ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿರುವ ಎಸ್.ಮಹೇಂದರ್ ಶ್ರಮದ ಈ ಚಿತ್ರದಲ್ಲಿ ರಮೇಶ್ ತಮ್ಮ ಹಳೆಯ ಇಮೇಜನ್ನು ನೆನಪಿಸಿರುವುದು ಹೈಲೈಟು.
ಮೊದಲೇ ಹೇಳಿದಂತೆ ಇಲ್ಲಿಯ ಬುನಾದಿಯೇ ಎಡವಟ್ಟಾಗಿದೆ. ನಾಯಕಿಯನ್ನು ಒಂದು ಸಲವೂ ನೋಡದಿದ್ದರೂ ನಾಯಕ ಸಾಯುವ ಸ್ಥಿತಿ ತಲುಪುವುದು ಮಾನವಾತೀತ ಕಲ್ಪನೆಯೇ ಸರಿ. ಅದಲ್ಲದೆ ನಾಯಕಿ ತನ್ನ ಪ್ರೀತಿಯನ್ನು ಆತನಿಗೆ ಹೇಳಿಯೂ ಇರುವುದಿಲ್ಲ. ಅಸಲಿಗೆ ಆತ ತನ್ನನ್ನು ಪ್ರೀತಿಸುವುದೇ ಆಕೆಗೆ ಗೊತ್ತಿರುವುದಿಲ್ಲ. ಹೀಗಾಗಿ ರಮೇಶ್ ಬಿಕ್ಕಿಬಿಕ್ಕಿ ಅಳುತ್ತಿದ್ದರೂ, ಎದೆ ಹಿಡಿದು ಕೆಮ್ಮುತ್ತಿದ್ದರೂ ಪ್ರೇಕ್ಷಕರು ಅದನ್ನೊಂದು ‘ನಾಟಕ’ದಂತೆ ನೋಡುತ್ತಿರುತ್ತಾರೆ. ಅಸಂಗತ ನಾಟಕವನ್ನು ನೆನಪಿಸುವ ದೃಶ್ಯಗಳಿಂದ ಚಿತ್ರ ಸೊರಗಿದೆ. ಮನಸ್ಸು ಮುಟ್ಟಬೇಕಾದ ಕಥೆ ಅಲ್ಲಿಗೆ ಮುಟ್ಟದಿರುವುದೇ ಸೋಲಿಗೆ ಮೊದಲ ಮೆಟ್ಟಿಲಾಗುತ್ತದೆ. ಆದರೆ ಇದರ ಗೆಲುವಿರುವುದು ರಮೇಶ್ ಅಭಿನಯದಲ್ಲಿ, ಶರಣ್- ಮೈಕೆಲ್ ಮಧು ಹಾರಿಸುವ ಜೋಕಿನಲ್ಲಿ, ‘ಟೆಲಿಫೋನ್ ಗೆಳತಿ’ ಎನ್ನುವ ಭಾವಗೀತೆಯಲ್ಲಿ, ನಾಯಕಿಯನ್ನು ಹುಡುಕುವಾಗಿನ ನಾಲ್ಕೈದು ಆರ್ದ್ರ ಘಟನೆಗಳಲ್ಲಿ. ಆಮದಾಗಿರುವ ಸಂಗೀತ ಮತ್ತು ಸಂಭಾಷಣೆ ಖುಷಿಕೊಡುತ್ತದೆ.
ನಾಯಕಿ ಶ್ರೀಲಕ್ಷ್ಮಿಯನ್ನು ಅದ್ಯಾವ ಮೂಲೆಯಿಂದ ಹಿಡಿದುತಂದರೋ. ಅವಳ ಮುಖದಲ್ಲಿ ತುಟಿ ಬಿಟ್ಟು ಒಂದೇ ಒಂದು ನರವೂ ಚಲಿಸುವುದಿಲ್ಲ. ಅಂದಹಾಗೆ ಇದರಲ್ಲಿ ರಾಂಕುಮಾರ್ ಹಾಗೂ ದರ್ಶನ್ ತೂಗುದೀಪ್ ಹೀಗೆ ಬಂದು ಹಾಗೆ ಹೋಗುತ್ತಾರೆ. ಅವರಿಂದ ಯಾವುದೇ ರೀತಿ ಲಾಭ ನಷ್ಟವಾಗಿಲ್ಲ. ಒಟ್ಟಿನಲ್ಲಿ ಮಲ್ಟಿಸ್ಟಾರ್ ಚಿತ್ರವೆನ್ನಲು ಮಾತ್ರ ಅಡ್ಡಿಯಿಲ್ಲ.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











