Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ
'ಪವರ್ ***' (2014) ಚಿತ್ರದ ಬಳಿಕ ಆಕ್ಷನ್ ಚಿತ್ರಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಪುನೀತ್ ರಾಜ್ ಕುಮಾರ್ ಈ ಚಿತ್ರದ ಮೂಲಕ ಮತ್ತೆ ಹಳೆ ಟ್ರ್ಯಾಕ್ ಗೆ ಮರಳಿದ್ದಾರೆ. ಆಕ್ಷನ್ ನಿರೀಕ್ಷಿಸುತ್ತಿದ್ದ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಆಕ್ಷನ್ ಧಮಾಕಾ ಚಿತ್ರವನ್ನೇ ಕೊಟ್ಟಿದ್ದಾರೆ ಪವನ್ ಒಡೆಯರ್.
ಚಿತ್ರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ಸಮಸ್ಯೆ, ಅಕ್ರಮ ಗಣಿಗಾರಿಕೆ ಇದ್ದರೂ ಅವೆಲ್ಲವೂ ಕೇವಲ ಕಾಲ್ಪನಿಕ ಅಷ್ಟೇ ಎಂಬುದು ಪ್ರೇಕ್ಷಕರ ಗಮನಕ್ಕಿರಲಿ. ಕರ್ನಾಟಕದ 'ವಿಕ್ರಮ ತೀರ್ಥ' ಎಂಬ ಹಳ್ಳಿಯ ಸುತ್ತ ಸುತ್ತುವ ಕಥೆ ಇದು. [ಪೃಥ್ವಿ ಚಿತ್ರ ವಿಮರ್ಶೆ]
ಸ್ವಲ್ಪ ಇದೇ ರೀತಿ ಹೋಲುವ ಪಾತ್ರವನ್ನು ಪುನೀತ್ ಅವರು 'ಪೃಥ್ವಿ' ಚಿತ್ರದಲ್ಲೇ ಮಾಡಿದ್ದಾರೆ. ಅದು ಬಳ್ಳಾರಿ ಅಕ್ರಮ ಗಣಿಗಾರಿಕೆಯ ಕಥೆಯಾದರೆ, ಇದು ಗಡಿಭಾಗದ ಸಮಸ್ಯೆ ಜೊತೆಗೆ ಅಕ್ರಮ ಗಣಿಗಾರಿಕೆಯ ಕಥಾವಸ್ತುವನ್ನು ಒಳಗೊಂಡಿದೆ.
ವಿಕ್ರಮ ತೀರ್ಥ ಹಳ್ಳಿ ವಿಶೇಷವೇನು?
ಕರ್ನಾಟಕದ ಗಡಿರೇಖೆಯನ್ನೇ ಅಳಿಸಿ ವಿಕ್ರಮ ತೀರ್ಥ ಹಳ್ಳಿ ಮಹಾರಾಷ್ಟ್ರದ ತೆಕ್ಕೆಗೆ ಸೇರಿದ್ದು ಹೇಗೆ? ಅದರ ಹಿಂದಿನ ವ್ಯಕ್ತಿ ಶಕ್ತಿಗಳು ಯಾವುವು? ಆ ಊರಿನ ಮಣ್ಣಿನಲ್ಲಿರುವ ವಿಶೇಷವಾದರೂ ಏನು? ರಣವಿಕ್ರಮನಿಗೂ ವಿಕ್ರಮ ತೀರ್ಥ ಹಳ್ಳಿಗೂ ಏನು ಸಂಬಂಧ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ರಣವಿಕ್ರಮ ಚಿತ್ರ.
ಆಕ್ಷನ್ ಗೆ ಸ್ವಲ್ಪ ಕಡಿವಾಣ ಹಾಕಬೇಕಿತ್ತು
ಆರಂಭದಲ್ಲಿ ಕಥೆ ನೈಸ್ ರೋಡಿನಲ್ಲಿ ಸಾಗಿದರೆ, ದ್ವಿತೀಯಾರ್ಧದಲ್ಲಿ ಶಿರಾಡಿ ಘಾಟ್ ನಲ್ಲಿ ಸಿಲುಕಿದ ಟ್ರಕ್ ನಂತಾಗಿದೆ. ಆಕ್ಷನ್ ಸನ್ನಿವೇಶಗಳಿಗೆ ಸ್ವಲ್ಪ ಕಡಿವಾಣ ಹಾಕಿದ್ದರೆ ಚೆನ್ನಾಗಿತ್ತು ಎನ್ನಿಸುತ್ತದೆ. ಸಂಭಾಷಣೆಯಲ್ಲಿನ ತಾಜಾತನ ಚಿತ್ರಕ್ಕೆ ಹೊಸ ಲವಲವಿಕೆ ತುಂಬಿದೆ ಎಂದು ಹೇಳಬಹುದು.
ಖಾಕಿ ಖದರ್ ನಲ್ಲಿ ಪುನೀತ್
ಪುನೀತ್ ರಾಜ್ ಕುಮಾರ್ ಅವರು ಖಾಕಿ ಖದರ್ ನಲ್ಲಿ ಮಿಂಚಿದ್ದಾರೆ. ಕರ್ನಾಟಕದ ಸರ್ಕಾರಿ ದಾಖಲೆಗಳಲ್ಲೇ ಇಲ್ಲದ 'ವಿಕ್ರಮತೀರ್ಥ' ಹಳ್ಳಿಯ ತನಿಖೆಗಾಗಿ ರಾಜ್ಯದ ಗೃಹ ಸಚಿವರು (ಗಿರೀಶ್ ಕಾರ್ನಾಡ್) ಇನ್ನೂ ಪರ್ಮನೆಂಟ್ ಆಗದ ಪೊಲೀಸ್ ಅಧಿಕಾರಿ ವಿಕ್ರಮ್ ರನ್ನು (ಪುನೀತ್) ರಹಸ್ಯವಾಗಿ ಕಳುಹಿಸುತ್ತಾರೆ. ಹೇಗೆ ವಿಕ್ರಮ್ ಆ 'ವಿಕ್ರಮತೀರ್ಥ' ಹಳ್ಳಿಗೆ ಮುಕ್ತಿ ಕಲ್ಪಿಸುತ್ತಾನೆ ಎಂಬುದೇ ಸಸ್ಪೆನ್ಸ್.
ಇಬ್ಬರು ನಾಯಕಿಯರಿಗೂ ಸಮಾನ ಅವಕಾಶ
ಚಿತ್ರದಲ್ಲಿ ಆದಾ ಶರ್ಮಾ ಮತ್ತು ಅಂಜಲಿ ಇಬ್ಬರು ನಾಯಕಿಯರಿದ್ದು ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ. ಮೊದಲರ್ಧದಲ್ಲಿ ಆದಾ ಶರ್ಮಾ ಫಿದಾ ಆದರೆ, ದ್ವಿತೀಯಾರ್ಧದಲ್ಲಿ ಅಂಜಲಿ ಗಮನಸೆಳೆಯುತ್ತಾರೆ.
ಭರ್ಜರಿ ಆಕ್ಷನ್ ಧಮಾಕಾ
ರವಿವರ್ಮಾ ಅವರ ಸಾಹಸ ಸಂಯೋಜನೆ ಭರ್ಜರಿಯಾಗಿ ಮೂಡಿಬಂದಿದೆ. ಸ್ವಾತಂತ್ರ್ಯ ಪೂರ್ವಕ್ಕೆ ಹೊರಳುವ ಕಥೆ ಹಾಗೂ ಸ್ವಾತಂತ್ರ್ಯಾನಂತರದ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ಬೆಸೆದಿದ್ದಾರೆ ಪವನ್ ಒಡೆಯರ್.
ಅದ್ದೂರಿತನದ ಚಿತ್ರ
ಚಿತ್ರದ ಹಾಡುಗಳ ಚಿತ್ರೀಕರಣ ಕಣ್ಣಿಗೆ ಹಿತಮಿತವಾಗಿ ಮೂಡಿಬಂದಿದೆ. ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಡ್ರಮ್ಸ್ ಸೌಂಡೇ ಹೆಚ್ಚಾದಂತಿದೆ. ವೈದಿ ಎಸ್ ಅವರ ಛಾಯಾಗ್ರಹಣ ಸೊಗಸಾಗಿದ್ದು, ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅದ್ದೂರಿತನಕ್ಕೆ ಈ ಚಿತ್ರ ಮತ್ತೊಂದು ಸಾಕ್ಷಿ.
ಆಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾ
ಚಿತ್ರದಲ್ಲಿ ಕಾಮಿಡಿ ಮಿಸ್ ಆಗಿರುವುದು ಎದ್ದುಕಾಣುವ ಅಂಶ. ಬ್ರಿಟೀಷ್ ಅಧಿಕಾರಿಯಾಗಿ ವಿಕ್ರಮ್ ಸಿಂಗ್, ಗೃಹಸಚಿವರಾಗಿ ಗಿರೀಶ್ ಕಾರ್ನಾಡ್, ಅವಿನಾಶ್ ಗಮನಸೆಳೆಯುವ ಪಾತ್ರಗಳು. ಒಟ್ಟಾರೆ ಆಕ್ಷನ್ ಪ್ರಿಯರಿಗೆ 'ರಣವಿಕ್ರಮ' ಹೇಳಿ ಮಾಡಿಸಿದ ಸಿನಿಮಾ.