ಯಾಕೆ ರೀಮೇಕ್ ಮಾಡಬಾರದು? ಸುದೀಪ್ ಖಡಕ್ ಪ್ರಶ್ನೆ!
ಕಿಚ್ಚ ಸುದೀಪ್ ಗೆ ಅಭಿಮಾನಿ ಬಳಗ ದೊಡ್ಡದಿರಬಹುದು. ಆದರೆ, ಅವರ ಬಗ್ಗೆ ಅನೇಕರು ಮೂಗು ಮುರಿಯುವುದಕ್ಕೆ ಕಾರಣ ಸಾಲು ಸಾಲು 'ರೀಮೇಕ್' ಚಿತ್ರಗಳು. ಸುದೀಪ್ ಸ್ವಮೇಕ್ ಕ್ಕಿಂತ ಹೆಚ್ಚು ರೀಮೇಕ್ ಚಿತ್ರಗಳನ್ನೇ ಮಾಡ್ತಾರೆ ಅಂತ ಅನೇಕರು ಆಗಾಗ ಬೆಟ್ಟು ತೋರಿಸುತ್ತಲೇ ಇರುತ್ತಾರೆ.
ಹೀಗಿದ್ದರೂ, ಸುದೀಪ್ ರೀಮೇಕ್ ಚಿತ್ರ ಮಾಡುವುದನ್ನ ಬಿಟ್ಟಿಲ್ಲ. ಆದರೂ, ಸ್ವಮೇಕ್ ಚಿತ್ರ ಮಾಡಲ್ಲ ಅಂತೇನಿಲ್ಲ. ಇಲ್ಲಿಯವರೆಗೂ ಸುದೀಪ್ ಅಭಿನಯಿಸಿರುವ ಅಷ್ಟೂ ರೀಮೇಕ್ ಚಿತ್ರಗಳು ನಿರ್ಮಾಪಕರನ್ನ ಉದ್ಧಾರ ಮಾಡುವುದಕ್ಕೋಸ್ಕರ ಅಂತ ಖುದ್ದು ಸುದೀಪ್ ಹೇಳಿಕೊಂಡಿದ್ದರು.
ಈಗ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿರುವ 'ರನ್ನ' ಕೂಡ ತೆಲುಗಿನ ಸೂಪರ್ ಹಿಟ್ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಎಲ್ಲರೂ ರೀಮೇಕ್ ಅಂತ ಮುಖ ತಿರುವಿದರೂ, 'ಯಾಕೆ ರೀಮೇಕ್ ಮಾಡಬಾರದು' ಅಂತ ಸುದೀಪ್ ಖಡಕ್ ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ.....

'ಯಾಕೆ ರೀಮೇಕ್ ಮಾಡಬಾರದು???'
ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ವಿರುದ್ಧ ಕೇಳಿಬರುತ್ತಿರುವ ಬಹುದೊಡ್ಡ ಆರೋಪ ಅಂದ್ರೆ 'ರೀಮೇಕ್ ಚಿತ್ರಗಳ ಸರದಾರ' ಅಂತ. ಎಲ್ಲರಿಗೂ ಉತ್ತರ ಕೊಟ್ಟು ಕೊಟ್ಟು ಸಾಕಾಗಿ, ತಮ್ಮ ರೀಮೇಕ್ ಚಿತ್ರಗಳ ಹಿಂದಿನ ರಹಸ್ಯವನ್ನ ಬಿಚ್ಚಿಟ್ಟರೂ ಅಭಿಮಾನಿಗಳು ಮಾತ್ರ ತಣ್ಣಗಾಗಿಲ್ಲ. ಅಸಲಿಗೆ, ''ಯಾಕೆ ರೀಮೇಕ್ ಮಾಡಬಾರದು?'' ಅಂತ ಈಗ ಸುದೀಪ್ ಪ್ರಶ್ನೆ ಎತ್ತಿದ್ದಾರೆ. [ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ]

ಸಂದರ್ಶನದಲ್ಲಿ ಖಡಕ್ ಪ್ರಶ್ನೆ..!
ಕನ್ನಡದ ಜನಪ್ರಿಯ ದಿನಪತ್ರಿಕೆ ವಿಜಯ ಕರ್ನಾಟಕಗೆ ನೀಡಿರುವ ಸಂದರ್ಶನದಲ್ಲಿ ಸುದೀಪ್ 'ರೀಮೇಕ್ ಯಾಕೆ ಮಾಡಬಾರದು' ಅಂತ ಪ್ರಶ್ನೆ ಹಾಕಿದ್ದಾರೆ. ಅಲ್ಲದೇ, ರೀಮೇಕ್ ಚಿತ್ರಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [ಬರೀ ರೀಮೇಕ್ ಅಲ್ಲ ರೀ, ಸುದೀಪ್ ಸ್ವಮೇಕೂ ಮಾಡ್ತಾರೆ!]

ಗೆದ್ದಿರುವ ಚಿತ್ರಗಳೆಲ್ಲಾ ರೀಮೇಕ್..!
'ಮತ್ತೆ ಮತ್ತೆ ರೀಮೇಕ್ ಮಾಡೋದು ಯಾಕೆ?' ಅಂತ ಸಂದರ್ಶನದಲ್ಲಿ ತೂರಿಬಂದ ಪ್ರಶ್ನೆಗೆ, ''ಯಾಕೆ ರೀಮೇಕ್ ಮಾಡಬಾರದು ಎಂಬುದಕ್ಕೆ ಉತ್ತರ ಕೊಡಿ. 'ಜಸ್ಟ್ ಮಾತ್ ಮಾತಲ್ಲಿ' ಎಂಬ ಸ್ವಮೇಕ್ ಸಿನಿಮಾ ಮಾಡಿದೆ. ಆ ಚಿತ್ರ ಏನಾಯ್ತು? ಪ್ರಯೋಗಾತ್ಮಕ 'ಚಿತ್ರ ಶಾಂತಿ ನಿವಾಸ' ಮಾಡಿದೆ. ಆ ಚಿತ್ರದ ಗತಿ ಏನಾಯ್ತು? ಅದಕ್ಕೆ ನಾನೊಂದು ನಿರ್ಧಾರಕ್ಕೆ ಬಂದೆ. ರೀಮೇಕ್, ಸ್ವಮೇಕ್ ಎಂದು ಯೋಚಿಸುತ್ತಾ ಕುಳಿತುಕೊಳ್ಳುವ ಸಮಯ ಇದಲ್ಲ. ನನ್ನ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡುವುದು ಮೂರ್ಖತನ. ಅದಕ್ಕೆ ನನ್ನ ಅಭಿಮಾನಿಗಳು ಇಷ್ಟಪಡುವ ಸಿನಿಮಾ ಮಾಡಬೇಕೆಂದು ತೀರ್ಮಾನಿಸಿದೆ.'' ಅಂತ ಸುದೀಪ್ ಪ್ರತಿಕ್ರಿಯೆಸಿದ್ದಾರೆ. [ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು]

'ಎಲ್ಲಾ ರೀತಿಯ ಚಿತ್ರ ಮಾಡಬೇಕು'
''ಶಾಂತಿ ನಿವಾಸ ಚಿತ್ರವು ಫ್ಯಾಮಿಲಿ ಸೆಂಟಿಮೆಂಟ್ ಮೌಲ್ಯ ಇರುವಂಥದ್ದು. 'ರನ್ನ' ಚಿತ್ರದಲ್ಲೂ ಅದೇ ಇದೆ. ಆದರೆ ಪ್ರೇಕ್ಷಕರು ಫೈಟ್, ಹಾಡು, ಸೆಂಟಿಮೆಂಟ್ ಇಷ್ಟಪಟ್ಟರು. ಕಮರ್ಷಿಯಲ್ ಸೇಲಬಲ್ ಹೀರೋ ಆಗಬೇಕು ಎಂದರೆ ಎಲ್ಲಾ ರೀತಿಯ ಚಿತ್ರ ಮಾಡಬೇಕು'' - ಸುದೀಪ್

'ಹಿಟ್ ಆಗುವುದು ಮುಖ್ಯ'
''ನನಗೆ ಚಿತ್ರ ಹಿಟ್ ಮಾಡುವುದು ಮುಖ್ಯವೇ ಹೊರತು, ಅದು ಸ್ವಮೇಕಾ...ರೀಮೇಕಾ ಎಂದು ತಲೆಕೆಡಿಸಿಕೊಂಡು ಕೂರುವುದಲ್ಲ'' - ಸುದೀಪ್.

'ರನ್ನ' ಯಶಸ್ಸನ್ನ ನಿರೀಕ್ಷಿಸಿರಲಿಲ್ಲ.!
''ರನ್ನ' ಸಿನಿಮಾ ಈ ಮಟ್ಟಿಗೆ ಹಿಟ್ ಆಗುತ್ತದೆ ಎಂದು ಊಹಿಸಿರಲಿಲ್ಲ. ರೀಮೇಕ್ ಚಿತ್ರವಾಗಿದ್ದರಿಂದ ಅನೇಕರು ಇದರ ಮೂಲ ಚಿತ್ರವನ್ನ ನೋಡಿರುತ್ತಾರೆ. ಮತ್ತೆ ಯಾರು ನೋಡುವುದಕ್ಕೆ ಬರುತ್ತಾರೆ ಎಂದು ಕೆಲವರು ಮಾತನಾಡಿದ್ದರು. ಆದರೆ, ನನ್ನ ಸಿಕ್ಸ್ ಥ್ ಸೆನ್ಸ್ ಹೇಳಿದ್ದು, ಈ ಸಿನಿಮಾ ಮಾಡು ಅಂತ. 'ರನ್ನ' ಕುರಿತಾದ ನನ್ನ ನಿರ್ಧಾರಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ'' - ಸುದೀಪ್ [ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]

'ಸುದೀಪ್ ಸಿನಿಮಾ ಅಂತ ಜನ ಬರ್ತಾರೆ'
''ಸುದೀಪ್ ರೀಮೇಕ್ ಮಾಡಿದ್ದಾನಾ ಅಥವಾ ಸ್ವಮೇಕ್ ಮಾಡಿದ್ದಾನಾ ಎಂದು ಜನ ನೋಡುತ್ತಿಲ್ಲ. ಸುದೀಪ್ ಸಿನಿಮಾ ಅಂತ ಜನ ಬರುತ್ತಿದ್ದಾರೆ. ಅದು ನನಗೆ ಖುಷಿ ಕೊಟ್ಟಿದೆ'' ಅಂತ ಸಂದರ್ಶನದಲ್ಲಿ ಹೇಳಿದ್ದಾರೆ ಸುದೀಪ್. ವಿಜಯ ಕರ್ನಾಟಕ ದಿನಪತ್ರಿಕೆಗೆ ನೀಡಿರುವ ಸಂದರ್ಶನದ ಲಿಂಕ್ ಇಲ್ಲಿದೆ.


Click it and Unblock the Notifications











