ಮಾತನಾಡುವಾಗ ಎಚ್ಚರಿಕೆಯಿರಲಿ: ಪ್ರಶಾಂತ್ ಸಂಬರಗಿಗೆ ಸಾ.ರಾ.ಗೋವಿಂದು ಎಚ್ಚರಿಕೆ
ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ನಿನ್ನೆಯ ಸುದ್ದಿಗೋಷ್ಠಿಯಲ್ಲಿ, ಚಿತ್ರೋದ್ಯಮಕ್ಕೆ ಪ್ರಶಾಂತ್ ಸಂಬರಗಿಯ ಕೊಡುಗೆ ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಇಂದು ಪ್ರಶಾಂತ್ ಸಂಬರಗಿ ಪತ್ರಿಕಾಗೋಷ್ಠಿ ನಡೆಸಿ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ಆರೋಪಗಳನ್ನು ಮಾಡಿದ್ದಾರೆ.
Recommended Video
ಇಂದಿನ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ ಪ್ರಶಾಂತ್ ಸಂಬರಗಿ, ಸಾ.ರಾ.ಗೋವಿಂದು ಅವರ ಕನ್ನಡಪರ ಹೋರಾಟ, ರಾಜಕೀಯ ವಿಷಯಗಳನ್ನೂ ಪ್ರಶ್ನೆ ಮಾಡಿದ್ದರು.
ಪ್ರಶಾಂತ್ ಸಂಬರಗಿ ಮಾಡಿರುವ ಆರೋಪಗಳ ಬಗ್ಗೆ 'ಫಿಲ್ಮೀಬೀಟ್' ಜೊತೆಗೆ ಮಾತನಾಡಿದ ಸಾ.ರಾ.ಗೋವಿಂದು, ಕೇವಲ ಪ್ರಚಾರಕ್ಕಾಗಿ ಆ ವ್ಯಕ್ತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಪ್ರಶಾಂತ್ ಸಂಬರಗಿ, ವಾಣಿಜ್ಯ ಮಂಡಳಿ ಮೇಲೆ ಮಾಡುತ್ತಿರುವ ಆರೋಪಗಳಿಗೆ ಒಳಕಾರಣವನ್ನೂ ಬಿಚ್ಚಿಟ್ಟರು.

ವಾಣಿಜ್ಯ ಮಂಡಳಿ ಆತನಿಗೆ ಛೀಮಾರಿ ಹಾಕಿತ್ತು: ಸಾ ರಾ ಗೋವಿಂದು
'ಹಿಂದೊಮ್ಮೆ ಆತ (ಪ್ರಶಾಂತ್ ಸಂಬರಗಿ) ಹಿಂದಿ ಸಿನಿಮಾವನ್ನು ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಿದ್ದ. ಆಗ ವಾಣಿಜ್ಯ ಮಂಡಳಿ ಆತನಿಗೆ ಛೀಮಾರಿ ಹಾಕಿತ್ತು. ಆಗ ಗಲಾಟೆಯೇ ನಡೆದಿತ್ತು. ಅದೇ ದ್ವೇಷ ಇಟ್ಟುಕೊಂಡು ವಾಣಿಜ್ಯ ಮಂಡಳಿ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾನೆ' ಎಂದರು ಸಾ.ರಾ.ಗೋವಿಂದು.

'ಅನ್ಯಭಾಷೆ ಸಿನಿಮಾ ಬಿಡುಗಡೆ ಮಾಡುವುದೇ ಅವನ ಉದ್ದೇಶ'
'ಆ ಪ್ರಶಾಂತ್ ಸಂಬರಗಿಗೆ ಕನ್ನಡ ಸ್ವಾಭಿಮಾನ ಎಂಬುದೇ ಇಲ್ಲ, ಭಾಷೆಯ ಬಗ್ಗೆ ಅಭಿಮಾನವೂ ಇಲ್ಲ, ಹಿಂದಿ, ತೆಲುಗು, ತಮಿಳು ಸಿನಿಮಾಗಳನ್ನು ಹೆಚ್ಚು-ಹೆಚ್ಚು ಬಿಡುಗಡೆ ಮಾಡಿಸಬೇಕು ಎಂಬುದೊಂದೇ ಆತನ ಉದ್ದೇಶ. ಡಬ್ಬಿಂಗ್ ಗೆ ಶ್ರೀಕಾರ ಹಾಕಿದ್ದೂ ಸಹ ಆತನೇ' ಎಂದರು ಸಾ.ರಾ.ಗೋವಿಂದು.

ಮಾತನಾಡುವಾಗ ಎಚ್ಚರ, ಮಾನನಷ್ಟ ಮೊಕದ್ದಮೆ ಹಾಕ್ತೀನಿ: ಎಚ್ಚರಿಕೆ
ಆತ ಮಾಡಿರುವ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕುತ್ತೇನೆ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವ ಎಚ್ಚರಿಕೆ ನೀಡುತ್ತೇನೆ. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು ಸಾ.ರಾ.ಗೋವಿಂದು.

ಯಾವ ನಟರೂ ಆತನಿಗೆ ಬೆಂಬಲ ನೀಡುವುದಿಲ್ಲ: ಸಾ.ರಾ.ಗೋವಿಂದು
ಆತ ಯಾರು? ಆ ವ್ಯಕ್ತಿಗೆ ಚಿತ್ರರಂಗದ ಬಗ್ಗೆ ಮಾತನಾಡುವ ಅಧಿಕಾರವೇನಿದೆ. ಕೆಲವು ನಾಯಕ ನಟರೊಂದಿಗೆ ಸಂಪರ್ಕ ಹೊಂದಿದ ಕೂಡಲೇ ಚಿತ್ರೋದ್ಯಮಿ ಆಗಿಬಿಡುತ್ತಾನೆಯೇ? ಯಾವ ನಟರೂ ಆತನ ಬೆಂಬಲಕ್ಕೆ ನಿಲ್ಲುವುದಿಲ್ಲ ಎಂದು ಆಕ್ರೋಶದಿಂದಲೇ ಹೇಳಿದರು ಸಾ.ರಾ.ಗೋವಿಂದು.


Click it and Unblock the Notifications











