'ಬಹುಪರಾಕ್' ವಿಮರ್ಶೆ: ನಾನಾರೆಂಬುದು ನಾನಲ್ಲ
ಈ ರೀತಿಯ ಕಥೆಯನ್ನು ತೆರೆಗೆ ತರುವುದು ನಿರ್ದೇಶಕರಿಗೆ ನಿಜಕ್ಕೂ ಕಷ್ಟಸಾಧ್ಯ. ಅದೇ ರೀತಿ ಪಾತ್ರ ಪೋಷಣೆ ಮಾಡುವುದು ಸವಾಲಿನ ಕೆಲಸ. ಆದರೆ ಬಡಪಾಯಿ ಪ್ರೇಕ್ಷಕರ ಪರಿಸ್ಥಿತಿ ಏನಾಗಬೇಡ? ಅವರನ್ನೂ ಒಂಚೂರು ಗಮನದಲ್ಲಿಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು.
ಶ್ರೀನಗರ ಕಿಟ್ಟಿ ಅವರದು ಮೂರು ಶೇಡ್ ಗಳುಳ್ಳ ಪಾತ್ರವಾದರೆ ಮೇಘನಾ ರಾಜ್ ಅವರದು ಎರಡು ಶೇಡ್ ಗಳುಳ್ಳ ಪಾತ್ರ. ಮಾನಸ್, ಮೌನಿ ಹಾಗೂ ಮಣಿ ಎಂಬ ಮೂರು ಶೇಡ್ ಗಳಲ್ಲಿ ಕಿಟ್ಟಿ ಅವರ ಪಾತ್ರ ಮೂಡಿ ಬಂದಿದೆ. ಸ್ನೇಹ ಮತ್ತು ಪ್ರೀತಿ ದ್ವಿಪಾತ್ರದಲ್ಲಿ ಮೇಘನಾ ಪಾತ್ರ ಅರಳಿದೆ.
ಕಥೆ ಅಷ್ಟು ಸಿಂಪಲ್ ಆಗಿಲ್ಲ. ಮಾನಸ್ ಲವರ್ ಬಾಯ್ ಆದರೆ ಮೌನಿ ರಾಜಕಾರಣಿ ಹಾಗೂ ಮಣಿ ಅಂಡರ್ ವರ್ಲ್ಡ್ ಡಾನ್. ಈ ಮೂರು ಪಾತ್ರಗಳು ಪ್ಯಾರಲಲ್ ಆಗಿ ಸಾಗುತ್ತವೆ. ಮೂರು ಪಾತ್ರಗಳ ಆಯ್ಕೆಯ ದಾರಿ ತಪ್ಪು ಎನ್ನಿಸುತ್ತದೆ. ಕೊನೆಗೆ ಮಾನಸ್, ಮೌನಿ, ಮಣಿಗೆ ಸತ್ಯದ ಅರಿವಾಗುತ್ತದೆ.
ಪಾತ್ರಗಳನ್ನು ಎಂಜಾಯ್ ಮಾಡಬಹುದು
ಮಾನಸ್, ಮಣಿ, ಮೌನಿ ಎಲ್ಲರೂ ಒಬ್ಬನೇನಾ? ಅವರ ಮೂರು ಭಿನ್ನ ಪಾತ್ರಗಳೇ? ಸ್ನೇಹಾ ಪ್ರೀತಿ ಬೇರೆಬೇರೆನಾ ಅಥವಾ ಎರಡೂ ಒಂದೇನಾ? ಎಂಬ ಪ್ರಶ್ನೆಗಳು ಪ್ರೇಕ್ಷಕರ ಮನದಾಳದಲ್ಲಿ ಕುಣಿಯಲು ಆರಂಭಿಸುತ್ತವೆ. ಪ್ರೇಕ್ಷಕರು ಪಾತ್ರಗಳನ್ನು ಎಂಜಾನ್ ಮಾಡುತ್ತಾರೆ. ಆದರೆ ಕಥೆ ಮುಗಿದ ಮೇಲೆ ಗೊಂದಲ ಕಾಡುತ್ತದೆ.
ಮೊದಲರ್ಧದ ಕಥೆ ವೇಗವಾಗಿ ಸಾಗಲ್ಲ
ಕನ್ನಡ ಚಿತ್ರರಂಗದ ಮಟ್ಟಿಗೆ ಭಿನ್ನ ಯತ್ನ, ಸುನಿ ಅವರ ಪ್ರಯತ್ನಕ್ಕೆ ಬಹುಪರಾಕ್ ಹೇಳಲೇ ಬೇಕು. ಅದೇ ತರಹ ಈ ರೀತಿಯ ಸವಾಲಿನ ಪಾತ್ರಗಳನ್ನು ಪೋಷಿಸಿರುವ ಕಿಟ್ಟಿ ಮತ್ತು ಮೇಘನಾ ಅವರಿಗೆ ಜೈ ಅನ್ನಲೇಬೇಕು. ಚಿತ್ರದ ಮೊದಲರ್ಧ ಪಾತ್ರಗಳ ಪರಿಚಯಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಕಾರಣ ವೇಗ ಕಡಿಮೆಯಾದಂತೆ ಭಾಸವಾಗುತ್ತದೆ.
ಪ್ರೇಕ್ಷಕರ ಗೊಂದಲ ಮುಗಿಯಲ್ಲ
ದ್ವಿತೀಯಾರ್ಧದಲ್ಲಿ ಮೂರೂ ಪಾತ್ರಗಳನ್ನು ಒಂದು ಟ್ರ್ಯಾಕ್ ಗೆ ತರುವಲ್ಲಿ ನಿರ್ದೇಶಕರ ಶ್ರಮ ಎದ್ದುಕಾಣುತ್ತದೆ. ಕೊನೆಕೊನೆಗೆ ಅವರು ಪ್ರೇಕ್ಷಕರಿಗೆ ಏನನ್ನು ಹೇಳಬೇಕೋ ಅದನ್ನು ಅಷ್ಟು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗಿಲ್ಲ. ಪ್ರೇಕ್ಷಕ ಗೊಂದಲದಲ್ಲೇ ಹೊರಬರಬೇಕಾಗುತ್ತದೆ.
ಮನತಣಿಸುವ ಬಿಜೆ ಭರತ್ ಸಂಗೀತ
ಶ್ರೀನಗರಕಿಟ್ಟಿ ಅವರು ಮೂರೂ ಶೇಡ್ ಗಳಿಗೂ ತಮ್ಮ ತನವನ್ನು ಧಾರೆ ಎರೆದಿದ್ದಾರೆ. ಮೇಘನಾ ರಾಜ್ ಸಹ ಅಷ್ಟೇ ಪ್ರೀತಿ ಮತ್ತು ಸ್ನೇಹ ಪಾತ್ರಗಳಲ್ಲಿ ಸಂಚರಿಸಿದ್ದಾರೆ. ಇನ್ನು ಚಿತ್ರದಲ್ಲಿನ ಹಾಡುಗಳ ಮೇಕಿಂಗ್ ಸೊಗಸಾಗಿದೆ. ಬಿ.ಜೆ.ಭರತ್ ಅವರ ಸಂಗೀತ ಮನ ತಣಿಸುತ್ತದೆ.
ಚಿತ್ರದ ಪ್ಲಸ್ ಪಾಯಿಂಟ್ ಗಳು
ಮನೋಹರ್ ಜೋಷಿ ಅವರ ಛಾಯಾಗ್ರಹಣವಂತೂ ಕಣ್ಣಿಗೆ ತಂಪೆರೆಯುತ್ತದೆ. ಸಿಕ್ಕಿರುವ ಅವಕಾಶದಲ್ಲಿ ಸುಕೃತಾ ವಾಗ್ಲೆ ಅವರದು ಗಮನಸೆಳೆಯುವ ಪಾತ್ರ. ಸ್ಪೆಷಲ್ ಸಾಂಗ್ ನಲ್ಲಿ ಭಾವನಾ ರಾವ್ ಕಣ್ಣುಕುಕ್ಕುತ್ತಾರೆ. ಅತಿಥಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಇದ್ದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲ್ಲ.
ಸೀದಾಸಾದಾ ಚಿತ್ರ ಇದಲ್ಲ
ಇನ್ನು ಸಂಭಾಷಣೆಯೂ ಪಾತ್ರಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಉತ್ತರ ಕರ್ನಾಟಕದ ಭಾಷೆಯ ಸೊಗಡು ಕೇಳಲು ಸೊಗಸು. ಒಟ್ಟಾರೆಯಾಗಿ ಇದೊಂದು ಭಿನ್ನ ಪ್ರಯೋಗ ಎನ್ನಬಹುದು. ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಸೀದಾಸಾದಾ ಚಿತ್ರಗಳಿಗೆ ಹೋಲಿಸಿದರೆ ಖಂಡಿತ ಹೊಸತನವಿದೆ.
ಪ್ರೇಕ್ಷಕನಿಗೆ ಬಲು ಸೂಕ್ಷ್ಮ ಮನಸ್ಥಿತಿಬೇಕು
ಚಿತ್ರದಲ್ಲಿ ಬಳಸಿರುವ ಬಣ್ಣಗಳು, ಅದಕ್ಕೆ ತಕ್ಕಂತೆ ಸಾಗುವ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಲು ಪ್ರೇಕ್ಷಕನಿಗೆ ಬಲು ಸೂಕ್ಷ್ಮ ಮನಸ್ಥಿತಿಬೇಕು. ಆದರೆ ಎಲ್ಲ ಪ್ರೇಕ್ಷಕರಿಂದಲೂ ಅದನ್ನು ನಿರೀಕ್ಷಿಸುವುದು ಸಾಧ್ಯವೂ ಅಲ್ಲ ಸಾಧುವೂ ಅಲ್ಲ ಅಲ್ಲವೇ?


Click it and Unblock the Notifications











