Harikathe Alla Girikathe Review: 'ಹರಿ ಕಥೆ ಅಲ್ಲ ಗಿರಿ ಕಥೆ' ಹಾಸ್ಯವೇ ಎಲ್ಲ, ಭಾವುಕತೆ ತಾಕಲ್ಲ
ಸಿನಿಮಾ ನಿರ್ದೇಶಿಸುವ ಕನಸು ಹೊತ್ತು ಏನೇನೋ ಪಡಿಪಾಟಲು ಬಿದ್ದು ಅದನ್ನು ನನಸಾಗಿಸಿಕೊಳ್ಳುವ ಕತೆಯುಳ್ಳ ಸಿನಿಮಾಗಳು ಈ ಹಿಂದೆಯೂ ಕೆಲವು ಬಂದಿವೆ. 'ಹರಿ ಕತೆ ಅಲ್ಲ ಗಿರಿ ಕತೆ' ಸಿನಿಮಾ ಸಹ ಅದೇ ಕತೆಯನ್ನು ಹೊಂದಿದೆಯಾದರೂ ಇದು ತುಸು ಭಿನ್ನವಾಗಿ ನಿಲ್ಲುತ್ತದೆ.
ಕಳೆದ ವರ್ಷ ಬಿಡುಗಡೆ ಆಗಿ ಸಂಚಲನ ಮೂಡಿಸಿದ್ದ ತೆಲುಗಿನ ಯಶಸ್ವಿ ಚಿತ್ರ 'ಸಿನಿಮಾ ಬಂಡಿ'ಯಲ್ಲಿ ಸಿನಿಮಾ ಮೇಕಿಂಗ್ ಅನ್ನು ತಮಾಷೆಯಾಗಿ ತೋರಿಸಿ ಜೊತೆಗೆ ಭಾವುಕ ಟಚ್ ಒಂದನ್ನು ನೀಡಲಾಗಿತ್ತು. ಆದರೆ 'ಹರಿ ಕಥೆ ಅಲ್ಲ ಗಿರಿ ಕಥೆ'ಯಲ್ಲಿ ಸಿನಿಮಾ ನಿರ್ಮಾಣದ ಹಿಂದಿನ ಪಡಿಪಾಟಲನ್ನು ಹಾಸ್ಯಮಯವಾಗಿ ಪ್ರೆಸೆಂಟ್ ಮಾಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರಾದ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್.
ಸಿನಿಮಾದಲ್ಲಿ ಮೂವರು ಗಿರಿಗಳಿದ್ದಾರೆ. ನಿರ್ದೇಶಕ ಗಿರಿ, ವಿಲನ್ ಗಿರಿ ಮತ್ತು ನಾಯಕಿ 'ಗಿರಿ'ಜಾ. ಅಂತೆಯೇ ಸಿನಿಮಾದಲ್ಲಿ ಮೂರು ಭಾಗಗಳಿವೆ. ಪ್ರಾಮಾಣಿಕವಾಗಿ ಅಥವಾ ಸಂಪ್ರದಾಯಬದ್ಧ ಹಾದಿಯಲ್ಲಿ ಸಿನಿಮಾಕ್ಕಾಗಿ ನಿರ್ಮಾಪಕನ ಹುಡುಕಾಡಲು ಹೆಣಗುವ ಭಾಗ, ಅಡ್ಡದಾರಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಕಾಸು ಹೊಂದಿಸುವ ಭಾಗ ಹಾಗೂ ಕೊನೆಯದ್ದು ಸಿನಿಮಾ ನಿರ್ಮಾಣ ಮಾಡಿ ಕನಸು ಈಡೇರಿಸಿಕೊಳ್ಳುವ ಭಾಗ. ಮೂರರಲ್ಲಿ ಹೆಚ್ಚು ಮಜಾ ಕೊಡುವುದು ಮೊದಲೆರಡು ಭಾಗಗಳೇ.
ಮೂವರು ಗಿರಿಗಳು, ಮೂರು ಭಾಗಗಳು
ಸಿನಿಮಾದಲ್ಲಿನ ಮೂವರು ಗಿರಿಗಳಿಗೂ ಸಿನಿಮಾದ್ದೇ ಕನಸು. ಮೂವರೂ ಹಾಸ್ಯಮಯ ಸನ್ನಿವೇಷವೊಂದರಲ್ಲಿ ಭೇಟಿಯಾಗುತ್ತಾರೆ. ಆ ಮೂವರು ಗಿರಿಗಳೊಟ್ಟಿಗೆ ಇದ್ದ ಇನ್ನು ಕೆಲವರೆಲ್ಲ ಒಟ್ಟಾಗಿ ಒಂದು ತಂಡ ಮಾಡಿಕೊಂಡು ಕನಸು ನನಸು ಮಾಡಿಕೊಳ್ಳಲು ಹೊರಡುತ್ತಾರೆ. ನಿರ್ಮಾಪಕನ ಹುಡುಕುವುದು ಅಸಾಧ್ಯ ಎಂದು ಗೊತ್ತಾದಾಗ ಅಡ್ಡ ದಾರಿಯಲ್ಲಿ ಹಣ ಮಾಡಿ ಸಿನಿಮಾ ಮೇಲೆ ಹೂಡಲು ತಯಾರಾಗುತ್ತಾರೆ. ಅವರ ಈ ಅಡ್ಡದಾರಿಯಲ್ಲಿ ಅವರಿಗೆ ಎದಾಗುವ ಪೀಕಲಾಟಗಳು ನಗುವಿನ ಅಲೆ ಎಬ್ಬಿಸುತ್ತವೆ.
ಭಾವುಕ ದೃಶ್ಯಗಳು ಅಷ್ಟಾಗಿ ತಾಕವು
ಸಿನಿಮಾದ ಆರಂಭದಿಂದಲೂ ಹಾಸ್ಯದ್ದೇ ಮೇಲುಗೈ. ಅಲ್ಲಲ್ಲಿ ಒಮ್ಮೊಮ್ಮೆ ತಂದೆ-ಮಗನ ನಡುವಿನ ಭಾವುಕ ಸನ್ನಿವೇಶಗಳು ಬರುತ್ತವಾದರೂ ಅವು ತೀರಾ ಪ್ರಭಾವ ಬೀರಲು ವಿಫಲವಾಗುತ್ತವೆ. ಇದೇ ಕಾರಣಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಬರುವ ಭಾವುಕ ಸನ್ನಿವೇಶ ಸಹ ಪ್ರೇಕ್ಷಕರನ್ನು ಅಷ್ಟಾಗಿ ತಾಕದು. ಬದಲಿಗೆ ಸಿನಿಮಾ ಮುಗಿದ ಮೇಲೆ ಹಾಸ್ಯದ ಸನ್ನಿವೇಶಗಳೇ ಹೆಚ್ಚು ನೆನಪುಳಿಯುತ್ತವೆ.
ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕರು
ಸಿನಿಮಾ ಪೂರ್ಣವಾಗಿ ಹಾಸ್ಯಮಯವಾಗಿದೆ. ಡಬಲ್ ಮೀನಿಂಗ್ ಸಂಭಾಷಣೆ ಬಹುತೇಕ ಇಲ್ಲ ಎನ್ನಬಹುದು. ಸನ್ನಿವೇಶಗಳನ್ನು ಸೃಷ್ಟಿಸಿ, ಸಂಭಾಷಣೆ, ಕ್ಯಾಮೆರಾ ಆಂಗಲ್ ಬಳಸಿ, ತಮಾಷೆಮಯ ಪಾತ್ರಗಳನ್ನು ಎಳೆತಂದು ಹಾಸ್ಯವನ್ನು ಸೃಷ್ಟಿಸಿದ್ದಾರೆ. ರ್ಯಾಪರ್ ಹುಡುಗ, ಕೆಳಗಿನ ಮನೆ ಆಂಟಿ, ಸದಾ ಪ್ರಸಾರವಾಗುತ್ತಿರುವ ಧಾರಾವಾಹಿ, ಯೂಟ್ಯೂಬ್ ಸಂದರ್ಶಕಿ ಹೀಗೆ ಕೆಲವು ಕತೆಯ ಹೊರಗಿನ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕವೂ ನಗಿಸಿದ್ದಾರೆ. ಸಿನಿಮಾ ಬಗೆಗಿನ ಸಿನಿಮಾ ಆಗಿರುವ ಕಾರಣ ಕೆಲವು ಸಿನಿಮಾ ಮಂದಿಯೂ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್, ನಿರ್ಮಾಪಕ ಸಂದೇಶ್ ನಾಗರಾಜ್ ಇನ್ನೂ ಕೆಲವರು ಸಿನಿಮಾದಲ್ಲಿದ್ದಾರೆ. ಸಿನಿಮಾದಲ್ಲಿ ನಿಜವಾದ ನಿರ್ದೇಶಕ ರಿಷಬ್ ಶೆಟ್ಟಿ ಸಹ ಬಂದು ಹೋಗುತ್ತಾರೆ!
ರಿಷಬ್ ಶೆಟ್ಟಿ, ರಚನಾ ಇಂಧರ್ ನಟನೆ ಸೂಪರ್
ರಿಷಬ್ ಶೆಟ್ಟಿ ಅತ್ಯುತ್ಸಾಹದಿಂದ ಸಿನಿಮಾದಲ್ಲಿ ನಟಿಸಿದ್ದಾರೆ. ತಮಾಷೆಯ ಸನ್ನಿವೇಶಗಳಲ್ಲಿ ಅವರ ನಟನೆ ಚೆನ್ನಾಗಿದೆ. ರಚನಾ ಇಂಧರ್ ನಟನೆಯೂ ಸೂಪರ್. ಕ್ಯೂಟ್ ಆಗಿರುವ ಜೊತೆಗೆ ನಟನೆಯಲ್ಲೂ ಅವರು ಮಿಂಚಿದ್ದಾರೆ. ಹೊನ್ನವಳ್ಳಿ ಕೃಷ್ಣರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೊನ್ನವಳ್ಳಿ ಕೃಷ್ಣ ತಮ್ಮದೇ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪುತ್ರನ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಮಿಂಚಿದ್ದಾರೆ, ನಟಿ ತಪಸ್ವಿನಿಯದ್ದು ಸಹಜ ಅಭಿನಯ. ಯೋಗರಾಜ್ ಭಟ್ಟರು ಬರೆದಿರುವ 'ಬೇವರ್ಸಿ ಮನ್ಸಾ', ತ್ರಿಲೋಕ್ ತ್ರಿವಿಕ್ರಮ್ ಬರೆದಿರುವ 'ಜೂ ಮೋನಲಿಸಾ', 'ಬವರಾಚಿ' ಹಾಡುಗಳು ಚೆನ್ನಾಗಿವೆ. ವಾಸುಕಿ ವೈಭವ್ ಸಂಗೀತವೂ ಸೂಪರ್.


Click it and Unblock the Notifications











