಹೆಸರನ್ನೇಕೆ ಎಳೆದು ತರುತ್ತೀರಿ!

ನಮ್ಮ ಮೌನ ಹೇಡಿತನವಲ್ಲ
ಒಂದು ವೇಳೆ, ಇದೆಲ್ಲಾ ಮುಗಿದ ಮೇಲೂ ನಿಮಗೆ ವಿಷ್ಣು ಬಗ್ಗೆ ಉಕ್ಕಿ ಹರಿಯುತ್ತಿರುವ ಪ್ರೇಮ, ಅಭಿಮಾನ ನಿಜವೇ ಆಗಿದ್ದಲ್ಲಿ ಕೂಡಲೇ ಹಿರಿಯ ನಟರಾದ ಬಾಲಕೃಷ್ಣ ಅವರ ಕುಟುಂಬವನ್ನು ಮುಖ್ಯಮಂತ್ರಿಗಳ ಜೊತೆ ಮುಖಾಮುಖಿ ಮಾಡಿಸಿ. ಅವರೇನು ಸರ್ಕಾರಕ್ಕಿಂತ ದೊಡ್ಡವರಲ್ಲ! ಅಷ್ಟಕ್ಕೂ ಅದು ಸರ್ಕಾರಿ ಜಮೀನು ಎಂಬುದು ನಿಮಗೆಲ್ಲಾ ತಿಳಿದಿರಲಿ. ಒಂದು ಸಭೆಯಲ್ಲಿ ಮುಗಿದು ಹೋಗುವ ವಿಷಯಕ್ಕೆ ರಾದ್ದಾಂತ ಏಕೆ? ಇಚ್ಚಾನುಸಾರ ಸ್ಟೇಟ್ಮೆಂಟ್ ಕೊಡೋದು ಬಿಟ್ಟು, ಇಚ್ಚಾಶಕ್ತಿ ಪ್ರದರ್ಶಿಸಿ! ಕೊನೆಯಲ್ಲಿ ಒಂದು ಮಾತು.. ನಮ್ಮ ಮೌನ ಹೇಡಿತನವಲ್ಲ! ಅದು ನಮ್ಮೆಜಮಾನ್ರು ನಮಗೆ ಹೇಳಿಕೊಟ್ಟ ಪಾಠ.!


Click it and Unblock the Notifications











