"ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ.. ಕಾಣುವ ಬುದ್ದಿ ನಮ್ಮದಾಗಿರಲಿ": ಫ್ಯಾನ್ಸ್ ಪರ ನಿಂತ ಯುವ
ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ಯುವರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸುದೀರ್ಘ ಪತ್ರ ಬರೆದಿರುವ ಅಣ್ಣಾವ್ರ ಮೊಮ್ಮಗ "ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ...
ಕಾಣುವ ಬುದ್ದಿ ನಮ್ಮದಾಗಿರಲಿ" ಎಂದಿದ್ದಾರೆ.
ಭಾನುವಾರ ಸಂಜೆ 'ಕ್ರಾಂತಿ' ಚಿತ್ರದ 2ನೇ ಹಾಡು ಬಿಡುಗಡೆ ವೇಳೆ ವೇದಿಕೆ ಏರಿದ್ದ ನಟ ದರ್ಶನ್ ಅವರನ್ನು ಅವಮಾನಿಸಲಾಗಿತ್ತು. ಅಭಿಮಾನಿಗಳ ಗುಂಪಿನಿಂದ ಕಿಡಿಗೇಡಿ ಒಬ್ಬ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ. ಇದನ್ನು ದರ್ಶನ್ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನ ಸೆಲೆಬ್ರೆಟಿಗಳು ಖಂಡಿಸಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಜೊತೆಗೆ ನಟ ದರ್ಶನ್ಗೆ ಬೆಂಬಲ ಸೂಚಿಸುತ್ತಿದ್ದಾರೆ. ತಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ ನಟ ದರ್ಶನ್ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಮತ್ತೊಂದು ಕಡೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೊಸಪೇಟೆಯಲ್ಲಿ ಭಾನುವಾರ ದರ್ಶನ್ ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಸಂಘರ್ಷ ನಡೆದಿತ್ತು. ಹಾಗಾಗಿ ಅಪ್ಪು ಅಭಿಮಾನಿಯೇ ದರ್ಶನ್ ಮೇಲೆ ಚಪ್ಪಲಿ ಎಸೆದಿರುವುದು ಎನ್ನುವುದು ಕೆಲವರ ವಾದ. ಆದರೆ ಸತ್ತಯ ತಿಳಿಯದೇ ಆರೋಪ ಮಾಡಬೇಡಿ ಎಂದು ಅಪ್ಪು ಫ್ಯಾನ್ಸ್ ಹೇಳುತ್ತಿದ್ದಾರೆ. ಇದೇ ದಾಟಿಯಲ್ಲಿ ಇದೀಗ ಯುವ ಪತ್ರ ಬರೆದಿದ್ದಾರೆ.

ಅಭಿಮಾನಿಗಳೇ ದೇವರು
"ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ
ಚಿಕ್ಕವನು. ಆದ್ರೆ, ತುಂಬ ಹೆಮ್ಮೆಯಿಂದ ಒಂದು ವಿಷಯ ಹೇಳಬೇಕಂದ್ರೆ..
ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರ ಕಾಲದಿಂದ,
ಇವತ್ತಿನವರಿಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ
ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ
ನಡೆದುಕೊಂಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ, ಪ್ರೀತಿ
ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು"

ಕೆಣಕಿದರೆ ಬಹಿರಂಗವಾಗಿ ಪ್ರತಿಕ್ರಿಯೆ
"ಗೌರವ ಯಾವಾಗಲೂ ಪರಸ್ಪರ ಅಲ್ವಾ? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ, ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ . ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ , ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ
ಪ್ರತಿಕ್ರಿಯಿಸುವುದು 'ಬಹಿರಂಗವಾಗಿಯೇ' ವಿನಃ ನಡೆಯುವ
ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ" ಎಂದು ಯುವ ರಾಜ್ಕುಮಾರ್ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ- ಯುವ
"ನಡೆದಿರುವ ಕೃತ್ಯ ಖಂಡನೀಯ. ಯಾರೋ ಮಾಡಿದ ತಪ್ಪನ್ನು
ಮತ್ತೊಬ್ಬರ ಮೇಲೆ ಹಾಕುವುದರಿಂದ "ಸುಳ್ಳು ಸತ್ಯವಾಗುವುದಿಲ್ಲ".
ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ
ಶಿಕ್ಷೆ ಖಂಡಿತ ಆಗುತ್ತದೆ . ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ.. ಕಾಣುವ ಬುದ್ದಿ ನಮ್ಮದಾಗಿರಲಿ. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ. ಗುರುರಾಯರ ಆಶೀರ್ವಾದ ಎಲ್ಲರ ಮೇಲೆ ಸದಾ ಸಂಪೂರ್ಣವಾಗಿ ಇರಲಿ.. ಜೈ ಹಿಂದ್ ಜೈ ಕರ್ನಾಟಕ ಮಾತೆ" ಎಂದು ಯುವ ರಾಜ್ಕುಮಾರ್ ಬರೆದಿದ್ದಾರೆ.

ಯುವ ಬರೆದ ಪತ್ರ ವೈರಲ್
ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ವಿಚಾರಕ್ಕೆ ಸಂಬಂಧಿಸಿ, ಈಗಾಗಲೇ ಶಿವರಾಜ್ಕುಮಾರ್ ಸೇರಿದಂತೆ ದೊಡ್ಮನೆ ಕಲಾವಿದರು ಪ್ರತಿಕ್ರಿಯಿಸಿದ್ದರು. ಆ ಘಟನೆಯನ್ನು ಖಂಡಿಸಿದ್ದರು. ಇದೀಗ ಯುವ ರಾಜ್ಕುಮಾರ್ ಕೂಡ ಪತ್ರ ಬರೆದಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಯಾರೋ ಮಾಡಿ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದು ಸರಿಯಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದು ದೊಡ್ಮನೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಯುವ ಬರೆದ ಪತ್ರದ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.


Click it and Unblock the Notifications











