400 ಕೋಟಿ ಆಫರ್ ಕೈ ಬಿಟ್ಟ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ
ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳು ಮುಚ್ಚಿವೆ. ಆಗಾಗ ತೆರೆಯಲು ಅನುಮತಿ ಸಿಕ್ಕರೂ ಮೊದಲಿನಂತೆ ಸಿನಿಮಾ ಪ್ರದರ್ಶನ ಮಾಡಲು ಆಗಿಲ್ಲ. ಇದರ ಪೂರ್ಣ ಲಾಭ ಪಡೆದುಕೊಂಡಿದ್ದು ಮಾತ್ರ ಒಟಿಟಿ ಸಂಸ್ಥೆಗಳು. ಅಮೇಜಾನ್ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್ಸ್ಟಾರ್, ಜೀ 5 ಸೇರಿದಂತೆ ಹಲವು ಒಟಿಟಿಗಳು ಕೊರೊನಾ ಲಾಕ್ಡೌನ್ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಗುರುತಿಸಿಕೊಂಡಿವೆ.
ಕೊರೊನಾದಿಂದ ಹೊರಬಂದು ಅದ್ಯಾವಾಗ ಚಿತ್ರಮಂದಿರಗಳು ಮೊದಲಿನಂತೆ ಕೆಲಸ ಮಾಡಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ನಿರ್ಮಾಪಕರು, ಒಟಿಟಿಗಳ ಕಡೆ ಮುಖ ಮಾಡಿದರು. ಹಾಕಿದ ಬಂಡವಾಳ ಬಂದ್ರೆ ಸಾಕು, ನಷ್ಟದಿಂದ ಪಾರಾಗಬಹುದು ಎಂದು ಚಿಂತಿಸಿದರು. ಹೆಚ್ಚು ಲಾಭ ನಿರೀಕ್ಷೆ ಮಾಡದೆ ಸಿಕ್ಕ ಹಣಕ್ಕೆ ಚಿತ್ರಗಳನ್ನು ಒಟಿಟಿಗೆ ಸೇಲ್ ಮಾಡಿದರು. ಕೆಲವು ನಿರೀಕ್ಷೆಯ ಚಿತ್ರಗಳು ಸಹ ಥಿಯೇಟರ್ನಲ್ಲಿ ಬರಲು ಕಾಯಲಿಲ್ಲ.
ಸಲ್ಮಾನ್ ಖಾನ್ ನಟನೆಯ ರಾಧೆ, ಅಜಯ್ ದೇವಗನ್ ನಟನೆಯ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಸಹ ಒಟಿಟಿ ಬಾಗಿಲು ತಟ್ಟಿದವು. ಆದರೆ, ಯಶ್ ರಾಜ್ ಸಂಸ್ಥೆ ಮಾತ್ರ 400 ಕೋಟಿ ಆಫರ್ ಮಾಡಿದರೂ ಒಟಿಟಿಗೆ ಜೈ ಎನ್ನಲಿಲ್ಲ. ಮುಂದೆ ಓದಿ...

ನಾಲ್ಕು ಮೆಗಾ ಚಿತ್ರಗಳ ಬಿಡುಗಡೆ ಸಜ್ಜು
ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲಂಸ್ ಸಂಸ್ಥೆ ನಿರ್ಮಿಸಿರುವ ನಾಲ್ಕು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಸೈಫ್ ಅಲಿ ಖಾನ್, ರಾಣಿ ಮುಖರ್ಜಿ ನಟನೆಯ 'ಬಂಟಿ ಔರ್ ಬಬ್ಲಿ', ರಣ್ಬೀರ್ ಕಪೂರ್, ಸಂಜಯ್ ದತ್, ವಾಣಿ ಕಪೂರ್ ಅಭಿನಯದ 'ಶಂಶೇರಾ', ರಣ್ವೀರ್ ಸಿಂಗ್, ಶಾಲಿನಿ ಪಾಂಡೆ, ಬೊಮ್ಮನ್ ಇರಾನಿ ಕಾಣಿಸಿಕೊಂಡಿರುವ 'ಜಯೇಶ್ಭಾಯಿ ಜೋರ್ದಾರ್' ಹಾಗೂ ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ನಟನೆಯ 'ಪೃಥ್ವಿರಾಜ್' ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಈ ನಾಲ್ಕು ಚಿತ್ರವೂ ಯಶ್ ರಾಜ್ ಫಿಲಂಸ್ ಸಂಸ್ಥೆ ಅಡಿಯಲ್ಲಿ ತಯಾರಾಗಿದೆ.

ಆಫರ್ ನಿರಾಕರಿಸಿದ ಚೋಪ್ರಾ
ಬಂಟಿ ಔರ್ ಬಬ್ಲಿ, ಶಂಶೇರಾ, ಜಯೇಶ್ಭಾಯಿ ಜೋರ್ದಾರ್ ಹಾಗೂ ಪೃಥ್ವಿರಾಜ್ ಚಿತ್ರಗಳು ಹೆಚ್ಚು ನಿರೀಕ್ಷೆ ಮೂಡಿಸಿದೆ. ಈ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಕೊರೊನಾದಿಂದ ತಡವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಟಿಟಿ ವೇದಿಕೆಗಳು ಈ ಚಿತ್ರಗಳನ್ನು ಖರೀದಿಸಲು ಹೆಚ್ಚು ಒಲವು ತೋರಿದೆ. ಪದೇ ಪದೇ ಆಫರ್ ಮಾಡುತ್ತಿದ್ದರೂ, ನಿರ್ಮಾಪಕ ಆದಿತ್ಯ ಚೋಪ್ರಾ ಮಾತ್ರ ಈ ಚಿತ್ರಗಳನ್ನು ಥಿಯೇಟರ್ನಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದಿದ್ದಾರೆ.

400 ಕೋಟಿ ಆಫರ್ ತಿರಸ್ಕಾರ
ಯಶ್ ರಾಜ್ ಸಂಸ್ಥೆಯಲ್ಲಿ ತಯಾರಾಗಿರುವ ಈ ನಾಲ್ಕು ಚಿತ್ರಗಳನ್ನು ಎಕ್ಸ್ಕ್ಲೂಸಿವ್ ಆಗಿ ಬಿಡುಗಡೆ ಮಾಡಲು ಅಮೇಜಾನ್ ಪ್ರೈಮ್ ಮುಂದೆ ಬಂದಿತ್ತು. ಈ ನಾಲ್ಕು ಚಿತ್ರಕ್ಕಾಗಿ ಬರೋಬ್ಬರಿ 400 ಕೋಟಿ ನೀಡುವುದಾಗಿ ಆಫರ್ ಮಾಡಿದೆ. ಆದರೆ, ಇನ್ನೊಂದು ಮಾತು ಯೋಚಿಸದೇ ಆದಿತ್ಯ ಚೋಪ್ರಾ ಈ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆದಿತ್ಯ ಚೋಪ್ರಾ ಈ ನಾಲ್ಕು ಚಿತ್ರಗಳ ಮೇಲಿನ ಬಂಡವಾಳಕ್ಕಿಂತ ಇದು ಲಾಭದಾಯಕವಾಗಿತ್ತು ಎಂದು ಹೇಳಲಾಗಿದೆ. ಇಂತಹ ಆಫರ್ ಬಿಟ್ಟು ತಪ್ಪು ಮಾಡಿದರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಸ್ಪಷ್ಟನೆ ಇಲ್ಲ
ಮಹಾರಾಷ್ಟ್ರದಲ್ಲಿ ಇದುವರೆಗೂ ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಶೇಕಡಾ 50ರಷ್ಟು ಅವಕಾಶ ಮಾಡಿಕೊಡಲಾಗಿದೆ. ಶೀಘ್ರದಲ್ಲೇ 100 ಪರ್ಸೆಂಟ್ ಅನುಮತಿ ಸಿಗಲಿದೆ ಎಂದು ವರದಿಯಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಥಿಯೇಟರ್ಗಳ ಪರಿಸ್ಥಿತಿ ಇನ್ನು ಅತಂತ್ರವಾಗಿದೆ. ಆದರೂ, ಚಿತ್ರಮಂದಿರಗಳನ್ನು ಪುನಃ ತೆರೆದ ನಂತರವೇ ನಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.


Click it and Unblock the Notifications











