ಜೋಗಯ್ಯ ಬಂದಾನ ಹೋಗಿ ನೋಡಯ್ಯ
ಪ್ರೇಮ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ 'ಜೋಗಯ್ಯ' ಹೆಚ್ಚು ಮುದ ನೀಡುತ್ತದೆ. ಚಿತ್ರದ ಹೈಲೈಟ್ಗಳು ಒಂದೆರಡಲ್ಲ. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರ ಕುತೂಹಲ, ತಾಳ್ಮೆಗಳನ್ನು ಉಳಿಸಿಕೊಳ್ಳುವಲ್ಲಿ ಪ್ರೇಮ್ ಯಶಸ್ವಿಯಾಗಿದ್ದಾರೆ. ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ಜೋಗಯ್ಯ ಒಂದ್ಕಿತಾ ಹೋಗಿ ನೋಡಿ ನಿಮ್ಮ ಗಂಟೇನು ಹೋಗಲ್ಲ.
ತಾಯಿಯ ಪ್ರೀತಿ, ಪ್ರೇಮ, ಮಮಕಾರಗಳ ಹೂರಣವಾಗಿತ್ತು ಜೋಗಿ. ಆದರೆ 'ಜೋಗಯ್ಯ' ತಾಯಿ ಇಲ್ಲದ ತಬ್ಬಲಿ. ತಾಯಿಯ ಬೆಚ್ಚನೆ ನೆನಪುಗಳಲ್ಲೆ ವಿಹರಿಸುವ ಹೃದಯ ವಿಹಾರಿ. ಕಡೆಗೆ ತಾನು ಪ್ರೀತಿಸುವ ಹುಡುಗಿಯಲ್ಲೇ ತನ್ನ ತಾಯಿಯನ್ನು ಕಂಡುಕೊಳ್ಳುತ್ತಾನೆ. ಚಿತ್ರ ತಾಂತ್ರಿಕವಾಗಿ ಸಮೃದ್ಧವಾಗಿರುವಂತೆ ಭಾವನಾತ್ಮಕವಾಗಿಯೂ ಸೆಳೆಯುತ್ತದೆ.

ಭೂಗತ ಜಗತ್ತು ಎಂಬುದು ಹುಲಿ ಸವಾರಿಯಿದ್ದಂತೆ. ಅತ್ತ ದರಿ ಇತ್ತ ಪುಲಿ, ಎರಡು ಅಲಗಿನ ಕತ್ತಿ ಎಂಬುದು ಚಿತ್ರದ ಒಟ್ಟಾರೆ ಸಾರಾಂಶ. ಅದನ್ನು ತೆರೆಗೆ ತರುವಲ್ಲಿ ಪ್ರೇಮ್ ವೃತ್ತಿಪರತೆ ಎದ್ದು ಕಾಣುತ್ತದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಶಿವಣ್ಣ ಅಭಿನಯ ಮುದನೀಡುತ್ತದೆ. ತಮ್ಮ ಅಭಿನಯದ ನೂರನೆ ಚಿತ್ರ ಎಂಬ ಕಾರಣಕ್ಕೆ ಶಿವಣ್ಣ ಹೆಚ್ಚು ಜಾಗ್ರತೆ ವಹಿಸಿದ್ದಾರೆ.
ತಾಯಿಯನ್ನೇ ತನ್ನ ಸ್ವರ್ವಸ್ವ ಎಂದು ತಿಳಿದ 'ಜೋಗಿ' ಕಡೆಗೆ ಆಕೆಯನ್ನು ಕಳೆದುಕೊಂಡು ಪರಿತಪಿಸುತ್ತಾನೆ. ತಾಯಿಯನ್ನು ನೆನಸಿಕೊಂಡು ಕುಣಿಯುತ್ತಾ ಮೈಮರೆಯುವ ಮೂಲಕ 'ಜೋಗಿ' ಅಂತ್ಯವಾಗುತ್ತದೆ. ಆದರೆ ಜೋಗಿ ಮುಂದೇನಾಗುತ್ತಾನೆ? ಅವನನ್ನು ಭೂಗತ ಜಗತ್ತು ಸುಮ್ಮನೆ ಬಿಡುತ್ತದೆಯೇ? ಜೋಗಿ ಭೂಗತ ಜಗತ್ತಿಗೆ ಮತ್ತೆ ಅಡಿಯಿಡುತ್ತಾನಾ? ಭೂಬಯ್ಯ ಮತ್ತವನ ಗೆಳೆಯರೆಲ್ಲಾ ಏನಾಗುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರವೇ 'ಜೋಗಯ್ಯ'.
'ಜೋಗಿ' ಚಿತ್ರದಲ್ಲಿ ಕೊಳ್ಳೆಗಾಲದ ಆಡುಭಾಷೆಯನ್ನು ಬಳಸಿಕೊಂಡಿದ್ದ ಪ್ರೇಮ್, ಇಲ್ಲಿ ಉತ್ತರ ಕರ್ನಾಟಕದ ಭಾಷೆಗೆ ಮೊರೆಹೋಗಿದ್ದಾರೆ. ಚಿತ್ರದ ಪ್ರಮುಖ ಹೈಲೈಟ್ಗಳಲ್ಲಿ ಇದೂ ಒಂದು. 'ಪಯಣ' ಖ್ಯಾತಿಯ ರವಿಶಂಕರ್ ಅವರದು ಇಲ್ಲಿ ಜ್ಯೋತಿಷ್ಯ, ಶಕುನ ನಂಬುವ ಹಾಗೂ ಅದನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಗಮನಾರ್ಹ ಪಾತ್ರ.
ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿ ಮೂಡಿಬಂದಿರುವುದು ಚಿತ್ರದ ಇನ್ನೊಂದು ಹೈಲೈಟ್. ಯಾರೂ ಕಾಣದ ಊರು...ಎಂಬ ಹಾಡಿನಲ್ಲಿನ ಗ್ರಾಫಿಕ್ಸ್, ಹರಹರ ಶಂಭೋ... ಎಂಬ ಹಾಡಿನ ಚಿತ್ರೀಕರಣ, ಕುರಿನಾ, ಕೋಳಿನಾ ಸೋಮವಾರ ಶನಿವಾರ ಕುಯ್ಯುವಂಗಿಲ್ಲ...ಹಾಡಿನ ವಸ್ತ್ರವೈವಿಧ್ಯತೆ ಗಮನಸೆಳೆಯುತ್ತದೆ.
ಸುಮಿತ್ ಕೌರ್ ಅತ್ವಾಲ್ ಕಣ್ಣಲ್ಲೆ ಐಸ್ಪೈಸ್ ಆಡುತ್ತಾರೆ. ಇದು ತಮ್ಮ ಮೊದಲ ಚಿತ್ರ ಅಲ್ಲವೇ ಅಲ್ಲ ಎಂಬಷ್ಟು ಸೊಗಸಾಗಿ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕದ ಹುಡುಗಿಯಾಗಿ ಗಮನಸೆಳೆಯುತ್ತಾರೆ. ಇನ್ನು 'ಜೋಗಿ' ಚಿತ್ರದಲ್ಲಿನ ಒಂದಷ್ಟು ಪಾತ್ರಗಳು ಇಲ್ಲೂ ಬಂದು ಹೋಗುತ್ತವೆ. ವಿ ಹರಿಕೃಷ್ಣ ಸಂಗೀತದ ಬಗ್ಗೆ ಎರಡು ಮಾತಿಲ್ಲ.
ಶಿವಣ್ಣ ಅಭಿನಯದ ನೂರನೆ ಚಿತ್ರವಾದರೂ ಅವರಲ್ಲಿನ ಲವಲವಿಕೆ, ಉತ್ಸಾಹ ಎಳ್ಳಷ್ಟೂ ಕಡಿಯಾಗದಂತೆ ಅಭಿನಯಿಸಿದ್ದಾರೆ. ಶಿವಣ್ಣ ತಮ್ಮ ಹಿಂದಿನ ಚಿತ್ರಗಳಿಗಿಂತ ಹೆಚ್ಚು ಸ್ಟೈಲಿಷ್ ಆಗಿ ಕಾಣುತ್ತಾರೆ. ಭಾವನಾತ್ಮಕವಾಗಿ ಶಿವಣ್ಣ ಗಮನಸೆಳೆಯುತ್ತಾರೆ. ವಕೀಲೆಯಾಗಿ ನಟಿ ಪೂಜಾಗಾಂಧಿ ಗಂಭೀರ ಅಭಿನಯ ನೀಡಿದ್ದಾರೆ.
ನಂದಕುಮಾರ್ ಅವರ ಛಾಯಾಗ್ರಹಣ ಕಣ್ಮನ ಸೆಳೆಯುತ್ತದೆ. ಪತ್ರಕರ್ತ ಬಿ ಗಣಪತಿ ಸೇರಿದಂತೆ ಗುರುರಾಜ್ ಹೊಸಕೋಟೆ, ಸುರೇಶ್ ಮಂಗಳೂರ್, ದಶಾವರ ಚಂದ್ರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ಬದಿಗೆ ಸರಿಸಿದರೆ 'ಜೋಗಯ್ಯ'ನನ್ನು ಒಮ್ಮೆ ಕಣ್ತುಂಬ ನೋಡಿ ಸವಿಯಬಹುದು. ನೀವು ಚಿತ್ರ ಒಮ್ಮೆ ನೋಡಿ ನಿಮ್ಮದೇ ವಿಮರ್ಶೆಗಳನ್ನು ನಮಗೆ ಕಳುಹಿಸಿ.


Click it and Unblock the Notifications











