ಜೋಗಿ ಬರೆದ 'ನಾನು ಪಾರ್ವತಿ' ಪುಸ್ತಕ ಬಿಡುಗಡೆ ಮಾಡಿದ ಸುದೀಪ್
'ಪ್ರೀತಿಸುವವರನ್ನು ಕೊಂದು ಬಿಡಿ' ನಂತರ ಮತ್ತೆ ಜೋಗಿ ಹೊಸ ಪುಸ್ತಕ ಬರೆದಿದ್ದಾರೆ. ಈ ಬಾರಿ ಕನ್ನಡ ಚಿತ್ರರಂಗ ಕಂಡ ಅಮ್ಮ ದೊಡ್ಮನೆ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರ ಕುರಿತು ಜೋಗಿ ಪುಸ್ತಕ ರಚಿಸಿದ್ದಾರೆ. 'ನಾನು ಪಾರ್ವತಿ' ಎಂಬ ಹೆಸರಿನ ಈ ಕೃತಿ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.
ಕಾರ್ಯಕ್ರಮಕ್ಕೆ ಬಂದು ನಟ ಕಿಚ್ಚ ಸುದೀಪ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರು. ಅವರೊಂದಿಗೆ ನಟ ರಾಘವೇಂದ್ರ ರಾಜ್ಕುಮಾರ್, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದ್, ನಿರ್ದೇಶಕ ಭಗವಾನ್, ನಟಿ ಜಯಮಾಲ, ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಉಪಸ್ಥಿತರಿದ್ದರು. ಮಲ್ಲೇಶ್ವರಂನಲ್ಲಿರುವ ಎಸ್ ಆರ್ ವಿ ಥಿಯೇಟರ್ ನಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ''ನಾನು ಇದುವರೆಗೆ ಯಾವ ಬುಕ್ ಓದಿಲ್ಲ. ಆದರೆ ಈ ಬುಕ್ ಖಂಡಿತ ಓದುತ್ತೇನೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಸಾಧನೆ ಮುಂದೆ ನಾನು ತುಂಬ ಚಿಕ್ಕವನು. ಈ ಬುಕ್ ಕೈ ನಲ್ಲಿ ಹಿಡಿಯುವ ತನಕ ಅದರ ತೂಕ ನನಗೆ ಗೊತ್ತಾಗಿರಲಿಲ್ಲ. ಈ ಬುಕ್ ನಲ್ಲಿರುವ ವಿಷಯವನ್ನು ಜೀವನದಲ್ಲಿ ಅಳವಡಿಸಿ ಕೊಂಡ ಮೇಲೆ ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಅರ್ಹನಾಗುತ್ತೇನೆ.'' ಎಂದು ಹೇಳಿದರು.
ಅಂದಹಾಗೆ 'ನಾನು ಪಾರ್ವತಿ' ಪುಸ್ತಕ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಜೀವನದ ಕಥೆಯನ್ನು ತಾವೇ ಹೇಳಿರುವ ಕಥಾ ಹಂದರವಾಗಿದೆ. ಪಾರ್ವತಮ್ಮನವರು ಇದ್ದಾಗ ಹೇಳಿದ ಅನುಭವದ ಕಥನವನ್ನು ಪತ್ರಕರ್ತ ಹಾಗೂ ಲೇಖಕ ಜೋಗಿ ನಿರೂಪಿಸಿದ್ದಾರೆ. ಈಗಾಗಲೇ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಅನೇಕ ಪುಸ್ತಕಗಳು ಬಂದಿದ್ದು ಆ ಪಟ್ಟಿಗೆ ಹೊಸ ಪುಸ್ತಕ ಸೇರಿಕೊಂಡಿದೆ.


Click it and Unblock the Notifications











